ಕಾವೇರಿಯ ಒಂದು ಶಾಖೆಯಾದ ವೆಟ್ಟಾರ್ ನದಿ ತೀರದಲ್ಲಿರುವ ಈ ದೇವಸ್ಥಾನವು ಗರ್ಭರಕ್ಷಾಂಬಿಕೈ ದೇವಸ್ಥಾನ ಎಂದೇ ಪ್ರಸಿದ್ಧಿಯಾಗಿದೆ. ಈ ದೇವತೆ ಗರ್ಭರಕ್ಷಾದೇವತೆಯಾಗಿದ್ದು ಗರ್ಭಿಣಿ ಮತ್ತು ಮಗುವಿನ ರಕ್ಷಕ ದೇವತೆಯಾಗಿದ್ದಾಳೆ. ಹಾಗು ಸಂತಾನ ವರನೀಡುವ ದೇವರೆಂದೇ ಖ್ಯಾತಿ ಪಡೆದಿದೆ. ಇಲ್ಲಿನ ಮೂಲದೇವರು ಶಿವನಾಗಿದ್ದು ಮುಲ್ಲೈವನನಾಥರ್ ಎಂದು ಕರೆಯಲ್ಪಡುತ್ತಾರೆ. ಅಂದರೆ ಮಲ್ಲಿಗೆ ಕಾಡಿನ ದೇವರು ಎಂದರ್ಥ ಬರುತ್ತದೆ.
ಈ ದೇವಸ್ಥಾನವು ಬಹಳ ದೊಡ್ಡದಾಗಿದ್ದು ಒಂದು ಎಕರೆಯಷ್ಟು ವಿಸ್ತೀರ್ಣದಲ್ಲಿ ವ್ಯಾಪಿಸಿದೆ. ದೇವಸ್ಥಾನದ ದ್ವಾರವು ಆಕರ್ಷಕವಾಗಿದ್ದು, ಭವ್ಯ ಗೋಪುರವನ್ನೊಳಗೊಂಡಿದೆ. ದೇಗುಲದ ಎದುರಿಗೆ ಪುಷ್ಕರಣಿಯನ್ನು ಕಾಣಬಹುದು. ದೇವಸ್ಥಾನದ ಆವರಣದ ಗೋಡೆಯ ಮೇಲೆ ಋಷಿ ನಿರ್ಧುರ ಹಾಗು ಅವನ ಪತ್ನಿ ವೇದಿಕಾಳ ಕಥೆಯನ್ನು ಹೇಳುವ ಕೆತ್ತನೆಯನ್ನು ಕಾಣಬಹುದು.
ಅದೇನೆಂದರೆ ಪುರಾಣಕಾಲದ ಋಷಿಮುನಿ ನಿರ್ಧುರ ಮತ್ತು ಪತ್ನಿ ವೇದಿಕಾ, ಇಬ್ಬರೂ ಪಾರ್ವತೀದೇವಿಯಿಂದ ಶಾಪವಿಮುಕ್ತರಾದರೆಂದು ತಿಳಿಯುತ್ತದೆ (ಊರ್ಧ್ವಪಾದವೆಂಬ ಮುನಿಯಿಂದ ಶಾಪ ಪಡೆದಿರುತ್ತಾರೆ). ಭಾರತದ ಎಲ್ಲೆಡೆಯಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಸಾಮಾನ್ಯವಾಗಿ ವಾರಾಂತ್ಯಗಳಲ್ಲಿ ಇದು ಜನಸಂದಣಿಯಿಂದ ಕೂಡಿರುತ್ತದೆ.