ಕುಂಬಕೋಣಂ ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿದೆ ಪಟ್ಟೇಶ್ವರಂ ದುರ್ಗಾ ದೇವಾಲಯ. ದೇವತೆಗಳಲ್ಲಿಯೇ ಹೆಚ್ಚಾಗಿ ಆರಾಧಿಸಲ್ಪಡುವ ದುರ್ಗಾಮಾತೆಯನ್ನು ಈ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ದುರ್ಗಾಮಾತೆಯ ಆಶೀರ್ವಾದ ಪಡೆಯಲು ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಆಗಮಿಸಿ ದೇವಾನುಗ್ರಹ ಪಡೆಯುತ್ತಾರೆ. ಈ ದೇವಾಲಯದ ವಿಶೇಷತೆ ಏನೆಂದರೆ ರಾವಣನನ್ನು ವಧಿಸಿದ ಪಾಪ ಪರಿಹಾರಕ್ಕಾಗಿ ರಾಮನು ಶಿವಲಿಂಗವೊಂದನ್ನು ಸ್ಥಾಪಿಸಿದ್ದು ಆ ಶಿವಲಿಂಗ ಈ ದೇವಾಲಯದ ಆವರಣದಲ್ಲಿದೆ.
ವಿಶಾಲವಾದ ಆವರಣವನ್ನು ಹೊಂದಿರುವ ಈ ದೇವಾಲಯ ಅತ್ಯಂತ ಸ್ವಚ್ಛ ಮತ್ತು ಪವಿತ್ರ ವಾತಾವರಣವನ್ನು ಹೊಂದಿರಲು ದೇವಾಲಯದ ವ್ಯವಸ್ಥಾಪಕ ಮಂಡಳಿಯ ಕಾಳಜಿ ಕಾರಣವಾಗಿದೆ. ದೇವಾಲಯದ ಐದು ಗೋಪುರಗಳು ದೇವಾಲಯದ ಖ್ಯಾತಿಯಂತೆಯೇ ಭವ್ಯತೆಯನ್ನೂ ಮೆರೆದಿವೆ. ಚೋಳರ, ಪಲ್ಲವರ ಮತ್ತು ನಾಯಕರ ಆಳ್ವಿಕೆಯ ಕಾಲದಲ್ಲಿ ದೇವಾಲಯಕ್ಕೆ ಅತಿಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿತ್ತು. ಆ ಅವಧಿಯಲ್ಲಿ ದೇವಾಲಯದ ವಾಸ್ತುಶಾಸ್ತ್ರವು ಹಲವು ಬದಲಾವಣೆಗಳನ್ನು ಪಡೆದಿರುವ ಕುರುಹುಗಳನ್ನು ಇಂದೂ ಕಾಣಬಹುದು. ಕಳೆದ ಶತಮಾನದಲ್ಲಿಯೂ ಇನ್ನಷ್ಟು ಹೆಚ್ಚಿನ ಬದಲಾವಣೆಗಳನ್ನು ಪಡೆದಿದೆ.