ಮುನ್ನಾರಿಗೆ ಭೇಟಿಕೊಡುವ ಬಹುತೇಕ ಮಂದಿ ಪಾಲ್ಗೋಳ್ಳುವ ಚಟುವಟಿಕೆಗಳಲ್ಲಿ ಸಿಂಹಪಾಲನ್ನು ಚಾರಣ ಚಟುವಟಿಕೆಗಳೆ ಹೊಂದಿವೆ. ಇದು ಇಲ್ಲಿನ ಎಲ್ಲಾ ಚಟುವಟಿಕೆಗಳ ರಾಜ ಎಂದು ಕರೆಯಬಹುದು. ಚಾರಣಕ್ಕೆ ಸುರಕ್ಷಿತವೆಂದು ಭಾವಿಸಲಾದ ಹಲವಾರು ಹಾದಿಗಳು ಮುನ್ನಾರಿನಲ್ಲಿ ಲಭ್ಯವಿವೆ. ಚಾರಣಿಗರು ಈ ಹಾದಿಗಳಲ್ಲಿ ಸಾಗಿ ಮುನ್ನಾರ್ ಗಿರಿಧಾಮದ ಹಲವಾರು ತಾಣಗಳಿಗೆ ಭೇಟಿ ಕೊಡಬಹುದು. ರಾಜಮಲ, ಎರವಿಕುಲಮ್ ರಾಷ್ಟ್ರೀಯ ಉದ್ಯಾನವನ ಮತ್ತು ನಯಮಕಾಡ್ಗಳು ಇಲ್ಲಿರುವ ಉತ್ತಮ ಚಾರಣದ ಹಾದಿಗಳಾಗಿವೆ.
ಚಾರಣ ಮತ್ತು ಪರ್ವತಾರೋಹಣವು ಪ್ರವಾಸಿಗರಿಗೆ ಮುನ್ನಾರಿನಲ್ಲಿ ಅದೃಶ್ಯವಾಗಿರುವ ಪರಿಸರದ ಅದ್ಭುತಗಳ ಪರಿಚಯವನ್ನು ಮಾಡಿಕೊಡುತ್ತವೆ. ಮುನ್ನಾರ್ ಭೂಭಾಗವು ಅದ್ಭುತವೆಂದು ಹೇಳಲಾಗುವ ಕಣಿವೆಗಳನ್ನು, ಝರಿಗಳನ್ನು, ಹುಲ್ಲುಗಾವಲುಗಳನ್ನು ಮತ್ತು ಸಣ್ಣ ಬೆಟ್ಟಗಳನ್ನು ಒಳಗೊಂಡಿದೆ. ಇವುಗಳೆಲ್ಲವು ಕೂಡಿ ಈ ತಾಣವನ್ನು ಚಾರಣಕ್ಕೆ ಹೇಳಿ ಮಾಡಿಸಿದ ತಾಣವನ್ನಾಗಿ ಮಾಡಿವೆ. ಪ್ರವಾಸಿಗರು ಇಲ್ಲಿನ ಗುಡ್ಡಗಾಡು ಪ್ರಾಂತ್ಯದಲ್ಲಿ ಚಾರಣ ಮಾಡಿ, ಶಿಬಿರಗಳನ್ನು ಸಹ ಹಾಕಿಕೊಂಡು ಕಾಲ ಕಳೆಯಬಹುದಾಗಿದೆ.
ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಅರಣ್ಯ ಇಲಾಖೆಯು ಎರವಿಕುಲಮ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಾರಣ ಚಟುವಟಿಕೆಯನ್ನು ಆಯೋಜಿಸುತ್ತದೆ. ಅನಮುಡಿ ದಕ್ಷಿಣ ಭಾರತದಲ್ಲಿರುವ ಅತ್ಯಂತ ಎತ್ತರದ ಶಿಖರವಾಗಿದ್ದು, ಅರಣ್ಯ ಇಲಾಖೆಯ ಅನುಮತಿ ಪಡೆದು ಆರೋಹಣ ಮಾಡಬಹುದು. ಮುನ್ನಾರ್ ಸುತ್ತ-ಮುತ್ತ ಪ್ರವಾಸಿಗರಿಗೆ ಹಲವಾರು ಚಾರಣ ಮತ್ತು ಶಿಬಿರಗಳ ಕಾರ್ಯಕ್ರಮವು ನಡೆಯುತ್ತಿರುತ್ತವೆ.