ಕುಂಬಕೋಣದಿಂದ ಸುಮಾರು ಎಂಟು ಕಿ.ಮೀ ದೂರವಿರುವ ತ್ರಿಭುವನಂ ಎಂಬ ಗ್ರಾಮದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ. ಈ ಗ್ರಾಮದಲ್ಲಿ ಇನ್ನೂ ಕೆಲವು ದೇವಾಲಯಗಳಿದ್ದರೂ ಕಂಬಹರೇಶ್ವರರ್ ದೇವಾಲಯ ಹೆಚ್ಚು ಜನಪ್ರಿಯವಾಗಿದೆ. ಸುಮಾರು ನೂರಿಪ್ಪತ್ತು ಅಡಿ ಎತ್ತರವಿರುವ ದೇವಾಲಯದ ಮುಂಭಾಗ ರಥದ ಮುಂಭಾಗವನ್ನು ಹೋಲುತ್ತದೆ.
ರಥದ ಚಕ್ರಗಳು ಹಾಗೂ ಕಲ್ಲಿನ ಕೆತ್ತನೆ ಚೋಳದ ವಾಸ್ತುಶಿಲ್ಪದ ಉತ್ಕೃಷ್ಟತೆಯನ್ನು ಸ್ಪಷ್ಟಪಡಿಸುತ್ತದೆ. ದೇವಾಲಯದ ಗೋಡೆಗಳಲ್ಲಿ ರಾಮಾಯಣದ ವಿವಿಧ ಚಿತ್ರಣಗಳನ್ನು ಬಿಡಿಸಲಾಗಿದ್ದು ಪ್ರವಾಸಿಗರನ್ನು ಆಕರ್ಶಿಸುತ್ತವೆ. ವಿಶೇಷವೆಂದರೆ ಈ ದೇವಾಲಯದ ಗೋಡೆಗಳನ್ನು ಕಟ್ಟಲು ಬಳಸಲಾದ ಕಲ್ಲುಗಳ ಬೃಹತ್ ಗಾತ್ರದ್ದಾಗಿದ್ದು ಅಂದು ಯಾವ ತಂತ್ರಜ್ಙಾನದ ಮೂಲಕ ಒಂದರ ಮೇಲೆ ಇನ್ನೊಂದನ್ನು ಇರಿಸಲಾಯಿತು ಎಂಬ ಪ್ರಶ್ನೆ ಇಂದಿಗೂ ಚಿದಂಬರ ರಹಸ್ಯವಾಗಿದೆ.
ಅತಿ ಅಪರೂಪವಾದ ಮಾನವ ಮತ್ತು ಪಕ್ಷಿಯ ಸಂಯೋಗವಾದ 'ಶರಭ'ದ ಚಿತ್ರಣವೂ ಈ ದೇವಾಲಯದ ಗೋಡೆಯಲ್ಲಿದೆ. ನರಸಿಂಹನ ಕ್ರೋಧವನ್ನು ತಣಿಸಲು ಶಿವನು ಈ ಅವತಾರದಲ್ಲಿ ಬಂದಿದ್ದ ಎಂದು ಪುರಾಣಗಳು ತಿಳಿಸುತ್ತವೆ. ಗೋಡೆಗಳ ಚಿತ್ರಗಳಲ್ಲಿ ಸಂಗೀತಕಾರರ ಮತ್ತು ನರ್ತಕಿಯರ ಚಿತ್ರಣ ಅಂದಿನ ಕಾಲದಲ್ಲಿ ಕಲೆಗೆ ನೀಡಿದ ಪ್ರೋತ್ಸಾಹವನ್ನು ವರ್ಣಿಸುತ್ತವೆ.
ಚೋಳ ದೊರೆ ತ್ರಿಭುವನ ಚಕ್ರವರ್ತಿ ತನ್ನ ಉತ್ತರ ಭಾರತದ ವಿಜಯವನ್ನು ಸಾರಲು ಈ ದೇವಾಲಯವನ್ನು ಕಟ್ಟಿಸಲು ಈ ದೇವಾಲಯವನ್ನು ಕಟ್ಟಿಸಲು ಪ್ರಾರಂಭಿಸಿದರೂ ಹದಿಮೂರನೆಯ ಶತಮಾನದಲ್ಲಿ ಆಳ್ವಿಕೆ ನಡೆಸಿದ ಕುಲೋತ್ತುಂಗ ರಾಜನೂ ಹೆಚ್ಚಿನ ನಿರ್ಮಾಣಕಾರ್ಯ ನಡೆಸಿದ್ದರು. ಬಳಿಕ ಬಂದ ಚೇರನ್, ಚೋಳರು ಮತ್ತು ಪಾಂಡಿಯನ್ ರಾಜವಂಗಳು ನಿರ್ಮಾಣಕಾರ್ಯವನ್ನು ಮುಂದುವರೆಸಿ ಅಂತಿಮ ಹಂತವನ್ನು ಪೂರೈಸಿದರು ಎಂದು ಇತಿಹಾಸ ತಿಳಿಸುತ್ತದೆ. ಅಲ್ಲದೇ ಚೋಳರ ಆಳ್ವಿಕೆಯಲ್ಲಿ ಪುನರ್ಜೀವನಗೊಳಿಸಲಾದ ಅಂತಿಮ ದೇವಾಲಯವೆಂದೂ ನಂಬಲಾಗಿದೆ.
ಕರ್ನಾಟಕದಲ್ಲಿ ರೇಶ್ಮೆಗೆ ರಾಮನಗರದಂತೆ ತಮಿಳುನಾಡಿಗೆ ತ್ರಿಭುವನಂ ರೇಶ್ಮೆಗೆ ಹೆಸರುವಾಸಿಯಾಗಿದೆ.