ರಾಣಿ ಮಹಲ ಇದು ರಾಣಿ ಲಕ್ಷ್ಮಿ ಬಾಯಿಯು ವಾಸಿಸುತ್ತಿದ್ದ ಅರಮನೆಯಾದ್ದರಿಂದ ಇದನ್ನು ರಾಣಿ ಮಹಲ ಎಂದು ಕರೆಯುತ್ತಾರೆ. ರಾಣಿ ಲಕ್ಷ್ಮಿ ಬಾಯಿಯು ಝಾನ್ಸಿ ಕೀ ರಾಣಿ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದಾಳೆ. ಇದನ್ನು ನಾವಲಕರ ಕುಟುಂಬದ ಎರಡನೇಯ ರಘುನಾಥನು ನಿರ್ಮಿಸಿದನು. ಈ ಅರಮನೆಯು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹು ಪ್ರಮುಖ ಪಾತ್ರವನ್ನು ವಹಿಸಿದೆ. 1857 ರಲ್ಲಿ ಬ್ರಿಟಿಷರ ಸೈನ್ಯದ ವಿರುದ್ಧ ಹೋರಾಡಲು ಈ ಅರಮನೆಯು ರಾಣಿ ಲಕ್ಷ್ಮಿ ಬಾಯಿ ಮತ್ತು ಮರಾಠ ಮುಖುಂಡರಾದ ತಾತ್ಯಾ ಟೋಪಿ, ನಾನಾ ಸಾಹೇಬರಿಗೆ ಸ್ಪೂರ್ತಿ ಆಗಿದೆ.
ರಾಣಿ ಮಹಲ್ ಚಪ್ಪಟೆ ಛಾವಣೆ ಉಳ್ಳ ಎರಡು ಅಂತಸ್ತಿನ ಕಟ್ಟಡವನ್ನು ಹೊಂದಿದೆ. ಇದು ಚತುರ್ಭುಜ ಆಕಾರದ ಅಂಗಣದ ಎದುರಿಗೆ ನಿರ್ಮಿಸಲ್ಪಟ್ಟಿದೆ. ಈ ಅಂಗಣದ ಒಂದು ಕಡೆ ಬಾವಿ ಇದ್ದರೆ, ಇನ್ನೊಂದು ಕಡೆ ಕಾರಂಜಿ ಇದೆ. ಈ ಅರಮನೆಯು ದರಬಾರ ಕೋಣೆಯು ಸೇರಿದಂತೆ ಒಟ್ಟು ಆರು ದೊಡ್ಡ ಕೋಣೆಗಳನ್ನು ಒಳಗೊಂಡಿದೆ. ಈ ಕೋಣೆಗಳು ಕಾರಿಡಾರಗಳನ್ನು ಒಳಗೊಂಡಿದ್ದು ಪರಸ್ಪರ ಸಮಾನಂತರದಲ್ಲಿವೆ. ಜೊತೆಗೆ ಈ ಅರಮನೆಯಲ್ಲಿ ಅನೇಕ ಚಿಕ್ಕ ಚಿಕ್ಕ ಕೋಣೆಗಳಿವೆ.
ದರ್ಬಾರ ಹಾಲಿನ ಗೋಡೆಗಳ ಮೇಲೆ ವಿವಿಧ ಸಸ್ಯ ಮತ್ತು ಪ್ರಾಣಿಗಳ ಚಿತ್ರಗಳನ್ನು ಪ್ರಕಾಶವಾದ ಬಣ್ಣಗಳಿಂದ ಚಿತ್ರಿಸಿ ಅಲಂಕರಿಸಲಾಗಿದೆ. ಈ ಅರಮನೆಯ ಬಹುಭಾಗವು ಬ್ರಿಟಿಷರ ಫಿರಂಗಿದಳದ ಅಟ್ಟಹಾಸದ ಪರಿಣಾಮವಾಗಿ ನಾಶವಾಗಿದೆ. ಈಗ ಈ ಅರಮನೆಯನ್ನು ಐತಿಹಾಸಿಕ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ.