ಉತ್ತರಕಾಶಿಯಲ್ಲಿರುವ ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣ ಕುತೇತಿದೇವಿ ದೇವಾಲಯ. ಪ್ರಸ್ತುತ ಈ ದೇವಾಲಯದ ಅರ್ಚಕರು 14 ನೇ ತಲೆಮಾರಿನವರಾಗಿದ್ದಾರೆ. ದೇವಾಲಯದೊಂದಿಗೆ ಒಂದು ಆಸಕ್ತಿದಾಯಕ ಕಥೆ ತಳಕುಹಾಕಿಕೊಂಡಿದೆ. ಅದೆನೆಂದರೆ, ಒಮ್ಮೆ ಕೋಟಾದ ರಾಜ ತನ್ನ ಹಣದ ಚೀಲವನ್ನು ಧಾರ್ಮಿಕ ತಾಣವಾದ ಗಂಗೋತ್ರಿಯಲ್ಲಿ ಕಳೆದುಕೊಂಡ. ಈ ವಿಷಯವನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೇ ತೊಳಲಾಡಿದ. ಕೊನೆಗೆ ಬೇಸರಗೊಂಡ ರಾಜನು ಉತ್ತರಕಾಶಿಗೆ ಬಂದು ಅಲ್ಲಿ ವಿಶ್ವನಾಥ ದೇವಾಲಯದಲ್ಲಿ ದೇವರ ಮುಂದೆ ತನ್ನ ನೋವನ್ನು ಹೇಳಿಕೊಂಡ. ತನ್ನ ಚೀಲವನ್ನು ಹುಡುಕಿಕೊಟ್ಟ ಯುವಕನಿಗೆ ಮಗಳನ್ನು ಮದುವೆ ಮಾಡಿಕೊಡುವುದಾಗಿ ಆರಿಕೆ ಮಾಡಿಕೊಂಡ. ತಕ್ಷಣ ಸಂಪೂರ್ಣ ಹಣವನ್ನು ಒಳಗೊಂಡ ಚೀಲ ದೇವಾಲಯದಲ್ಲಿ ಸಿಕ್ಕಿತು. ಇದು ರಾಜನಿಗೆ ಅತೀವ ಸಂತಸವನ್ನು ನೀಡಿತು. ಕೂಡಲೇ ರಾಜ ದೇವರ ಬಳಿಯೇ ಮಗಳಿಗೆ ಸೂಕ್ತ ವರನನ್ನು ಹುಡುಕಿಕೊಡು ಎಂದು ಆರಿಕೆ ಮಾಡಿಕೊಂಡ. ದೇವರು ಸೂಚಿಸಿದ ಯುವಕನೊಂದಿಗೆ ಮಗಳ ಮದುವೆಯನ್ನೂ ಮಾಡಿದ. ಇಷ್ಟಾದ ಮೇಲೆ ರಾಜನ ಮಗಳಿಗೆ ಈ ವಿವಾಹ ಇಷ್ಟವಾಗಲಿಲ್ಲ. ಹೀಗಾಗಿ ಕುಟುಂಬದವರು ಆಕೆಯನ್ನು ಕುಟುಂಬ ದೇವತೆಯಾದ ಕುತೇತಿದೇವಿ ಮಂದಿರಕ್ಕೆ ಕರೆದೊಯ್ದರು. ರಾಜಕುಮಾರಿ ಹಾಗು ಆಕೆಯ ಗಂಡ ಇಬ್ಬರೂ ಸೇರಿ ದೇವಿಯ ಬಳಿ ಇದಕ್ಕೊಂದು ಪರಿಹಾರ ಸೂಚಿಸುವಂತೆ ಬೇಡಿಕೊಂಡರು. ಇದಕ್ಕೆ ಪ್ರತಿಯಾಗಿ ದೇವಿಯು ರಾತ್ರಿ ಕನಸಿನಲ್ಲಿ ಬಂದು ಒಂದು ಮೈದಾನದಲ್ಲಿ ಕಲ್ಲಿನ ರೂಪದಲ್ಲಿ ತಾನಿರುವುದಾಗಿ ತಿಳಿಸಿದಳು. ಅದೇ ರೀತಿ ದಂಪತಿ ಮೈದಾನಕ್ಕೆ ಹೋಗಿ ನೋಡಿದಾಗ ಮೂರು ಕಲ್ಲುಗಳು ಅಲ್ಲಿ ಕಂಡವು. ಈ ಕಲ್ಲುಗಳು ಇವರನ್ನು ಆಶೀರ್ವದಿಸಿದವು. ಆ ನಂತರ ಇದೇ ಜಾಗದಲ್ಲಿ ಕುತೇತಿದೇವಿ ದೇವಾಲಯವೂ ನಿರ್ಮಾಣಗೊಂಡಿತು.


Click it and Unblock the Notifications