ಭಗವಂತ ವಿಷ್ಣುವನ್ನು ಆರಾಧಿಸಲ್ಪಡುವ ಈ ದೇವಾಲಯವು ವಿಶ್ವದಲ್ಲಿರುವ 108 ದಿವ್ಯದೇಶಂ ದೇವಾಲಯಗಳಲ್ಲೊಂದಾಗಿದೆ. ಆಳ್ವರು ಎಂದು ಕರೆಯಲ್ಪಡುವ ಹನ್ನೆರಡು ಸಂತರು ತಮ್ಮ ಹಲವು ಸ್ತುತಿಗಳಲ್ಲಿ ಈ ದೇವಾಲಯವನ್ನು ಪ್ರಸ್ತಾಪಿಸಿದ್ದಾರೆ. ಅತಿ ಪ್ರಾಚೀನವಾದ ಈ ದೇವಾಲಯ ಇಡಿಯ ದಕ್ಷಿಣ ಭಾರತದಲ್ಲಿಯೇ ಏಕಮಾತ್ರ ವೈಷ್ಣವ ಮಂದಿರವಾಗಿದೆ.
ಹದಿನೈದನೆಯ ಶತಮಾನದ ನಾಯಕರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾದ ಹನ್ನೆರಡಂತಸ್ತಿನಷ್ಟು ಎತ್ತರದ (ಸುಮಾರು 147 ಅಡಿ) ಪ್ರವೇಶದ್ವಾರ ಭಕ್ತದನ್ನು ಅತಿದೂರದಿಂದಲೇ ಸ್ವಾಗತಿಸುತ್ತದೆ. ಇತ್ತೀಚೆಗೆ ಶ್ರೀರಂಗಂನಲ್ಲಿ ಕಟ್ಟಲಾದ (ಈಗ ದಕ್ಷಿಣ ಏಶಿಯಾದ ಅತ್ಯಂತ ಎತ್ತರದ) ಗೋಪುರಕ್ಕೂ ಮೊದಲು ಇದೇ ಅತ್ಯಂತ ಎತ್ತರದ ಗೋಪುರವಾಗಿತ್ತು.
ಗೋಪುರದ ಬುಡದಿಂದ ತುದಿಯವರೆಗೂ ನೂರಾರು ಶಿಲ್ಪಗಳನ್ನು ಕೆತ್ತಲಾಗಿದ್ದು ಪ್ರಥಮ ಸಾಲಿನಲ್ಲಿರುವ ಮಿಥುನಶಿಲ್ಪಗಳು ಗಮನ ಸೆಳೆಯುತ್ತವೆ. ಇಡಿಯ ದೇವಾಲಯ ರಥದ ಆಕೃತಿಯಲ್ಲಿದ್ದು ತಲೆಯ ಮೇಲೆ ಆದಿಶೇಷನನ್ನು ಧರಿಸಿದ ವಿಷ್ಣುವಿನ ವಿಗ್ರಹ ಅನಂತಶಯನದ ರೂಪದಲ್ಲಿದೆ. ದೇವತೆ ಕೋಮಲವಲ್ಲಿಯನ್ನೂ ಈ ದೇವಾಲಯದ ಆವರಣದಲ್ಲಿ ಆರಾಧಿಸಲಾಗುತ್ತದೆ.
ಪುರಾಣದ ಪ್ರಕಾರ ವಿಷ್ಣು ಲಕ್ಷಿಯನ್ನು ವರಿಸಲು ಭೂಮಿಯ ಮೇಲೆ ರಥವೇರಿ ಬಂದಿದ್ದಾಗ ಈ ಸ್ಥಳದಲ್ಲಿ ಇಳಿದಿದ್ದರಂತೆ. ಆಗ ಲಕ್ಷಿ ಪಾಪ ಪರಿಹಾರಕ್ಕಾಗಿ ಕೊಳದ ದಡದಲ್ಲಿದ್ದ ಕಾರಣ ಕೆಲಕಾಲ ಅಲ್ಲಿಯೇ ಇರಬೇಕಾಗಿ ಬಂದಿತ್ತು. ಅಷ್ಟೂ ದಿನ ವಿಷ್ಣು ಲಕ್ಷಿಯರು ರಥದಲ್ಲಿಯೇ ಕಾಲ ಕಳೆದಿದ್ದರಿಂದ ರಥದ ಆಕೃತಿಯನ್ನು ದೇವಾಲಯಕ್ಕೆ ಆರಿಸಲಾಯಿತು ಎಂದು ಹೇಳಲಾಗುತ್ತದೆ. ದೇಶಾದ್ಯಂತ ಇರುವ ಐದು ರಂಗನಾಥ ದೇವಾಲಯಗಳಲ್ಲಿ ಸಾರಂಗಪಾಣಿ ದೇವಾಲಯವೂ ಒಂದು.
ಕುಂಬಕೋಣಂ ರೈಲ್ವೇ ನಿಲ್ದಾಣದಿಂದ ಸುಮಾರು ಎರಡು ಕಿ.ಮೀ ದೂರವಿರುವ ಈ ದೇವಸ್ಥಾನವನ್ನು ಸಂದರ್ಶಿಸಲು ಆಟೋ, ಟ್ಯಾಕ್ಸಿ, ಬಸ್ ಸೇವೆ ಸುಲಭವಾಗಿ ಲಭ್ಯವಿದೆ.