30,000 ಸಾವಿರ ನಾಗದೇವತೆಗಳನ್ನು ಹೊಂದಿರುವ ಅದ್ಭುತವಾದ ಒಂದು ದೇವಾಲಯವಿದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಾವುಗಳನ್ನು ಪೂಜಿಸುವ ಸಂಸ್ಕಾರವು ಪುರಾತನ ಕಾಲದಿಂದಲೂ ಇದೆ. ಹಾವುಗಳನ್ನು ನಾಗರಾಜ, ನಾಗ ದೇವತೆ ಎಂದೆಲ್ಲಾ ಕರೆದು ಆರಾಧಿಸುತ್ತೇವೆ. ಹೀಗೆ ನಾಗರಾಜನಿಗೆಂದೇ ಮುಡುಪಾಗಿರುವ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಕೂಡ ಒಂದು. ಇದೊಂದು ಪ್ರಸಿದ್ಧಿಯನ್ನು ಹೊಂದಿರುವ ನಾಗರಾಜನ ದೇವಾಲಯ. ಸಂತಾನ ಇಲ್ಲದೇ ಇರುವವರು ಹಾಗು ಅನೇಕ ಖಾಯಿಲೆಯಿಂದ ಬಳಲುತ್ತಿರುವವರಿಗೆ ಈ ದೇವಾಲಯ ಪರಿಷ್ಕಾರವಿದ್ದಂತೆ. ಹಾಗಾದರೆ ಈ ಮಹಿಮಾನ್ವಿತವಾದ ದೇವಾಲಯ ಎಲ್ಲಿದೆ? ಅದರ ವಿಶೇಷತೆ ಏನು? ಎಂಬುದರ ಬಗ್ಗೆ ಲೇಖನದ ಮೂಲಕ ತಿಳಿದುಕೊಳ್ಳೊಣ ಬನ್ನಿ.
1.ಕೇರಳದ ಅತಿ ದೊಡ್ಡ ದೇವಾಲಯವಿದು...
PC: Offical Site
ಕೇರಳ ರಾಜ್ಯದಲ್ಲಿನ ಮನ್ನಾರ್ಶಾಲ ಶ್ರೀ ನಾಗರಾಜ ದೇವಾಲಯವಿದೆ. ಇದೊಂದು ಪುರಾತನವಾದ ಹಾಗು ಅತ್ಯಂತ ಪ್ರಖ್ಯಾತವಾದ ಸರ್ಪ ದೇವಾಲಯ ಎಂದು ಪ್ರಸಿದ್ಧಿಯನ್ನು ಪಡೆದಿರುವ ಯಾತ್ರಾ ಸ್ಥಳ. ಮನ್ನಾರ ಶಾಲ ದೇವಾಲಯದ ಹಾದಿ ಮತ್ತು ಮರಗಳ ನಡುವೆ ಸುಮಾರು 30,000 ಕ್ಕೂ ಅಧಿಕ ಹಾವುಗಳ ಮೂರ್ತಿಗಳನ್ನು ಕಾಣಬಹುದು. ನಿಮಗೆ ಗೊತ್ತ ಕೇರಳದ ಅತಿ ದೊಡ್ಡದಾದ ದೇವಾಲಯವೇ ಈ ಮನ್ನಾರಶಾಲ ನಾಗರಾಜ ದೇವಾಲಯ. ಈ ಮಹಿಮಾನ್ವಿತವಾದ ದೇವಾಲಯಕ್ಕೆ ದಿನನಿತ್ಯ ನೂರಾರು ಜನರು ಭೇಟಿ ನೀಡುತ್ತಿರುತ್ತಾರೆ.
2.ಸಂತಾನ ಪ್ರಾಪ್ತಿಯಾಗುತ್ತದೆ
PC: Offical Site
ಈ ದೇವಾಲಯವು ಕೇರಳದ ಅತಿ ದೊಡ್ಡ ಹಾಗು ಪುರಾತನವಾದ ದೇವಾಲಯವಾಗಿದೆ. ಅನೇಕ ಮಂದಿ ಮಹಿಳೆಯರು ಸಂತಾನ ಪ್ರಾಪ್ತಿಗಾಗಿ ಇಲ್ಲಿನ ನಾಗದೇವತೆಗಳಿಗೆ ಪ್ರಾರ್ಥಿಸುತ್ತಾರೆ. ಇಲ್ಲಿಗೆ ಭೇಟಿ ನೀಡಿದ ಅನೇಕ ಮಂದಿಗಳಿಗೆ ಮಕ್ಕಳ ಭಾಗ್ಯವಾಗಿರುವ ನಿದರ್ಶನಗಳಿವೆಯಂತೆ. ಇದಕ್ಕೆ ಕೃತಜ್ಞತಾ ಫಲವಾಗಿ ಸಮಾರಂಭವನ್ನು ಆಚರಿಸುತ್ತಾರೆ. ಇಲ್ಲಿ ನೀಡುವ ಹರಿಶಿಣವು ಪ್ರಸಾದದಂತೆ ಸ್ವೀಕರಿಸುತ್ತಾರೆ. ಅಷ್ಟೇ ಅಲ್ಲ ಅನೇಕ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇಲ್ಲಿನ ನಾಗರಾಜನಿಗೆ ಇದೆ. ಹಾಗಾಗಿಯೇ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
3.ಸ್ಥಳ ಪುರಾಣ
PC: Offical Site
ಒಂದು ಸ್ಥಳಕ್ಕೆ ಸಂಬಂಧಿಸಿದ ದಂತಕಥೆಗಳ ಆಧಾರದ ಪ್ರಕಾರ ಇಲ್ಲಿನ ಸರ್ಪ ದೇವತೆಗಳ ಪ್ರಮುಖ ಸ್ಥಳ ಇದಾಗಿದ್ದು, ಪರಶುರಾಮನು ಈ ದೇವಾಲಯದ ಸೃಷ್ಟಿಕರ್ತ ಎಂದು ನಂಬಲಾಗಿದೆ. ಕ್ಷತ್ರೀಯರನ್ನು ಕೊಲ್ಲುವ ಪಾಪದಿಂದ ಮುಕ್ತಿ ಹೊಂದುವ ಸಲುವಾಗಿ ಒಬ್ಬ ಬ್ರಾಹ್ಮಣನನ್ನು ಕರೆದು ಒಂದು ಪವಿತ್ರವಾದ ಭೂಮಿಯನ್ನು ನೀಡಬೇಕು ಎಂದು ಅಲೋಚಿಸುತ್ತಾನೆ. ಶಿವನ ಆಶೀರ್ವಾದದಿಂದ ಪಡೆದಿದ್ದ ಕೊಡಲಿಯನ್ನು ಅವನು ಸಮುದ್ರಕ್ಕೆ ಎಸೆಯುತ್ತಾನೆ. ಇದರಿಂದ ಪರಶುರಾಮನು ಸಮುದ್ರದಿಂದ ಒಂದು ಪವಿತ್ರವಾದ ಭೂಮಿಯನ್ನು ಪಡೆಯುತ್ತಾನೆ. ಅಂದುಕೊಂಡ ಹಾಗೆ ಬ್ರಾಹ್ಮಣನಿಗೆ ಆ ಭೂಮಿಯನ್ನು ಉಡುಗೂರೆಯಾಗಿ ನೀಡುತ್ತಾನೆ.
4.ವಿಪರೀತ ಹಾವುಗಳು
PC: Offical Site
ಉಡುಗೂರೆಯಾಗಿ ಪಡೆದ ಭೂಮಿಯು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ಜನರು ಅಲ್ಲಿಂದ ಹೊರಬರಲು ಪ್ರಾರಂಭಿಸುತ್ತಾರೆ. ಅಷ್ಟೇ ಅಲ್ಲ ಅಲ್ಲಿ ಅನೇಕ ಹಾವುಗಳ ವಾಸಸ್ಥಾನವಾಗಿತ್ತು. ಹೀಗಾಗಿ ಹಾವುಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಸರ್ಪ ಪೂಜೆಯನ್ನು ಮಾಡಲು ಪ್ರಾರಂಭಿಸಿದರು. ನಾಗರಾಜನನ್ನು ತಪ್ಪಸ್ಸಿನಿಂದ ಮೆಚ್ಚಿಸುವ ಸಲುವಾಗಿ ಪರಶುರಾಮನು ತನ್ನ ಶಿಷ್ಯರೊಂದಿಗೆ ಕಾಡಿಗೆ ಹೊರಡುತ್ತಾನೆ. ಅವರು ಕೇರಳದ ದಕ್ಷಿಣ ಭಾಗದಲ್ಲಿರುವ ಕಡಲ ಬಳಿ ಸೂಕ್ತವಾದ ಸ್ಥಳ ಎಂದು ಅಂದಕೊಂಡು ನಾಗರಾಜನ ಪೂಜೆಯನ್ನು ಮಾಡಲು ಪ್ರಾರಂಭಿಸುತ್ತಾರೆ. ಆ ಪುಣ್ಯ ಸ್ಥಳವೇ ಮನ್ನಾರಶಾಲ ನಾಗರಾಜನ ದೇವಾಲಯ.
5.ನಾಗರಾಜನ ಆಶೀರ್ವಾದ
PC: Offical Site
ಪರಶುರಾಮನ ಪೂಜೆಯಿಂದ ತೃಪ್ತಿಗೊಂಡ ನಾಗರಾಜನು ಪರಶುರಾಮನಿಗೆ ದರ್ಶನವನ್ನು ನೀಡಿ, ಅಲ್ಲಿನ ಸರ್ಪಗಳೆಲ್ಲಾವನ್ನು ಅಲ್ಲಿಂದ ಹೊರಡುವಂತೆ ಆಜ್ಞೆಯನ್ನು ಹೊರಡಿಸುತ್ತಾನೆ. ಮನ್ನಾರ್ಶಾಲ ದೇವಾಲಯದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ಹಾಗು ಅಕ್ಟೋಬರ್ ತಿಂಗಳಲ್ಲಿ ವಿಜೃಂಬಣೆಯಿಂದ ಸಂಭ್ರಮವನ್ನು ಆಚರಿಸುತ್ತಾರೆ. ಅನೇಕ ರಾಜ್ಯದಿಂದ ಭಕ್ತರು ನಾಗದೇವತೆಗಳನ್ನು ಆರಾಧಿಸಲು ಈ ಪವಿತ್ರವಾದ ಮನ್ನಾರ್ಶಾಲ ನಾಗರಾಜನ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
6.ತಲುಪವ ಬಗೆ ಹೇಗೆ?
PC:YOUTUBE
ಸಮೀಪದ ಬಸ್ ನಿಲ್ದಾಣವೆಂದರೆ: ಹರಿಪಾದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ ಈ ದೇವಾಲಯ.
ಸಮೀಪದ ರೈಲ್ವೆ ನಿಲ್ದಾಣವೆಂದರೆ: ಹರಿಪಾದ ರೈಲ್ವೆ ನಿಲ್ದಾಣದಿಂದ 3 ಕಿ.ಮೀ, ಮಾವೆಲಿಕ್ಕರ್ ರೈಲ್ವೆ ನಿಲ್ದಾಣದಿಂದ 10 ಕಿ.ಮೀ, ಕಯಾಂಕುಲಂ ರೈಲ್ವೆ ನಿಲ್ದಾಣದಿಂದ 11 ಕಿ.ಮೀ ದೂರದಲ್ಲಿದೆ.
ವಿಮಾನ ಮಾರ್ಗದ ಮೂಲಕ: ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 115 ಕಿ.ಮೀ, ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 125 ಕಿ.ಮೀ ದೂರದಲ್ಲಿದೆ.