ಕಾಶ್ಮೀರದ ಪರ್ವತ ಶ್ರೇಣಿಯನ್ನು ಹೋಲುವ ಪರ್ವತಗಳು ಆಂಧ್ರಪ್ರದೇಶದಲ್ಲೂ ಉಂಟು. ಪಪಿಕೊಂಡಲು ಎಂದು ಕರೆಯಲ್ಪಡುವ ಈ ಪಪರ್ವತ ಶ್ರೇಣಿ ನಿಜಕ್ಕೂ ಅದ್ಭುತ, ರಮಣೀಯ ಅನುಭವವನ್ನು ನಿಮಗೆ ನೀಡುತ್ತವೆ. ಮೇಡಕ್ ಪಟ್ಟಣದಿಂದ ಅನತಿ ದೂರದಲ್ಲಿರುವ ಈ ಪ್ರದೇಶ ಸಾಹಸ ಪ್ರಿಯರನ್ನು ಕೈಬೀಸಿ ಕರೆಯುತ್ತದೆ.
ಖಮ್ಮಮ್, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳ ಭಾಗವೂ ಆಗಿದೆ ಈ ಪರ್ವತ ಪ್ರದೇಶ. ಮೊದಮೊದಲು ಈ ಪ್ರದೇಶವನ್ನು ಪಾಪಿಡಿಕೊಂಡಾಲು ಎಂದು ಕರೆಯಲಾಗುತ್ತಿತ್ತು. ಗೋದಾವರಿ ನದಿಯ ಉಗಮಸ್ಥಾನವಾದ್ದರಿಂದ ಈ ಹೆಸರಿನಲ್ಲಿ ಕರೆಯಲಾಯಿತು. ವೈಮಾನಿಕ ವೀಕ್ಷಣೆ ನಡೆಸಿದಾಗ ಮಹಿಳೆಯ ಮುಡಿಯಂತೆ ಕಾಣುತ್ತದೆ ಈ ಪ್ರದೇಶ. ಇದೇ ಕಾರಣಕ್ಕೆ ಈ ಹೆಸರು ಇಡಲಾಯಿತು ಎಂತಲೂ ನಂಬಲಾಗುತ್ತದೆ.
ಈ ಬೆಟ್ಟಸಾಲಿನ ಮುನಿವಾತಂ ಜಲಪಾತ ಪ್ರಸಿದ್ಧವಾಗಿದೆ. ಶಾಂತ ವಾತಾವರಣದಲ್ಲಿ ಇವತ್ತಿಗೂ ಬುಡಕಟ್ಟು ಜನರ ನೆಲೆಗಳನ್ನು ಕಾಣಬಹುದಾಗಿದ್ದು, ಅವರ ಮುಗ್ಧ, ಶಾಂತ ಸ್ವಭಾವ ಮನಸ್ಸಿಗೆ ಹಿತ ನೀಡುತ್ತದೆ. ಜಲಪಾತ ವೀಕ್ಷಣೆಗೆ ಬಂದವರು ಈ ಸಮುದಾಯದ ಜನರನ್ನೂ ಮಾತಾಡಿಸಿ, ಅವರ ಜೀವನ ಕ್ರಮವನ್ನು ಕಣ್ತುಂಬಿಸಿಕೊಂಡು ಹೋಗುತ್ತಾರೆ. ಭದ್ರಾಚಲಂ ಮತ್ತು ರಾಜಮುಂಡ್ರಿಯಿಂದ ದೋಣಿಯ ಮೂಲಕವೂ ಈ ಪ್ರದೇಶವನ್ನು ತಲುಪಬಹುದಾಗಿದೆ.
ಇಲ್ಲಿ ಅಪರೂಪದ ಪ್ರಾಣಿಸಂಕುಲಗಳನ್ನು ನೋಡಬಹುದಾಗಿದ್ದು, ಅವುಗಳೊಂದಿಗಿನ ಒಡನಾಟ ಮನಸ್ಸಿಗೆ ಹಿತ ನೀಡುತ್ತದೆ. ಹುಲಿ, ಚಿರತೆ, ಹುಲ್ಲೆ, ಕತ್ತೆ ಕಿರುಬ, ನರಿ ಮಚ್ಚೆಯುಳ್ಳ ಜಿಂಕೆಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿವೆ.