ಗುರುದ್ವಾರ ಗೋದಾವರಿಸರ್ ಕೋಟ್ಕಪುರ - ಬಟಿಂಡಾ ರಸ್ತೆಯಲ್ಲಿ ಬರುವ ಧಿಲ್ವಾನ್ ಕಲನ್ ಎಂಬ ಹಳ್ಳಿಯಲ್ಲಿ ನೆಲೆಗೊಂಡಿದೆ. ಈ ಧಾರ್ಮಿಕ ಆಕರ್ಷಣೆಯನ್ನು ಹೊಂದಿರುವ ಯಾತ್ರಾಸ್ಥಳಕ್ಕೆ ಹಿಂದೆ ಸಿಖ್ಖರ 10ನೇಯ ಗುರು ಶ್ರೀ ಗುರು ಗೋಬಿಂದ್ ಸಿಂಗ್ ಜೀಯವರು ತಲ್ವಂಡಿ ಸಬೊಗೆ ಹೋಗುವ ಹಾದಿಯಲ್ಲಿ ಭೇಟಿ ನೀಡಿದ್ದರಂತೆ. ಸ್ಥಳೀಯರ ಪ್ರಕಾರ ಈ ಗುರುಗಳು ತಮ್ಮ ವಸ್ತ್ರಗಳನ್ನು ಈ ಹಳ್ಳಿಯ ನಿವಾಸಿಯೊಬ್ಬರಿಗೆ ದಾನವಾಗಿ ನೀಡಿದರಂತೆ. ಕೆಲವರ ಹೇಳಿಕೆಯ ಪ್ರಕಾರ ಆ ಬಟ್ಟೆಗಳು ಇಂದಿಗು ಆ ಕುಟುಂಬದ ಸದಸ್ಯರ ಬಳಿ ಭದ್ರವಾಗಿ ಇವೆಯಂತೆ. ದಿಲ್ವಾನ್ ಕಲನ್ ನಲ್ಲಿ ಗೋದಾವರಿಸರ್ ಎಂಬ ಪವಿತ್ರ ಕೊಳವಿದೆ. ಇಲ್ಲಿ ಗುರು ಗೋಬಿಂದ್ ಸಿಂಗ್ ಜೀಯವರು ಸ್ನಾನ ಮಾಡಿದ್ದರಂತೆ.