ಕಲ್ಲೋಲ ತೀರ್ಥ ಕಲ್ಯಾಣಿಯು ಒಂದು ದೊಡ್ಡ ಕಲ್ಯಾಣಿಯಾಗಿದ್ದು ತುಳಜಾಪುರ ದೇವಾಲಯದ ಮೊದಲ ಹಂತದ ಪ್ರಕಾರದಲ್ಲಿ ನೆಲೆಸಿದೆ. ಈ ಕಲ್ಯಾಣಿಯು 40 x 20 ಅಡಿ ಅಳತೆಯನ್ನು ಹೊಂದಿದೆ. ಇದರ ಸುತ್ತಲು ಗೋಡೆಯನ್ನು ನಿರ್ಮಿಸಲಾಗಿದೆ.
ದಂತಕಥೆಗಳ ಪ್ರಕಾರ ಬ್ರಹ್ಮ ದೇವನ ಆಹ್ವಾನದ ಮೇರೆಗೆ ಈ ಕಲ್ಯಾಣಿಯಲ್ಲಿ ಪವಿತ್ರ ನದಿಗಳಾದ ಗಂಗಾ , ಯಮುನ ಮತ್ತು ಸರಸ್ವತಿಗಳು ವಿಲೀನವಾದವಂತೆ.
ಯಾವಾಗ ಈ ಕಲ್ಯಾಣಿಯಲ್ಲಿ ನದಿಗಳ ನೀರು ಸಂಗಮವಾಯಿತೊ, ಆಗ ಅಲ್ಲಿ ದೊಡ್ಡದಾದ ಸದ್ದು ಅಂದರೆ ಕೋಲಾಹಲ ಉಂಟಾಯಿತಂತೆ. ಹಾಗಾಗಿ ಇದಕ್ಕೆ ಕಲ್ಲೋಲ ತೀರ್ಥವೆಂಬ ಹೆಸರು ಬಂದಿತು.
ನಂಬಿಕೆಗಳ ಪ್ರಕಾರ ಇಲ್ಲಿಗೆ ಭೇಟಿಕೊಡುವುದರಿಂದ ಸಕಲ ಪಾಪಗಳ ನಿವಾರಣೆಯಾಗುತ್ತದೆಯಂತೆ. ಹಾಗಾಗಿ ಈ ಕಲ್ಯಾಣಿಯಲ್ಲಿ ತೀರ್ಥ ಸ್ನಾನ ಮಾಡಲು ಬಹುತೇಕ ಭಕ್ತರು ಈ ಸ್ಥಳಕ್ಕೆ ಆಗಮಿಸುತ್ತಿರುತ್ತಾರೆ.