Search
  • Follow NativePlanet
Share
» »ಭಾರತದ ಏಳು ಪವಿತ್ರ ನದಿಗಳ ಪ್ರವಾಸ

ಭಾರತದ ಏಳು ಪವಿತ್ರ ನದಿಗಳ ಪ್ರವಾಸ

By Vijay

ಸನಾತನ ಹಿಂದು ಧರ್ಮದಲ್ಲಿ ನದಿಗಳಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ನಂಬಿಕೆಯ ಪ್ರಕಾರ, ತನ್ನ ಜೀವಿತಾವಧಿಯಲ್ಲಿ ಮನುಷ್ಯನು ಮಾಡಿದ ಹಲವಾರು ಪಾಪ ಕರ್ಮಗಳನ್ನು ಅರಿತು ಪಶ್ಚಾತಾಪ ಪಟ್ಟು ಕೆಲವು ನದಿಗಳಲ್ಲಿ ಪುಣ್ಯ ಸ್ನಾನ ಮಾಡುವುದರ ಮೂಲಕ ಪರಿಹರಿಸಿಕೊಳ್ಳಬಹುದಾಗಿದೆ. ಇನ್ನೂ ಕೆಲವು ನದಿಗಳಲ್ಲಿ ತೀರಿ ಹೋದ ಮನುಷ್ಯನ ಅಂತ್ಯ ಸಂಸ್ಕಾರದ ನಂತರ ಅಸ್ಥಿಗಳನ್ನು ವಿಸರ್ಜಿಸುವುದರ ಮೂಲಕ ಆತ ಮೋಕ್ಷವನ್ನು ಪಡೆಯಬಹುದು. ಅಷ್ಟೊಂದು ಪವಿತ್ರಮಯವಾಗಿದೆ ಈ ನದಿಗಳು. ಈ ರೀತಿಯಾಗಿ ಧಾರ್ಮಿಕ ಶೃದ್ಧೆಯುಳ್ಳ ಭಕ್ತಾದಿಗಳಿಗೆ ಭಾರತದ ಈ ಏಳು ಪವಿತ್ರ ನದಿಗಳ ದರ್ಶನ ಒಂದು ಪ್ರಮುಖ ಧಾರ್ಮಿಕ ಯಾತ್ರೆಯಾಗಿದೆ.

ಕೇವಲ ಪ್ರಮುಖ ಏಳು ನದಿಗಳಲ್ಲದೆ ಇತರೆ ಪವಿತ್ರ ನದಿಗಳನ್ನು ಭಾರತದಲ್ಲಿ ಕಾಣಬಹುದು. ಧಾರ್ಮಿಕ ದೃಷ್ಟಿಯಿಂದ ಹೊರತಾಗಿ ನದಿಗಳು ಮನುಷ್ಯನ ಬದುಕಿಗೆ ಜೀವನಾಧಾರವಾಗಿದೆ. ಭೂಮಂಡಲವು 70 ಪ್ರತಿಶತ ನೀರು ಹಾಗು 30 ಪ್ರತಿಶತದಷ್ಟು ಭೂಮಿಯನ್ನು ಹೊಂದಿದ್ದರೂ, ಆ 70 ಪ್ರತಿಶತ ನೀರಿನಲ್ಲಿ ಕೇವಲ ಒಂದು ಪ್ರತಿಶತದಷ್ಟು ನೀರು ಮಾತ್ರ ಬಳಸಲು ಯೋಗ್ಯವಾಗಿದೆ ಎಂದರೆ ದಿಗ್ಭ್ರಾಂತಿಯಾಗದೆ ಇರಲಾರದು. ಆ ಒಂದು ಪ್ರತಿಶತ ನೀರು ದೊರೆಯುವುದೆ ನದಿಗಳು, ಕೆರೆಗಳು ಹಾಗು ನೀರಿನ ತೊರೆಗಳ ಮೂಲಕ. ಈ ನಿಟ್ಟಿನಲ್ಲಿ ನಾವು ನದಿಗಳ ನೀರನ್ನು ಕಲುಷಿತಗೊಳಿಸದೆ ಯೋಗ್ಯವಾಗಿ ಬಳಸಬೇಕಾಗಿದೆ. ಈ ಲೇಖನವು ಭಾರತದಲ್ಲಿ ಪೂಜಿಸಲ್ಪಡುವ ಪವಿತ್ರ ನದಿಗಳ ಪರಿಚಯವನ್ನು ಮಾಡಿಸುತ್ತದೆ.

ಗಂಗಾ:

ಗಂಗಾ:

ಭಾರತದ ಬೃಹತ್ ಹಾಗು ಅಷ್ಟೆ ಪವಿತ್ರವಾಗಿದೆ ಗಂಗಾ ನದಿ. ಮೃತ್ಯು ಸಮಯದಲ್ಲಿ ಗಂಗಾ ಸೇವನೆಯಿಂದ ಮನುಷ್ಯ ಮೋಕ್ಷ ಹೊಂದುತ್ತಾನೆ ಎಂಬ ಅಚಲವಾದ ನಂಬಿಕೆಯಿದೆ ಹಿಂದು ಧರ್ಮದಲ್ಲಿ. ಪಶ್ಚಿಮ ಹಿಮಾಲಯದಲ್ಲಿ ಉದ್ಭವವಾಗುವ ಗಂಗೆಯು ಉತ್ತರ ಭಾರತದಲ್ಲಿ ಹರಿಯುತ್ತ ಕೊನೆಗೆ ಬಾಂಗ್ಲಾ ದೇಶದ ಮೂಲಕ ಬಂಗಾಳ ಕೊಲ್ಲಿಯಲ್ಲಿ ಸಮಾಗಮವಾಗುತ್ತದೆ. ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ಗಂಗಾ, ಜಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮವನ್ನು ಕಾಣಬಹುದು. ಈ ಸಂಗಮವು ಪವಿತ್ರ ಧಾಮವಾಗಿದ್ದು ಪ್ರತಿ 12 ವರ್ಷಗಳಿಗೊಮ್ಮೆ ಜರುಗುವ ವಿಶ್ವ ವಿಖ್ಯಾತ ಕುಂಭ ಮೇಳದ ಬಹು ಮುಖ್ಯ ತಾಣವಾಗಿದೆ.

ಚಿತ್ರಕೃಪೆ: Puffino

ಯಮುನಾ:

ಯಮುನಾ:

ಉತ್ತರಾಖಂಡ್ ರಾಜ್ಯದ ಯಮುನೋತ್ರಿ ಹಿಮನದಿಯಿಂದ ಉದ್ಭವಿಸುವ ಈ ಜಮುನಾ ಎಂತಲೂ ಕರೆಯಲ್ಪಡುವ ಈ ನದಿಯು ಮೂಲತಃ ಗಂಗೆಯ ಉಪನದಿಯಾಗಿದೆ. ಒಟ್ಟಾರೆ 1376 ಕಿ.ಮೀ ಉದ್ದವನ್ನು ಈ ನದಿ ಕ್ರಮಿಸುತ್ತದೆ. ಈ ನದಿ ದೇವತೆ ಯಮುನೆಯನ್ನು ಯಮಿ ಎಂದು ಕರೆಯಲಾಗುತ್ತದೆ. ಪುರಾಣದ ಪ್ರಕಾರ, ಈಕೆಯು ಮರಣ ದೇವತೆ ಯಮನ ಸಹೋದರಿಯಾಗಿದ್ದು, ಸೂರ್ಯ ದೇವನ ಮಗಳಾಗಿದ್ದಾಳೆ.

ಚಿತ್ರಕೃಪೆ: Ichattopadhyaya

ಗೋದಾವರಿ:

ಗೋದಾವರಿ:

ಗೋದಾವರಿಯು ಭಾರತದ ದಕ್ಷಿಣ ಮಧ್ಯ ಭಾಗದಲ್ಲಿರುವ ಒಂದು ಪವಿತ್ರ ನದಿಯಾಗಿದೆ. ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ತ್ರಯಂಬಕೇಶ್ವರದಲ್ಲಿ ಉಗಮಗೊಳ್ಳುವ ಈ ನದಿಯು ಆಂಧ್ರ ಪ್ರದೇಶದ ಮೂಲಕ ಬಂಗಾಳ ಕೊಲ್ಲಿಯಲ್ಲಿ ಸಮಾಗಮವಾಗುತ್ತದೆ. ಇದರ ಒಟ್ಟಾರೆ ಉದ್ದ 1465 ಕಿ.ಮೀ. ಒಂದೊಮ್ಮೆ ಗೌತಮ ಮುನಿಯು ತ್ರಯಂಬಕೇಶ್ವರದಲ್ಲಿ ವಾಸಿಸುತ್ತಿದ್ದ. ಜೀವನ ನಡೆಸಲು ಒಂದು ಗುಡಾರದಲ್ಲಿ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ. ಹೀಗಿರುವಾಗ ಒಮ್ಮೆ ಒಂದು ಗೋವು ಆ ಗುಡಾರ ಹೊಕ್ಕಿ ಅಕ್ಕಿಯನ್ನು ತಿನ್ನಹತ್ತಿತು. ಇದನ್ನು ಕಂಡ ಮುನಿಯು ಆ ಗೋವನ್ನು ಓಡಿಸಲೆಂದು ದರ್ಭ ಹುಲ್ಲನ್ನು ಉಪಯೋಗಿಸಿದ. ಅದರಿಂದ ಆ ಗೋವು ಅಲ್ಲೆ ಮರಣಿಸಿತು. ಇದರಿಂದ ಗೋಹತ್ಯಾ ಪಾಪಕ್ಕೆ ತುತ್ತಾದ ಮುನಿಯು ಅದರ ಪರಿಹಾರಾರ್ಥವಾಗಿ ಶಿವನ ಕುರಿತು ತಪಸ್ಸು ಆಚರಿಸಿದ. ತದನಂತರ ಪ್ರಸನ್ನನಾದ ಶಿವನು ತ್ರಯಂಬಕನಾಗಿ ಗಂಗೆಯನ್ನು ಇಲ್ಲಿ ಕರೆತಂದ. ಈ ರೀತಿಯಾಗಿ ಈ ನದಿಯು ಧಾರ್ಮಿಕ ಮಹತ್ವವನ್ನು ಪಡೆದಿದೆ. ಇದನ್ನು ಗೌತಮಿ ಎಂತಲೂ ಕರೆಯಲಾಗುತ್ತದೆ.

ಚಿತ್ರಕೃಪೆ: Adityamadhav83

ಸರಸ್ವತಿ:

ಸರಸ್ವತಿ:

ಪುರಾತನ ಸಂಸ್ಕೃತ ಲೇಕಹಗಳಲ್ಲಿ ಉಲ್ಲೇಖಿತವಾದ ಸರಸ್ವತಿ ನದಿಯು ಒಂದು ಪ್ರಮುಖ ಋಗ್ವೇದ ನದಿಯಾಗಿದೆ. ಋಗ್ವೇದದಲ್ಲಿ ಸರಸ್ವತಿ ನದಿಯು ಯಮುನೆಯ ಪೂರ್ವಕ್ಕೆ ಹಾಗು ಸಟ್ಲೆಜ್ ನದಿಯ ಪಶ್ಚಿಮಕ್ಕೆ ಹರಿಯುತ್ತಿತ್ತೆಂದು ಉಲ್ಲೇಖಿಸಲಾಗಿದೆ. ನಂತರ ಮಹಾಭಾರತ ಹಾಗು ವೇದ ಗ್ರಂಥಗಳಾದ ತಾಂಡ್ಯ, ಜೈಮಿನಿಯ ಬ್ರಹ್ಮನಸಗಳಲ್ಲಿ ಈ ನದಿಯು ಮರುಭೂಮಿಯಲ್ಲಿ ಒಣಗಿ ಹೋಯಿತೆಂದು ಉಲ್ಲೇಖಿಸಲಾಗಿದೆ. ಪ್ರಸ್ತುತ ಭಾರತ ಹಾಗು ಪಾಕಿಸ್ತಾನಗಳ ಮಧ್ಯೆ ಆಗಾಗ ಮರುಕಳಿಸುವ ಘಗ್ಗರ್-ಹಕ್ರಾ ನದಿಯನ್ನು ಅನೇಕ ಪಂಡಿತರು ಹಾಗು ವಿದ್ವಾಂಸರು ಸರಸ್ವತಿ ನದಿಯಾಗಿರಬಹುದೆಂದು ಗುರುತಿಸಿದ್ದಾರೆ. ಚಿತ್ರದಲ್ಲಿ ಕಾಣುತ್ತಿರುವುದು ಘಗ್ಗರ್-ಹಕ್ರಾ ನದಿ.

ನರ್ಮದಾ:

ನರ್ಮದಾ:

ರೇವಾ ಎಂತಲೂ ಕರೆಯಲ್ಪಡುವ ನರ್ಮದಾ ನದಿಯು ಭಾರತ ಉಪಖಂಡದ ಐದನೆಯ ಉದ್ದನೆಯ ನದಿಯಾಗಿದೆ. ಈ ಪವಿತ್ರ ನದಿಯು ಮಧ್ಯ ಪ್ರದೇಶ ರಾಜ್ಯದ "ಜೀವನಾಡಿ" ಯೂ ಆಗಿದೆ. ಇದರ ಒಟ್ಟಾರೆ ಉದ್ದ 1312 ಕಿ.ಮೀ. ದಂತಕಥೆಯ ಪ್ರಕಾರ, ಲಕ್ಷಾಂತರ ಜನರು ತಮ್ಮ ಪಾಪ ಕರ್ಮಗಳನ್ನು ತೊಳೆಯಲು ಗಂಗೆಯ ಸ್ನಾನ ಮಾಡುವುದರಿಂದ ಗಂಗೆಯು ಕಲುಷಿತಗೊಂಡು ಕಪ್ಪು ಬಣ್ಣದ ಆಕಳದ ರೂಪವನ್ನು ತಳೆದು ತನ್ನನ್ನು ತಾನು ಶುದ್ಧಗೊಳಿಸಿಕೊಳ್ಳಲು ನರ್ಮದಾ ನದಿಯ ಸಹಾಯವನ್ನು ಪಡೆಯುತ್ತಾಳೆ. ಇದು ಪಂಚ ಪವಿತ್ರ ನದಿಗಳ ಪೈಕಿ ಒಂದಾಗಿದೆ.

ಸಿಂಧು:

ಸಿಂಧು:

ಟಿಬೆಟ್ ಪ್ರಸ್ತಭೂಮಿಯ ಮಾನಸಸರೋವರದ ಬಳಿ ಉಗಮವಾಗುವ ಈ ಪವಿತ್ರ ಸಿಂಧು ನದಿಯು ಪಾಕಿಸ್ತಾನ, ಟಿಬೆಟ್ ಹಾಗು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಹರಿಯುತ್ತದೆ. ಇದರ ಒಟ್ಟಾರೆ ಉದ್ದ 3180 ಕಿ.ಮೀ. ಇದನ್ನೆ ಪ್ರಸ್ತುತ ಇಂಡಸ್ ನದಿಯೆಂದು ಕರೆಯಲಾಗುತ್ತಿದ್ದು ಹಿಂದು ಧರ್ಮದ ಪ್ರಕಾರ ಇದೊಂದು ಪವಿತ್ರ ನದಿಯಾಗಿದೆ. ಝನ್ಸ್ಕಾರ್ ಹಾಗು ಇಂಡಸ್ ನದಿಗಳ ಸಂಗಮದ ಚಿತ್ರ.

ಚಿತ್ರಕೃಪೆ: Deeptrivia

ಕಾವೇರಿ:

ಕಾವೇರಿ:

ಕರ್ನಾಟಕ ರಾಜ್ಯದ ಜೀವನದಿಯೆ ಕಾವೇರಿ. ಕೊಡಗಿನ ತಲಕಾವೇರಿಯಲ್ಲಿ ಉಗಮವಾಗುವ ಈ ಪವಿತ್ರ ನದಿಯು ಕರ್ನಾಟಕ ತಮಿಳುನಾಡಿನ ಮೂಲಕ ಹರಿಯುತ್ತ ಕೊನೆಯಲ್ಲಿ ಬಂಗಾಳ ಕೊಲ್ಲಿಯಲ್ಲಿ ಸಮಾಗಮವಾಗುತ್ತದೆ. ಈ ನದಿ ತೀರದಗುಂಟ ಅನೇಕ ಪ್ರಖ್ಯಾತ ಧಾರ್ಮಿಕ ಕ್ಷೇತ್ರಗಳಿವೆ.

ಚಿತ್ರಕೃಪೆ: Rayabhari

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+