ಭೌಗೋಳಿಕವಾಗಿ ಭಾರತದ ದೊಡ್ಡ ರಾಜ್ಯಗಳ ಪೈಕಿ ಒಂದಾಗಿರುವ ಕರ್ನಾಟಕವು ತನ್ನಲ್ಲಿ ಅನೇಕ ದಟ್ಟ ಕಾಡುಗಳನ್ನು ಒಳಗೊಂಡಿದೆ. ಆಧುನಿಕತೆ ಬೆಳೆದಂತೆಲ್ಲ ಕಾಡುಗಳು ನಶಿಸುತ್ತಿರುವುದು ನಮಗೆಲ್ಲ ತಿಳಿದಿರುವ ಸಂಗತಿಯಾಗಿದೆ. ಆದರೆ ಕಾಡಿನಿಂದಲೆ ನಾಡು ಸಮೃದ್ಧವಾಗಿರುತ್ತದೆಂದು ಇಂದಿನ ಮಾನವಕುಲವು ಗೊತ್ತಿದ್ದು ಮರೆತಿರುವುದು ದುರದೃಷ್ಟಕರ. ಕಾಡುಗಳು ಕೇವಲ ಸಮೃದ್ಧವಾದ ಗಿಡ ಮರಗಳಿಗೆ ಮಾತ್ರವಲ್ಲದೆ ಹಲವು ಬಗೆಯ ಜೀವರಾಶಿಗಳಿಗೂ ಆಶ್ರಯ ತಾಣವಾಗಿದೆ. ವಿಷಕಾರಿಯಾದ ಇಂಗಾಲವನ್ನು ಹೀರುತ್ತಾ ಜೀವರಾಶಿಗಳಿಗೆ ಬದುಕಲು ಅನಿವಾರ್ಯವಾಗಿ ಬೇಕಾಗಿರುವ ಆಮ್ಲಜನಕವನ್ನು ಒದಗಿಸುತ್ತ, ಕಾಲಕಾಲಕ್ಕೆ ಸರಿಯಾಗಿ ಮಳೆ ಬರುವಲ್ಲಿ ಸಹಕರಿಸುತ್ತಾ ಅಲ್ಲದೆ ಮಳೆಯಿಂದುಂಟಾಗುವ ಪ್ರವಾಹಗಳನ್ನು ತಡೆಗಟ್ಟುವಲ್ಲಿ ಕಾಡಿನ ಪಾತ್ರವು ಅತಿ ಮಹತ್ತರವಾಗಿದೆ.
ಇಷ್ಟೊಂದು ಉಪಯೋಗ ಒದಗಿಸುವ ಕಾಡುಗಳನ್ನು ರಕ್ಷಿಸುವ ದೃಷ್ಟಿಯಿಂದ ಸರ್ಕಾರವು ಅವುಗಳನ್ನು ಅಭಯಧಾಮಗಳಾಗಿ ಘೋಷಿಸಿವೆ. ಇಂದಿನ ಈ ಲೇಖನದಲ್ಲಿ ಕರ್ನಾಟಕದಲ್ಲಿ ಕಂಡುಬರುವ ಕೆಲವು ದೊಡ್ಡ ವನ್ಯಜೀವಿ ಧಾಮಗಳ ಕುರಿತು ತಿಳಿಯಿರಿ. ಅಷ್ಟೆ ಅಲ್ಲ ರಜಾ ಸಮಯದಲ್ಲಿ ಈ ಧಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಹಜ ಪ್ರಕೃತಿ ಸೌಂದರ್ಯದ ಅನುಭವವನ್ನು ಪಡೆಯಿರಿ.

ದಾಂಡೇಲಿ ಅಭಯಾರಣ್ಯ:
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ಅಭಯಾರಣ್ಯವು ಅಣಶಿ ರಾಷ್ಟ್ರೀಯ ಉದ್ಯಾನದೊಂದಿಗೆ ಸೇರಿ ಸುಮಾರು 866.41 ಚ.ಕಿ.ಮೀ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಒಂದು ಅಭಯಾರಣ್ಯವನ್ನು ಅಣಶಿ ರಾಷ್ಟ್ರೀಯ ಹುಲಿ ಮೀಸಲು ಪ್ರದೇಶವನ್ನಾಗಿ 2006 ರಲ್ಲಿ ಘೋಷಿಸಲಾಗಿದೆ. ಇಲ್ಲಿ ಬಂಗಾಳ ಹುಲಿಗಳು, ಬ್ಲ್ಯಾಕ್ ಪ್ಯಾಂಥರ್ ಹಾಗು ಆನೆಗಳನ್ನು ಕಾಣಬಹುದು. ಅಲ್ಲದೆ ಈ ಪ್ರದೇಶದಲ್ಲಿ ಹರಿದಿರುವ ಕಾಳಿ ನದಿಯು ಪ್ರದೇಶದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಅಲ್ಲದೆ ಹಲವು ರಿಸಾರ್ಟುಗಳು ಈ ಪ್ರದೇಶದಲ್ಲಿ ಲಭ್ಯವಿದ್ದು ಪ್ರವಾಸಿಗರಿಗಾಗಿ ವಿವಿಧ ಸಾಹಸಮಯ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತದೆ.
ಚಿತ್ರಕೃಪೆ: Rute Martins of Leoa's Photography

ದಾಂಡೇಲಿ ಅಭಯಾರಣ್ಯ:
ಅಣಶಿ ರಾಷ್ಟ್ರೀಯ ಉದ್ಯಾನದಲ್ಲಿ ಕಂಡುಬರುವ ಕ್ಯಾಂಡಿ ಕಾರ್ನ್ ಎಂಬ ವಿರಳವಾದ ಔಷಧೀಯ ಗಿಡ.
ಚಿತ್ರಕೃಪೆ: gfdl

ಬಿಳಿಗಿರಿ ರಂಗನ ಬೆಟ್ಟ:
ಕರ್ನಾಟಕದ ಆಗ್ನೇಯ ದಿಕ್ಕಿನಲ್ಲಿರುವ ಈ ಅಭಯಾರಣ್ಯವು ಮೈಸೂರು ನಗರದಿಂದ ಸುಮಾರು 95 ಕಿ.ಮೀ ಗಳ ಅಂತರದಲ್ಲಿದೆ. 27 ಜೂನ್ 1974 ರಲ್ಲಿ ಸ್ಥಾಪಿಸಲಾದ ಈ ಅಭಯಾರಣ್ಯವನ್ನು ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ ಅಭಯಾರಣ್ಯವೆಂದು ಕರೆಯಲಾಗುತ್ತದೆ. 540 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಅಭಯಾರಣ್ಯದಲ್ಲಿ ಪ್ರಮುಖವಾಗಿ ಆನೆಗಳು, ಕಾಡೆತ್ತುಗಳು, ಚಿರತೆ, ಬೊಗಳುವ ಜಿಂಕೆ ಮುಂತಾದ 26 ಬಗೆಯ ಸಸ್ತನಿಗಳನ್ನು ಕಾಣಬಹುದು.
ಚಿತ್ರಕೃಪೆ: Dineshkannambadi

ಕಾವೇರಿ ವನ್ಯಜೀವಿಧಾಮ:
ಕರ್ನಾಟಕದ ಮಂಡ್ಯ, ಚಾಮರಾಜನಗರ ಹಾಗು ರಾಮನಗರಗಳಲ್ಲಿ ಹರಡಿದೆ ಕಾವೇರಿ ವನ್ಯಜೀವಿಧಾಮ. 526 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಅಭಯಾರಣ್ಯವು ಸ್ಥಾಪಿತವಾಗಿದ್ದು 1987 ರಲ್ಲಿ. ವಿವಿಧ ಬಗೆಯ ಗಿಡ ಮರಗಳು ಹಾಗು ವೈವಿಧ್ಯಮಯ ಪ್ರಾಣಿ ಪಕ್ಷಿಗಳನ್ನು ಇಲ್ಲಿ ಕಾಣಬಹುದು.
ಚಿತ್ರಕೃಪೆ: Chinmayisk

ಭದ್ರಾ ವನ್ಯಜೀವಿ ಧಾಮ:
ಇದೊಂದು ರಕ್ಷಿತ ಹುಲಿ ಮೀಸಲು ಅಭಯಾರಣ್ಯವಾಗಿದ್ದು, ಚಿಕ್ಕಮಗಳೂರು ಪಟ್ಟಣದ ವಾಯವ್ಯ ದಿಕ್ಕಿಗೆ ಸುಮಾರು 38 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಧಾಮವು ದಿನ ಪ್ರವಾಸಗಳಿಗಾಗಿ ಹೇಳಿಮಾಡಿಸಿದ ತಾಣವಾಗಿದೆ. ಇಲ್ಲಿರುವ ಹೆಬ್ಬೆ ಗಿರಿ ಎಂಬ ಶಿಖರವು ಪ್ರದೇಶದ ಅತ್ಯಂತ ಎತ್ತರದ ಶೃಂಗವಾಗಿದ್ದು ಸಮುದ್ರ ಮಟ್ಟದಿಂದ 6,152 ಅಡಿಗಳಷ್ಟು ಎತ್ತರದಲ್ಲಿದೆ. ಈ ಅಭಯಾರಣ್ಯವನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು ಒಂದು ಲಕ್ಕವಳ್ಳಿ-ಮುತ್ತೊಡಿ ಹಾಗು ಇನ್ನೊಂದು ಬಾಬಾ ಬುಡನ್ ಗಿರಿ. ಇದರ ಒಟ್ಟು ವ್ಯಾಪ್ತಿ 490 ಚ.ಕಿ.ಮೀ
ಚಿತ್ರಕೃಪೆ: Dineshkannambadi

ಶರಾವತಿ ಕಣಿವೆ ವನ್ಯಜೀವಿ ಧಾಮ:
ಕರ್ನಾಟಕದಲ್ಲಿ ಹರಿಯುವ ಶರಾವತಿ ನದಿಯ ಒಂದು ಭಾಗವನ್ನು ವನ್ಯಜೀವಿ ಧಾಮವಾಗಿ 20 ಏಪ್ರಿಲ್ 1972 ರಲ್ಲಿ ಘೋಷಿಸಲಾಗಿದೆ. ಸುಮಾರು 431 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಅಭಯಾರಣ್ಯವು ಪ್ರಸಿದ್ಧ ಲಿಂಗನಮಕ್ಕಿ ಜಲಾಶಯವನ್ನೂ ಸಹ ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ಈ ಅಭಯಾರಣ್ಯವು ದಟ್ಟ ಹಸಿರು, ಅರೆ ಹಸಿರು ಹಾಗು ಎಲೆ ಉದುರುವ ಕಾಡುಗಳನ್ನು ಒಳಗೊಂಡಿದೆ. ಇಲ್ಲಿ ಪ್ರಮುಖವಾಗಿ ಸಿಂಹದಂತೆ ಬಾಲವುಳ್ಳ ಮಂಗ, ಹುಲಿ, ಚಿರತೆ, ಬೊಗಳುವ ಜಿಂಕೆ, ಕಾಡು ಹಂದಿಯಂತಹ ವಿವಿಧ ಪ್ರಾಣಿ ಹಾಗು ಪಕ್ಷಿ ಪ್ರಬೇಧಗಳನ್ನು ಒಳಗೊಂಡಿದೆ.
ಚಿತ್ರಕೃಪೆ


Click it and Unblock the Notifications


















