ವೇದವ್ಯಾಸ್ ಎಂಬ ಸ್ಥಳವು ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುತ್ತಿದೆ. ಈ ನಯನ ಮನೋಹರವಾದ ಸ್ಥಳವು ತೀರ್ಥವೆಂದು ಪರಿಗಣಿಸಲ್ಪಟ್ಟಿದೆ. ಇದು ನೆಲೆಗೊಂಡಿರುವ ಪ್ರದೇಶವು ತನ್ನದೇ ಆದ ಸೊಬಗಿನಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಇದು ಕೋಯೆಲ್, ಶಂಖ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ನೆಲೆಗೊಂಡಿದೆ. ಇದರಿಂದಾಗಿ ಈ ಸ್ಥಳವನ್ನು ತ್ರಿಧಾರಾ ಸಂಗಮವೆಂದು ಸಹ ಕರೆಯುತ್ತಾರೆ. ಇದು ರೌರ್ಕೆಲಾದಿಂದ 9 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ತನ್ನ ಐತಿಹಾಸಿಕ ಮಹತ್ವದಿಂದಾಗಿಯೂ ಸಹ ಖ್ಯಾತಿ ಪಡೆದಿದೆ.
ಗುರುಕುಲ ಮತ್ತು ವೇದಗಳ ಕಾಲದ ಆಶ್ರಮದ ಶಿಕ್ಷಣ ವ್ಯವಸ್ಥೆಯು ಇಲ್ಲಿನ ಜನಪ್ರಿಯ ಸಂಗತಿಯಾಗಿದೆ. ದಂತ ಕತೆಗಳ ಪ್ರಕಾರ ಮಹಾ ಸಂತ ಮಹರ್ಷಿ ವ್ಯಾಸರು ಮಹಾಭಾರತವನ್ನು ಇದೇ ಸ್ಥಳದಲ್ಲಿ ರಚಿಸಿದರು ಎಂದು ತಿಳಿದು ಬರುತ್ತದೆ. ಈ ಸಂಗತಿಯು ಈ ಸ್ಥಳಕ್ಕೆ ಮತ್ತಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಇಲ್ಲಿಗೆ ಭೇಟಿ ನೀಡಿದಾಗ ಪ್ರವಾಸಿಗರು ವ್ಯಾಸ ಗುಹೆಗಳನ್ನು ಸಹ ಸುತ್ತಿ ನೋಡಬಹುದು. ಇಲ್ಲಿನ ಪ್ರವಾಸವನ್ನು ದೋಣಿಗಳ ಮೂಲಕ ಆಯೋಜನೆ ಮಾಡಲಾಗುತ್ತದೆ. ಈ ಸ್ಥಳಕ್ಕೆ ವರ್ಷದ ಯಾವುದೇ ಸಮಯದಲ್ಲಿ ಬೇಕಾದರು ಭೇಟಿ ನೀಡಬಹುದು.