ಕಣ್ಣೂರಿನಿಂದ ಸುಮಾರು 25 ಕಿ.ಮೀ. ದೂರದಲ್ಲಿರುವ ಪಳಾಯಂಗಡಿ ನಗರದಲ್ಲಿರುವ ಮದಾಯಿಪರ ಬೆಟ್ಟಗಳ ಸಾಲು ಹಸಿರು ಹೊದ್ದಿಕೊಂಡು ಕುಪ್ಪಂ ನದಿಯ ದಂಡೆಯ ಹೊರಳಿಕೊಂಡಿರುವುದು ಅತ್ಯಂತ ಮನಮೋಹಕ ದೃಶ್ಯವಾಗಿ ಕಂಗೊಳಿಸುತ್ತದೆ. ಏಳಿಮಾಲ ಸಂಸ್ಥಾನದ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದೆ.
ಈ ಬೆಟ್ಟದ ಪಕ್ಕದಲ್ಲೇ ಇರುವ 'ಪಾಳಿ ಕೊಟ್ಟ' ಎಂಬ ಪುರಾತನ ಕೋಟೆ ಹಾಗೂ ವಾಚ್ ಟವರ್ ಇಲ್ಲಿನ ಆಕರ್ಷಣೆ. ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ 'ಮದಾಯಿಕಾವು' ಇದನ್ನು ತಿರುವರ್ ಕಾಡು ಭಗವತಿ ದೇವಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿ ಭದ್ರಕಾಳಿ ದೇವಿಯನ್ನು ಆರಾಧಿಸಲಾಗುತ್ತದೆ. ಶಿವನನ್ನು ಆರಾಧಿಸುವ 'ವಾಡುಕುನ್ನೂರು ದೇವಸ್ಥಾನ', ಮಡೈ ಮಸೀದಿ ಎಂದೇ ಖ್ಯಾತಿ ಹೊಂದಿರುವ ಮಲಿಕ್ ಇಬ್ನ ದಿನಾರ್ ಮಸೀದಿ ಇದರಲ ಸುಮೀಪದಲ್ಲೇ ಇದ್ದು ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಮದಾಯಿಪರ ಸುಂದರ ಹೂಗಳು ಹಾಗೂ ವನಸ್ಪತಿಗಳಿಂದಾಗಿ ನಿಸರ್ಗ ಪ್ರೇಮಿಗಳನ್ನು ಆಕರ್ಷಿಸುತ್ತದೆ. ದಾಖಲೆಗಳ ಪ್ರಕಾರ ಇಲ್ಲಿ ಸುಮಾರು 300ಕ್ಕೂ ಅಧಿಕ ಹೂ ಗಿಡಗಳ ತಳಿಗಳಿದ್ದು, 30 ವಿಧವಾದ ಹುಲ್ಲುಗಿಡಗಳನ್ನು ಇಲ್ಲಿ ಕಾಣಬಹುದು,100 ವಿಭಿನ್ನ ಜಾತಿಯ ಬಣ್ಣದ ಚಿಟ್ಟೆಗಳು, ಸುಮಾರು 150 ಜಾತಿಗಳ ವಿಭಿನ್ನ ಪಕ್ಷಿಗಳು ಈ ಪ್ರದೇಶದಲ್ಲಿ ಕಂಡು ಬರುತ್ತವೆ. ಈ ಪ್ರದೇಶವು ಜೌಷಧಿ ಯುಕ್ತ ಗಿಡಮೂಲಿಕೆಗಳಿಗೆ ಹೆಸರುವಾಸಿಯಾಗಿದೆ. ಸದ್ಯಕ್ಕೆ ಈ ಪ್ರದೇಶವು ಅಷ್ಟಾಗಿ ಪ್ರವಾಸಿಗರ ಗಮನಕ್ಕೆ ಬಾರದಿದ್ದರೂ ಮುಂದೆ ಇದನ್ನು ಪ್ರವಾಸಿ ತಾಣವನ್ನಾಗಿಸಲು ಸ್ಥಳಿಯ ಆಡಳಿತ ಸಂಸ್ಥೆ ಪ್ರಯತ್ನಿಸುತ್ತಿದೆ.