ಸಿಖ್ ಸಮುದಾಯದವರ ಪ್ರಮುಖ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದಾದ ಗುರುದ್ವಾರ ಪೌಂಟಾಸಾಹಿಬ್ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. 10 ನೇ ಸಿಖ್ ಗುರು, ಗುರು ಗೋವಿಂದ ನಾಲ್ಕು ವರ್ಷಗಳ ಕಾಲ ಈ ಸ್ಥಳದಲ್ಲಿ ನೆಲೆಸಿದ್ದು, ಸಿಖ್ಖರ ಪವಿತ್ರ ಗ್ರಂಥ ದಾಸಂ ನ ಪ್ರಮುಖ ಅಧ್ಯಾಯಗಳನ್ನು ಅವರು ಇಲ್ಲೇ ಬರೆದಿದ್ದಾರೆ ಎಂದು ನಂಬಲಾಗಿದೆ.
ಗುರು ಗೋವಿಂದರು ಇಲ್ಲಿಗೆ ಬಂದು ನೆಲೆಸಿದ್ದರ ಬಗ್ಗೆ ಒಂದು ದಂತಕಥೆ ಚಾಲ್ತಿಯಲ್ಲಿದೆ. ಕುದುರೆ ಸವಾರಿ ಮಾಡಿಕೊಂಡು ಬರುತ್ತಿದ್ದಾಗ ಕುದುರೆ ಪೌಂಟಾ ಸಾಹಿಬ್ ಬಳಿ ನಿಂತಿತಂತೆ. ಅದು ನಿಂತ ಸ್ಥಳದಲ್ಲಿಯೇ ಅವರು ನೆಲೆಸಲು ಯೋಚಿಸಿದರಂತೆ ಅನ್ನುತ್ತದೆ ಈ ದಂತಕಥೆ. ಜನಪದದಲ್ಲಿ ಗುರು ಗೋವಿಂದರ ಬಗ್ಗೆ ಮತ್ತೊಂದು ನಂಬಿಕೆ ಚಾಲ್ತಿಯಲ್ಲಿದೆ. ದಾಸಂ ಗ್ರಂಥ ಬರೆಯುತ್ತಿದ್ದೇನೆ. ನನಗೆ ಸಹಕರಿಸು ಎಂದು ಗುರುಗಳು ಕೋರಿಕೊಂಡಿದ್ದಕ್ಕೆ ಯಮುನಾ ನದಿ ಪ್ರಶಾಂತವಾಗಿ ಹರಿದಳಂತೆ. ಅಂದಿನಿಂದ ಇವತ್ತಿನ ವರೆಗೂ ಪೌಂಟಾ ಸಾಹಿಬ್ ಬಳಿ ನದಿ ಶಾಂತವಾಗಿ ಹರಿಯುತ್ತಿದೆ ಅನ್ನುತ್ತಾರೆ ಜನರು.
ಗುರುದ್ವಾರದ ಒಳಗೆ ಇರುವ ಶ್ರೀ ತಲಾಬ್ ಆಸ್ಥಾನ, ಗುರು ಗೋವಿಂದ್ ಸಿಂಗ್ ಸಂಬಳ ವಿತರಣೆ ಮಾಡುತ್ತಿದ್ದ ಜಾಗ ಎಂದು ಹೇಳಲಾಗುತ್ತದೆ. ಶ್ರೀ ದಸ್ತರ್ ಆಸ್ಥಾನ್ ಕೂಡ ಇಲ್ಲೇ ಇದ್ದು, ಇಲ್ಲಿ ಗುರು ಗೋವಿಂದರು ಪೇಟ ಕಟ್ಟುವ ಸ್ಪರ್ಧೆ ನಡೆಸುತ್ತಿದ್ದರು ಎಂಬ ಪ್ರತೀತಿ ಇದೆ. ಗುರುಗೋವಿಂದರು ಬಳಸಿದ ಲೇಖನಿ ಮತ್ತು ಆ ಕಾಲದ ಶಸ್ತ್ರಾಸ್ತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದು ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.