ಸಕಲೇಶಪುರಕ್ಕೆ ಪ್ರವಾಸ ಹೊರಟಾಗ ಪ್ರವಾಸಿಗರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇರುವ ಮಂಜರಾಬಾದ್ ಕೋಟೆಗೆ ಒಮ್ಮೆ ಭೇಟಿ ಕೊಡಬಹುದು. ಇದು ಇಸ್ಲಾಮಿಕ್ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿದೆ ಮತ್ತು ಕಮಾನು ದ್ವಾರಗಳನ್ನು ಹೊಂದಿದೆ. ಈ ಕೋಟೆಯು ಸಮುದ್ರ ಮಟ್ಟದಿಂದ 3,240 ಅಡಿ ಎತ್ತರದಲ್ಲಿ ನೆಲೆಗೊಂಡಿದೆ.ಈ ಕೋಟೆಯು ಮೈಸೂರಿನ ದೊರೆ ಟಿಪ್ಪು ಸುಲ್ತಾನನಿಂದ ನಿರ್ಮಾಣಗೊಂಡಿತು. ಇದರ ನಿರ್ಮಾಣದ ಉದ್ದೇಶ ಸಕಲೇಶಪುರದ ಬಳಿ ಹಾದು ಹೋಗುವ ಹಾದಿಗಳು ಸಮುದ್ರ ತೀರಗಳಿಗೆ ಸಂಪರ್ಕ ಕಲ್ಪಿಸುವುದರಿಂದಾಗಿ, ಸುತ್ತಮುತ್ತಲ ಪ್ರದೇಶಗಳ ರಕ್ಷಣೆಯ ದೃಷ್ಟಿಯಿಂದ ನಿರ್ಮಾಣ ಮಾಡಲಾಯಿತು. ಟಿಪ್ಪು ಸುಲ್ತಾನನ ಕಾಲದಲ್ಲಿ ಈ ಕೋಟೆಯು ಮದ್ದುಗುಂಡುಗಳ ಸಂಗ್ರಹಗಾರವನ್ನಾಗಿ ಬಳಸಲಾಗುತ್ತಿತ್ತು. ಅಲ್ಲದೆ ಬ್ರಿಟೀಷರ ಸೈನ್ಯವನ್ನು ಮಂಗಳೂರಿನತ್ತ ಹೋಗದಂತೆ ತಡೆಯುವ ಉದ್ದೇಶಕ್ಕಾಗಿ ಸಹಾ ಬಳಸಲಾಗುತ್ತಿತ್ತು.ಮಂಜರಾಬಾದ್ ಕೋಟೆಯು ಒಂದು ಸಣ್ಣ ಗುಡ್ದದ ಮೇಲೆ ಕಟ್ಟಲಾಗಿದೆ. ಇತರ ಕೋಟೆಗಳಿಗೆ ಹೋಲಿಸಿದರೆ ಈ ಕೋಟೆ ಒಂದೆ ಒಂದು ಮಟ್ಟದ ನಿರ್ಮಾಣ ಮಾದರಿ ಅನುಸರಿಸಿದೆ. ಇತರ ಕೋಟೆಗಳು ಹಲವು ಮಟ್ಟದ ಮಾದರಿ ಅನುಸರಿಸಿರುತ್ತವೆ. ಈ ಕೋಟೆಯು ಪಶ್ಚಿಮ ಘಟ್ಟದ ಭವ್ಯ ನೋಟವನ್ನು ಒದಗಿಸುತ್ತದೆ. ಈ ಕೋಟೆಯು ಶಿಲುಬೆ ರಚನೆಯ ಹೊಂಡಗಳನ್ನು ಹೊಂದಿದ್ದು, ಅವುಗಳು ಈ ಕೋಟೆಯ ಏಕೈಕ ನೀರಿನ ಆಕರಗಳಾಗಿವೆ. ಈ ನಕ್ಷತ್ರಾಕಾರದ ಕೋಟೆಯ ನಿರ್ಮಾಣ 1785ರಲ್ಲಿ ಶುರುವಾಗಿ 1792ರಲ್ಲಿ ಅಂತ್ಯ ಕಂಡಿತು.ಈ ಕೋಟೆಯಲ್ಲಿ ಹಲವಾರು ಕೊಠಡಿಗಳಿವೆ: ಇವುಗಳಲ್ಲಿ ಕೆಲವನ್ನು ಕುದುರೆಗಳನ್ನು ಕಟ್ಟುವ ಲಾಯವನ್ನಾಗಿ ಬಳಸಿದರೆ, ಉಳಿದವುಗಳನ್ನು ಅಡಿಗೆ ಮನೆಯಾಗಿ ಮತ್ತು ಸೈನಿಕರ ಶೌಚಾಲಯವಾಗಿ ಬಳಸಲಾಗುತ್ತಿತ್ತು. ಪ್ರವಾಸಿಗರು ಇಲ್ಲಿ ಒಂದು ಸುರಂಗ ಮಾರ್ಗವನ್ನು ಕಾಣಬಹುದು. ಅದು ಶ್ರೀರಂಗ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುತ್ತದೆಯಂತೆ. ಮೊದಲಿಗೆ ಇದು ಆ ಉದ್ದೇಶಕ್ಕೆ ಬಳಕೆಯಾಗಿದ್ದರು, ನಂತರ ಇದು ಶವಗಳನ್ನು ಬಿಸಾಡುವುದಕ್ಕೆ ಬಳಕೆಯಾಗುತ್ತಿತ್ತು.