ಬೆಂಗಳೂರಿನಿಂದ ಸುಮಾರು 60 ಕಿ.ಮೀ. ದೂರದ ದೊಡ್ಡಬಳ್ಳಾಪುರ ಬಳಿ ಇರುವ ಘಾಟಿ ಸುಬ್ರಹ್ಮಣ್ಣ ದೇವಸ್ಥಾನ ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಈ ದೇವಸ್ಥಾನವು ಸುಬ್ರಹ್ಮಣ್ಯ ಮತ್ತು ಲಕ್ಷ್ಮೀ ನಾರಾಯಣ ಮೂರ್ತಿಗಳನ್ನು ಹೊಂದಿದೆ.
ದೇವಸ್ಥಾನದ ವಿಶೇಷತೆ
ಈ ಎರಡು ಮೂರ್ತಿಗಳಲ್ಲಿ ವಿಶೇಷವಿದೆ ಎಂಬುದು ಸ್ಥಳೀಕರ ಅಭಿಪ್ರಾಯವಾಗಿದೆ. ಏಕೆಂದರೆ ಒಂದೇ ಮೂರ್ತಿಯಲ್ಲಿ ಸುಬ್ರಹ್ಮಣ್ಯ ಮತ್ತು ಲಕ್ಷ್ಮೀನಾರಾಯಣ ರೂಪಗಳನ್ನು ಕೆತ್ತಲಾಗಿದೆ. ಒಂದೇ ಕಲ್ಲಿನಲ್ಲಿ ಪೂರ್ವಕ್ಕೆ ಸುಬ್ರಹ್ಮಣ್ಯ ದೇವರ ರೂಪವಿದ್ದರೆ ಪಶ್ಚಿಮಕ್ಕೆ ಲಕ್ಷ್ಮೀ ನಾರಾಯಣ ದೇವರ ರೂಪವನ್ನು ಕೆತ್ತಲಾಗಿದೆ.
ಭಕ್ತರು ನೇರವಾಗಿ ಸುಬ್ರಹ್ಮಣ್ಯ ದೇವರನ್ನು ನೋಡಿದರೆ ಲಕ್ಷ್ಮೀನಾರಾಯಣ ದೇವರನ್ನು ಹಿಂದುಗಡೆ ಇರುವ ಕನ್ನಡಿ ಮೂಲಕ ವೀಕ್ಷಿಸಬಹುದಾಗಿದೆ. ಇಲ್ಲಿ ಸುಂದರವಾದ ವಾಸ್ತುಶೈಲಿಯಿಂದ ಕಟ್ಟಲ್ಪಟ್ಟ ದೇವಸ್ಥಾನಕ್ಕೆ ಹಬ್ಬಹರಿದಿನಗಳಲ್ಲ ಸಾವಿರಾರು ಸಂಖ್ಯೆಯ ಭಕ್ತರು ಎಲ್ಲೆಡೆಯಿಂದ ಆಗಮಿಸುತ್ತಾರೆ. ದೊಡ್ಡಬಳ್ಳಾಪುರದಲ್ಲಿರುವ ಇನ್ನಿತರ ದೇವಸ್ಥಾನಗಳನ್ನೂ ಕೂಡ ಪ್ರವಾಸಿಗರು ನೋಡಬಹುದಾಗಿದೆ. ಇಲ್ಲಿಂದ ನಂದಿ ಬೆಟ್ಟಕ್ಕೂ ಹೋಗಬಹುದಾಗಿದೆ. ಬೆಂಗಳೂರು ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರಿನಿಂದ ಬರುವ ಪ್ರವಾಸಿಗರು ದೊಡ್ಡಬಳ್ಳಾಪುರದಲ್ಲಿ ಇಳಿದುಕೊಂಡು ಅಲ್ಲಿಂದ ಖಾಸಗಿ ವಾಹನಗಳ ಮೂಲಕ ಘಾಟಿ ಸುಬ್ರಹ್ಮಣ್ಯ ತಲುಪಬಹುದು.