ಅಕ್ಕರಿ ಕೊಟ್ಟಿಯೂರ್ ಹಾಗೂ ಇಕ್ಕರಿ ಕೊಟ್ಟಿಯೂರ್ ಎಂಬ ಅವಳಿ ದೇವಾಲಯಗಳಿಗಿರುವ ಹೆಸರನ್ನೇ ಕೊಟ್ಟಿಯೂರ್ ಶಿವ ದೇವಸ್ಥಾನಕ್ಕೆ ಇಡಲಾಗಿದ್ದು ಇದು ಉತ್ತರ ಕೇರಳಾದ ಪ್ರಮುಖ ಜಾತ್ರಾ ಕೇಂದ್ರವಾಗಿದೆ. ದಕ್ಷಿಣ ಭಾರತದ ವಾರಣಾಸಿ ಅಥವಾ ದಕ್ಷಿಣ ಕಾಶಿ ಎಂದೇ ಕರೆಯುವ ಕೊಟ್ಟಿಯೂರಿನಲ್ಲಿ ಈ ದೇವಸ್ಥಾನವಿದೆ. ಬಾವಲಿ ನದಿಯ ಪೂರ್ವ ಹಾಗೂ ಪಶ್ಚಿಮ ದಂಡೆಗಳ ಮೇಲಿರುವ ಅಕ್ಕರಿ ಮತ್ತು ಇಕ್ಕರಿ ದೇವಸ್ಥಾನಗಳಿದ್ದು ದಟ್ಟವಾದ ಕಾಡಿನ ಮಧ್ಯೆ ನದಿ ಹಾದುಹೋಗುವ ದೃಶ್ಯ ಕಣ್ಮನ ಸೆಳೆಯುತ್ತದೆ.
ಪ್ರತೀ ವರ್ಷ ಮೇ-ಜೂನ್ ತಿಂಗಳಲ್ಲಿ ನಡೆಯುವ ವೈಶಾಕ ಉತ್ಸವ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ಈ ಉತ್ಸವವು ಸುಮಾರು 28 ದಿನಗಳ ಕಾಲ ನಡೆಯುತ್ತದೆ. ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಪೂಜಾ ವಿಧಿಗಳಲ್ಲಿ ಭಾಗವಹಿಸಲು ಕೋಟ್ಯಾನು ಕೋಟಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. 'ಇಲನೀರ್ ವೀಪುರ್ ಅಥವಾ ಎಳೆನೀರು ಹರಕೆ ಮತ್ತು ಇಳನೀರ್ ಅಟ್ಟು ಅಥವಾ ದೇವಸ್ಥಾನದ ವಿಗ್ರಹವನ್ನು ಎಳೆ ನೀರಿನಿಂದ ಅಭಿಷೇಕಿಸುವುದು ಇಲ್ಲಿನ ಪ್ರಮುಖ ಹರಕೆಯಾಗಿದೆ. ತಲಚೇರಿಂದ 60 ಕಿ.ಮೀ.ಹಾಗೂ ಕಣ್ಣೂರಿನಿಂದ 70 ಕಿ.ಮೀ.ರಸ್ತೆ ಮಾರ್ಗವಾಗಿ ಇಲ್ಲಿಗೆ ಸುಲಭವಾಗಿ ಬರಬಹುದು.