ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕಟೀಲು ಪುಣ್ಯ ಸ್ಥಳವೆಂದೇ ಪ್ರಸಿದ್ಧಿ ಹೊಂದಿದೆ. ಕಟೀಲು ಶ್ರೀಶಕ್ತಿಯ ಪೀಠವಾಗಿದ್ದು ಪುರಾಣದಿಂದ ಮಹತ್ವ ಹಾಗೂ ಪ್ರಸಿದ್ಧಿಯನ್ನು ಹೊಂದಿದೆ. ನಂದಿನಿ ನದಿಯ ದಂಡೆಯ ಮೇಲಿರುವ ದುರ್ಗಾಪರಮೇಶ್ವರಿ ದೇವಾಲಯವು ಅಸಂಖ್ಯಾತ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
ಈ ಪ್ರದೇಶದ ಹಿಂದಿನ ದಂತಕಥೆ ಹೀಗಿದೆ.
ದೀರ್ಘವಾದ ಧ್ಯಾನದಲ್ಲಿ ಮುಳುಗಿದ್ದ ಮಹಾಜ್ಞಾನಿಯಾದ ಜಬಲಿ ಮಹರ್ಷಿ ಜನರ ಕಷ್ಟಗಳನ್ನು ತನ್ನ ದಿವ್ಯ ದೃಷ್ಟಿಯಲ್ಲಿ ಕಂಡನು. ಅವರ ಮೇಲಿನ ಕನಿಕರದಿಂದ ಅವರನ್ನು ನೋವುಗಳಿಂದ ಮುಕ್ತಿಗೊಳಿಸುವ ನಿರ್ಧಾರವನ್ನು ಕೈಗೊಂಡನು. ಆತನು ಒಂದು ಯಜ್ಞವನ್ನು ನಡೆಸಲು ನಿರ್ಣಯಿಸಿ ಪುಣ್ಯ ಹಸುವಾಗಿದ್ದ ಕಾಮಧೇನುವನ್ನು ಭೂಮಿಗೆ ಕರೆತರಲು ನಿರ್ಧರಿಸಿದನು.
ಕಾಮಧೇನು ತರಲು ದೇವತೆಗಳ ಒಡೆಯನಾದ ಇಂದ್ರನ ಒಪ್ಪಿಗೆ ಕೇಳಿದಾಗ, ಇಂದ್ರನು ಕಾಮಧೇನುವು ವರುಣ ಲೋಕಕ್ಕೆ ಹೋಗಿರುವುದಾಗಿಯೂ ಅದರ ಬದಲು ಆತನ ಪುತ್ರಿಯಾದ ನಂದಿನಿಯನ್ನು ಕರೆದೊಯ್ಯಬಹುದಾಗಿ ತಿಳಿಸಿದನು. ಆದರೆ ನಂದಿನಿಯು ಜಬಲಿ ಮಹರ್ಷಿ ಜತೆಗೆ ಭೂಲೋಕಕ್ಕೆ ಹೋಗಲು ಅತ್ಯಂತ ನಿಷ್ಠುರದಿಂದ ನಿರಾಕರಿಸಿತು. ಭೂಲೋಕವು ಪಾಪಿಗಳ ಲೋಕವಾಗಿದ್ದರಿಂದ ತಾನೆಂದೂ ಅಲ್ಲಿ ಕಾಲಿಡುವುದಿಲ್ಲವೆಂದು ಹೇಳಿತು.
ಆದರೆ ಜಬಲಿ ಮಹರ್ಷಿಯು ಆಕೆಯ ಮನವೊಲಿಸಲು ಸಾಕಷ್ಟು ಪರಿಪರಿಯಾಗಿ ಬೇಡಿಕೊಂಡನು. ಭೂಮಿಯಲ್ಲಿಹ ಜನರು ಅನುಭವಿಸುತ್ತಿರುವ ಕಷ್ಟಕಾರ್ಪಣ್ಯಗಳ ಬಗ್ಗೆಯೂ ಆಕೆಯೂ ಬಂದು ಅವರ ನೋವನ್ನು ನೀಗಿಸಲು ಸಹಕರಿಸುವಂತೆಯೂ ಕೇಳಿಕೊಂಡನು. ಆದರೆ ಜಬಲಿ ಮಹರ್ಷಿಯ ಮಾತಿಗೆ ಜಪ್ಪೆನ್ನದೇ ನಂದಿನಿಯು ತನ್ನದೇ ಹಠ ಹಿಡಿಕೊಂಡಿತು.
ಇದರಿಂದ ಕೋಪಗೊಂಡ ಜಬಲಿ ಮಹರ್ಷಿಯು ಭೂಲೋಕಕ್ಕೆ ಬರಲೊಪ್ಪದ ನಂದಿನಿಯು ಇನ್ನು ಮುಂದೆ ನದಿಯ ರೂಪದಲ್ಲಿ ಭೂಮಿಗಿಳಿಯುವಂತೆ ಶಾಪವಿತ್ತನು. ಶಾಪಕ್ಕೊಳಗಾದ ನಂದಿನಿಯು ಚಿಂತೆಗೀಡಾಗಿ ಮಹರ್ಷಿ ಜಬಲಿಗೆ ಕರುಣೆ ಮಾಡಿ ಶಾಪ ಹಿಂತೆಗೆದುಕೊಳ್ಳಬೇಕು ಇಲ್ಲವಾದರಲ್ಲಿ ಶಾಪ ವಿಮೋಚನೆಯನ್ನಾದರೂ ತಿಳಿಸಬೇಕೆಂದು ಬೇಡಿಕೊಂಡಿತು. ಆಗ ಜಬಲಿ ಮಹರ್ಷಿಯು ನಿರಂತರವಾಗಿ ದುರ್ಗಾದೇವಿಯನ್ನು ಪ್ರಾರ್ಥಿಸಿದರೆ ಶಾಪ ವಿಮೋಚನೆಯನ್ನು ಆ ತಾಯಿಯೇ ತೋರಿಸುತ್ತಾಳೆ ಎಂದು ಹೇಳಿದನು.
ನಂದಿನಿಯು ಅನಂತರ ದೇವಿಯನ್ನು ಪ್ರಾರ್ಥಿಸಲು, ದುರ್ಗಿಯು ಪ್ರತ್ಯಕ್ಷವಾಗಿ ಜಬಲಿ ಮಹರ್ಷಿಯ ಶಾಪದಂತೆ ನದಿಯಾಗಿ ಹರಿಯುವಂತೆ ಹೇಳಿದಳು. ನಂತರ ತಾನೇ ಆಕೆಯ ಮಗಳಂತೆ ಹುಟ್ಟಿ ಮಹರ್ಷಿ ಜಬಲಿಯ ಶಾಪ ವಿಮೋಚನೆಗೊಳಿಸುವುದಾಗಿ ಆಶೀರ್ವದಿಸಿದಳು.
ಅದರಂತೆ ಕಟೀಲಿನ ಕನಕ ಗಿರಿಯಿಂದ ನಂದಿನಿ ನದಿಯ ರೂಪದಲ್ಲಿ ಹರಿದಳು. ಈ ನದಿಯ ದಂಡೆಯ ಮೇಲೆ ಜಬಲಿ ಮಹರ್ಷಿಯು ಯಜ್ಞ ಯಾಗಾದಿಗಳನ್ನು ನಡೆಸಿದ. ನಂತರ ಎಲ್ಲೆಡೆ ಸಮೃದ್ಧ ಮಳೆಯಾಗಿ ಆ ಜನರಲ್ಲಿ ಶಾಂತಿ ನೆಮ್ಮದಿ ನೆಲೆಸಿ ಅಭ್ಯುದಯ ಹೊಂದಿದರು.
ಪೌರಾಣಿಕತೆಯನ್ನು ಇನ್ನೂ ಕೆದಕಿದಾಗ
ಇತ್ತ ನಂದಿನಿಯು ನದಿಯಾಗಿ ಹರಿಯುತ್ತಿದ್ದಂತೆಯೇ, ಅರುಣಾಸುರನೆಂಬ ರಾಕ್ಷಸನ ಮುಂದೆ ದೇವಿಯು ಸುಂದರ ಕನ್ಯೆಯ ರೂಪದಲ್ಲಿ ಪ್ರತ್ಯಕ್ಷವಾದಳು. ಆ ಕನ್ಯೆಯ ಸೌಂದರ್ಯವನ್ನು ಕಂಡು ಮೋಹಿತನಾದ ಅರಣಾಸುರನು ಆಕೆಯನ್ನು ಹಿಂಬಾಲಿಸಿದನು. ಸುಂದರ ಕನ್ಯೆಯ ರೂಪದಲ್ಲಿದ್ದ ದೇವಿಯು ತನ್ನ ನಿಜ ರೂಪವನ್ನು ತೋರಿದಳು. ಆಗ ಅರುಣಾಸುರನು ಅವಳನ್ನು ಕೊಲ್ಲಲು ಪ್ರಯತ್ನಿಸಿದನು ಆದರೆ ಅಷ್ಟರಲ್ಲಿಯೇ ದೇವಿಯು ಕಲ್ಲು ಬಂಡೆಯಾದಳು. ಅದೇ ಕಲ್ಲಿನಿಂದ ದುಂಬಿಗಳ ಗುಂಪೊಂದು ಸೃಷ್ಟಿಯಾಗಿ ಬಂದು ಅರುಣಾಸುರನನ್ನು ಕುಟುಕಿ ಕುಟುಕಿ ಸಾಯಿಸಿದವು.
ದುಂಬಿಗಳಿಂದ ಅರುಣಾಸುರ ಸಾಯಲು ಕಾರಣವೆಂದರೆ ಆತನು ಪಡೆದಿದ್ದ ವರ. ಎರಡು ಅಥವಾ ನಾಲ್ಕು ಕಾಲಿನ ಯಾವುದೇ ಪ್ರಾಣಿಯಾಗಲಿ ಹಾಗೂ ಆಯುಧದಿಂದಾಗಲಿ ತನಗ ಸಾವು ಬರಬಾರದೆಂದು ಆತ ವರ ಪಡೆದಿದ್ದ. ನಂತರ ದೇವತೆಗಳಲೆಲ್ಲಾ ಸೇರಿಕೊಂಡು ಭ್ರಮರಾಂಬಿಕೆಗೆ (ದುಂಬಿಗಳ ರಾಣಿ) ಉಗ್ರರೂಪದಿಂದ ತನ್ನ ಚೆಲುವಿನ ಮತ್ತು ಶಾಂತಿ ಸ್ವಭಾವವನ್ನು ಹೊಂದಲು ಪ್ರಾರ್ಥಿಸಿದರು. ಆಗ ದೇವಿಯು ತನ್ನ ಸುಂದರವಾದ ರೂಪದಲ್ಲಿ ನಂದಿನಿ ನದಿಯ ಕೇಂದ್ರ ಭಾಗದಲ್ಲಿ ಬಂದು ಅವತರಿಸಿ, ನಂದಿನಿಗೆ ನೀಡಿದ್ದ ಆಕೆಯ ಮಗಳಾಗಿ ಹುಟ್ಟುವ ವಚನವನ್ನು ಈಡೇರಿಸಿದಳು. ಆಕೆ ನೆಲೆಸಿದ ಸಣ್ಣ ದ್ವೀಪಕ್ಕೆ ಕಟೀಲು ಎಂಬ ಹೆಸರು ಬಂದಿತು.
ಸಂಸ್ಕೃತ ಭಾಷೆಯಲ್ಲಿ ಕಟಿ ಎಂದರೆ ಮಧ್ಯ ಭಾಗ ಮತ್ತು ಇಳ ಎಂದರೆ ಭೂಮಿ ಅದರಿಂದ ಈ ಸ್ಥಳವು ನದಿಯ ಮಧ್ಯ ಭಾಗದಲ್ಲಿದ್ದುದ್ದರಿಂದ ಕಟಿ ಇಳ, ಕಟೀಲ್ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಈ ಸಣ್ಣ ದ್ವೀಪದಲ್ಲಿ ದೇವಾಲಯವನ್ನು ನಿರ್ಮಿಸಿ ಅಲ್ಲಿರುವ ಮೂರ್ತಿಯನ್ನು ದುರ್ಗಾದೇವಿಗೆ ಮುಡಿಪಾಗಿರಿಸಲಾಗಿದೆ.
ಈ ಪ್ರದೇಶದಲ್ಲಿನ ಆಚರಣೆಗಳು
ಇಲ್ಲಿನ ವಿಶೇಷ ಉತ್ಸವಗಳಲ್ಲಿ ಏಪ್ರಿಲ್ ತಿಂಗಳಿನಲ್ಲಿ ಆಚರಿಸಲ್ಪಡುವ ಮೇಷ ಸಂಕ್ರಮಣ, ನವರಾತ್ರಿ ಆಚರಣೆಗಳು, ನಂದಿನಿ ನದಿಯ ಜನ್ಮ ಪೂರಕವಾಗಿ ಆಚರಿಸುವ ಮಹಾ ಶುದ್ಧ ಪೂರ್ಣಿಮೆ, ಗಣೇಶ ಚತುರ್ಥಿ, ಶ್ರೀಕೃಷ್ಣ ಜನ್ಮಾಷ್ಟಮಿ, ಕದಿರುಹಬ್ಬ ಮತ್ತು ಲಕ್ಷ ದೀಪೋತ್ಸವವನ್ನು ಒಳಗೊಂಡಿವೆ.
ಇಲ್ಲಿನ ದೇವಾಲಯದ ಟ್ರಸ್ಟ್ ಹಲವು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದು, ಬರುವ ಭಕ್ತಾದಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿದೆ. ಅಲ್ಲದೇ ಯಕ್ಷಗಾನದಂತಹ ಜಾನಪದ ಕಲೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದೆ.