ಚುನ್ನೆ ಮಿಯಾಂ ಲಕ್ಷ್ಮೀ ನಾರಾಯಣ ದೇವಾಲಯವು ಬರೇಲಿಯ ಕತ್ರಾ ಮಾಮ್ರೈನ ಕೊಹ್ರಾಪೀರ್ ಪ್ರದೇಶದಲ್ಲಿದೆ. ಇದು ಬುಧವಾರಿ ಮಸೀದಿಯ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ಭಾರತ-ಪಾಕಿಸ್ತಾನ ವಿಭಜನೆಯ ನಂತರ ಪಾಕಿಸ್ತಾನದಿಂದ ವಲಸೆ ಬಂದವರು ನೆಲೆಸಿದ್ದರು. ಇವರು ಮುಸ್ಲಿಂ ಧರ್ಮಕ್ಕೆ ಸೇರಿದ್ದ ಚುನ್ನೆ ಮಿಯಾಂ ಎಂಬುವವರ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿದರು. ಚುನ್ನೆ ಮಿಯಾಂನ ನಿಜವಾದ ಹೆಸರು ಫೌಜಲ್-ಉಲ್-ರೆಹಮಾನ್.
ಚುನ್ನೆ ಮಿಯಾಂ ಈ ಸ್ಥಳವನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ಕೇಸನ್ನು ದಾಖಲಿಸಿದ. ಆದರೆ ಒಂದು ದಿನ ಹರಿದ್ವಾರದಿಂದ ಬಂದಿದ್ದ ಶ್ರೀ ಹರ್ಮಿಲ್ಪಿ ಜಿ ಮಹರಾಜ್ ಎನ್ನುವವರ ನೀತಿ ಬೋಧಿಯನ್ನು ಕೇಳಿ ತಾನು ಹಾಕಿದ್ದ ಕೇಸನ್ನು ಹಿಂತೆಗೆದುಕೊಂಡಿದ್ದು ಮಾತ್ರವಲ್ಲದೆ ದೇವಾಲಯ ನಿರ್ಮಾಣಕ್ಕೆ ಆರ್ಥಿಕ ಸಹಾಯ ಕೂಡ ಮಾಡಿದ. ಅಂದಿನಿಂದ ಈ ದೇವಾಲಯವನ್ನು ಚುನ್ನೆ ಮಿಯಾಂ ಲಕ್ಷ್ಮೀ ನಾರಾಯಣ ದೇವಾಲಯ ಅಥವ ಚುನ್ನೆ ಮಿಯಾಂ ದೇವಾಲಯ ಎಂದೇ ಕರೆಯಲಾಗುತ್ತದೆ. ಈ ದೇವಾಲಯವು 16 ಮೇ 1960 ರಂದು ಅಂದಿನ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ.ರಾಜೇಂದ್ರ ಪ್ರಸಾದರಿಂದ ಉದ್ಘಾಟನೆಯಾಯಿತು.