ಕಾಲವರ ದುರ್ಗವೆಂದೇ ಹೆಸರಾಗಿರುವ ಸ್ಕಂದಗಿರಿಯು ಚಿಕ್ಕಬಳ್ಳಾಪುರದ ಮತ್ತೊಂದು ಆಕರ್ಷಕ ತಾಣ. ಮೈಸೂರ ರಾಜ್ಯವನ್ನು ಆಳಿದ ಟಿಪ್ಪು ಸುಲ್ತಾನನ ಕಾಲದ ಹಿನ್ನೆಲೆ ಹೊಂದಿರುವ ನಂದಿಬೆಟ್ಟದ ವ್ಯಾಪ್ತಿಯಲ್ಲಿ ಬರುವ ಸ್ಕಂದಗಿರಿಯಲ್ಲಿನ ಕೋಟೆಯು 1350 ಮೀ ಉದ್ದವಿದೆ. ಇಲ್ಲಿ ಟಿಪ್ಪುಸುಲ್ತಾನ ಕಾಲದ ಅನೇಕ ಅವಶೇಷಗಳನ್ನು ಕಾಣಬಹುದು. ಇಲ್ಲಿರುವ ಕೋಟೆಯನ್ನು ಟಿಪ್ಪು ಸುಲ್ತಾನನು ನೇಮಿಸಿದ ಸ್ಥಳೀಯ ರಾಜನು ನಿರ್ಮಿಸಿದನೆನ್ನಲಾಗಿದೆ.ಸ್ಕಂದಗಿರಿಯಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಎರಡು ಗುಹೆಗಳಿವೆ. ಈ ಗುಹೆಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲದಿದ್ದರೂ ಸ್ಥಳೀಯರ ಪ್ರಕಾರ ಒಂದು ಗುಹೆಯ ಕೋಟೆಯ ಒಳಗಡೆ ಹೋಗುವ ದಾರಿಯಾಗಿದೆ ಎನ್ನುತ್ತಾರೆ. ಇನ್ನೊಂದು ಗುಹೆಯಲ್ಲಿ 6 ಸಮಾಧಿಗಳಿವೆ ಎನ್ನುತ್ತಾರೆ. ಈ ಗುಹೆಗಳಲ್ಲಿ ಹೆಬ್ಬಾವುಗಳಿದ್ದು ಆದ್ದರಿಂದ ಪ್ರವಾಸಿಗರು ಈ ಗುಹೆಗಳ ಒಳಗಡೆ ಹೋಗುವುದು ಜೀವಕ್ಕೆ ಅಪಾಯ ಎನ್ನುತ್ತಾರೆ ಸ್ಥಳೀಯರು.