ವರ್ಕಲಾ ಬೀಚ್ ತಿರುವನಂತಪುರಂ ನ ಉತ್ತರಕ್ಕೆ 54 ಕೀ. ಮೀ ಅಂತರದಲ್ಲಿ ಕಾಣಬಹುದು. ಇದು ಒಂದನೆಯ ಶತಮಾಣದ ಕೊನೆಯ ವರೆಗೆ ಪ್ರಚಲಿತದಲ್ಲಿದ್ದ ಹಿಂದೂ ಸಂಪ್ರದಾಯ ವಾವ್ ಬೆಲಿಯಿಂದ ಪ್ರಸಿದ್ಢವಾಯಿತು. ಈ ಬೀಚ್ ಇಲ್ಲಿನ ಸ್ಥಳೀಯ ಭಕ್ತಾದಿಗಳಿಗೆ ನೆಚ್ಚಿನ ಸ್ಥಳವಾಗಿದ್ದು ಇಲ್ಲಿ ಜನಾರ್ಧನ ಸ್ವಾಮಿ ದೇವಾಲಯವನ್ನು ಸ್ಥಾಪಿಸಲಾಗಿದೆ. ಈ ದೇವಾಲಯವು 2000 ವರ್ಷ ಹಳೆಯದಾದ ದೇವಾಲಯ. ಇಲ್ಲಿ ಪ್ರವಾಸಿಗರಿಗಾಗಿಯೇ ಹಲವಾರು ಆಕರ್ಷಣೆಗಳು ಕೈ ಬೀಸಿ ಕರೆಯುತ್ತಿವೆ. ನೆಚರ್ ಸೆಂಟರ್ ಈ ಬೀಚ್ ನಲ್ಲಿರುವ ಮತ್ತೊಂದು ಪ್ರಮುಖ ಆಕರ್ಷಣೆ. ಇದರ ಜೊತೆಗೆ ಇಲ್ಲಿ ಒಂದು ಔಷಧೀಯ ಗುಣಗಳಿಂದ ಕೂಡಿದ ನೀರಿನ ಚಿಲುಮೆಯಿದ್ದು ಇದನ್ನು ಇಲ್ಲಿಗೆ ಬರುವ ಹಲವು ಮಂದಿ ಬಹಳ ಪಾವಿತ್ರತೆಯಿಂದ ಕಾಣುತ್ತಾರೆ.
ಈ ಬೀಚ್ ನಲ್ಲಿ ಹಲವಾರು ಆಟಗಳನ್ನು ಸಮಯಕಳೆಯುವುದಕ್ಕೋಸ್ಕರ ಆಡಬಹುದಾಗಿದೆ.ವಾಲಿಬಾಲ್, ಈಜುವುದು ಹಾಗೂ ಇಲ್ಲಿನ ಸುತ್ತಲಿಸ ಸೊಬಗನ್ನೂ ವೀಕ್ಷಿಸಬಹುದಾಗಿದೆ. ಇಲ್ಲಿನ ಸೂರ್ಯಾಸ್ತದ ನೋಟ, ಪಾಮ್ ಮರಗಳ ನಡುವಿಂದ ಬೀಸುವ ತಂಗಾಳಿ, ಮೃದುವಾದ ಮರಳಿನಲ್ಲಿ ನಡೆಯುವಾಗ ಪಾದಗಳಿಗಾಗುವ ಖುಷಿ ನಿಮ್ಮನ್ನು ಇನ್ನಷ್ಟು ಯೌವನವಂತರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ. ಅಲ್ಲದೇ ಶಾಪಿಂಗ್ ಪ್ರಿಯರಿಗೆ ಈ ಜಾಗ ಇಷ್ಟವಾಗದೇ ಇರಲಿಕ್ಕಿಲ್ಲ.
ವರ್ಕಲಾ ಬೀಚ್ ಉತ್ತರ ಕಮರಿ ಹಾಗೂ ದಕ್ಷಿಣ ಕಮರಿ ಎಂದು ವಿಭಾಗಿಸಲಾಗಿದೆ. ಉತ್ತರ ಕಮರಿ ಹಲವಾರು ಕೆಫೆಗಳಿಂದ ಕೂಡಿದ್ದು ಇಲ್ಲಿ ಇಸ್ರೇಲಿ, ಚೈನೀಸ್, ಸ್ಥಳೀಯ ಮತ್ತು ಇಟಲಿಯ ಆಹಾರ ಪದಾರ್ಥಗಳು ದೊರೆಯುತ್ತವೆ. ನವೆಂಬರ್ ನಿಂದ ಮಾರ್ಚ್ ತಿಂಗಳುಗಳು ಈ ಸ್ಥಳಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯ.