ಐರಾವತೇಶ್ವರ ದೇವಾಲಯವು ದಾರಾಸುರಂನ ಪ್ರಮುಖ ಆಕರ್ಷಣೆಗಳಲ್ಲೊಂದು. ಸ್ಥಳಪುರಾಣಗಳ ಪ್ರಕಾರ, ಇಂದ್ರನ ಬಿಳಿ ಆನೆಯು(ಐರಾವತ), ದೂರ್ವಾಸ ಋಷಿ ಮತ್ತು ಯಮನ ಶಾಪದಿಂದ ಮುಕ್ತಿ ಪಡೆಯಲು ಇಲ್ಲಿ ಶಿವನನ್ನು ಪೂಜಿಸಿತಂತೆ. ಆದ್ದರಿಂದ ಈ ದೇವಸ್ಥಾನದಲ್ಲಿ ಶಿವನು ಐರಾವತೇಶ್ವರ ಎಂದು ಪೂಜೆಗೊಳ್ಳುತ್ತಾನೆ.
ಇದು ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯ. ಇಲ್ಲಿ ಅನೇಕ ಸುಂದರ ಕೆತ್ತನೆಗಳಿವೆ. ಇದು ಗಂಗೈಕೊಂಡಚೋಳಪುರಂ ದೇವಾಲಯ ಮತ್ತು ಬೃಹದೇಶ್ವರ ದೇವಾಲಯಕ್ಕಿಂತ ಚಿಕ್ಕದು ಆದರೆ ಇಲ್ಲಿನ ಸೂಕ್ಷ್ಮಕಲೆಗಾರಿಕೆಯ ಕೆತ್ತನೆಗಳು ವಿಸ್ತೃತವಾಗಿವೆ. ಗರ್ಭಗುಡಿಯು ಅಶ್ವಗಳಿಂದ ಎಳೆಯಲ್ಪಡುತ್ತಿರುವ ರಥದ ಮಾದರಿಯಲ್ಲಿದೆ. ಇದೊಂದು ಸಂದರ್ಶಿಸಲೇಬೇಕಾದ ಸ್ಥಳ.