ದುಬಾರೆಗೆ ಹೆಚ್ಚಿನ ಜನರು ಬರುವುದೇ ಆನೆ ತರಬೇತಿ ಶಿಬಿರ ನೋಡಲು. ಕಾವೇರಿ ನದಿ ದಂಡೆಯಲ್ಲಿರುವ ದುಬಾರೆಯಲ್ಲಿ ಕಾಡಾನೆಗಳಿಗೆ ವಿಶೇಷವಾದ ತರಬೇತಿ ನೀಡಲಾಗುತ್ತದೆ. ಕರ್ನಾಟಕ ರಾಜ್ಯ ಸರಕಾರದ ಅರಣ್ಯ ಇಲಾಖೆ ಅಧೀನಕ್ಕೊಳಪಟ್ಟಿರುವ ಈ ಪ್ರದೇಶದಲ್ಲಿ ಸ್ಥಳೀಯ ಕುರಬಾಸ ಎಂಬ ಜನಾಂಗದವರಿಂದ ಆನೆ ತರಬೇತಿ ನೀಡಲಾಗುತ್ತದೆ. ಆನೆಗಳು ಇಲ್ಲಿನ ಕಾವೇರಿ ನದಿ ನೀರಿನಲ್ಲಿ ನೀರಾಟವಾಡುವುದನ್ನು ಮತ್ತು ಮರಿಯಾನೆಗಳೊಂದಿಗೆ ಸ್ನಾನ ಮಾಡುವುದನ್ನು ನೋಡುವುದೇ ಒಂದು ವಿಶೇಷಾನಂದ. ಆನೆ ಪಳಗಿಸುವ ಮಾವುತರು ನದಿ ನೀರಿನಲ್ಲಿ ಆನೆಗಳಿಗೆ ಸ್ನಾನ ಮಾಡಿಸುವುದನ್ನು ಪ್ರವಾಸಿಗರು ನೋಡಬಹುದು. ಆನೆಗಳಿಗೆ ನೀರೆಂದರೆ ಪಂಚಪ್ರಾಣ ಹೀಗಾಗಿ ಆನೆಗಳು ಇಲ್ಲಿ ಒಂದಕ್ಕೊಂದು ಹುಡುಗಾಟಿಕೆಯಾಡುತ್ತ ನೀರಿನಲ್ಲಿ ಮೋಜು ಮಾಡುವುದನ್ನು ಪ್ರವಾಸಿಗರಿಗೆ ಮನರಂಜನೆಯಾಗುತ್ತದೆ ಎನ್ನಬಹುದು. ಈ ಆನೆ ತರಬೇತಿ ಶಿಬಿರದಲ್ಲಿ ಎಲ್ಲ ಪ್ರವಾಸಿಗರು ಆನೆಗಳಿಗೆ ಆಹಾರ ತಿನ್ನಿಸುವುದು ಮತ್ತು ಮಾವುತರ ಸಹಾಯದಿಂದ ಆನೆಯನ್ನು ಮುಟ್ಟುವುದು ಅದರೊಂದಿಗೆ ಫೋಟೋ ಕೂಡ ತೆಗೆಸಿಕೊಳ್ಳಬಹುದು. ಸಫಾರಿಗಾಗಿ ಆನೆಗಳನ್ನು ಇಲ್ಲಿ ಬಳಸಲಾಗುತ್ತದೆ. ನುರಿತ ತಜ್ಞರಿಂದ ತರಬೇತಿ ಪಡೆದ ಆನೆಗಳ ಮೇಲೆ ಕುಳಿತು ಕಾಡಿನಲ್ಲಿ ಸಫಾರಿ ಮಾಡುತ್ತ ಪ್ರವಾಸಿಗರು ಪಕ್ಷಿ ವೀಕ್ಷಣೆ ಮಾಡಬಹುದು. ಈ ತರಬೇತಿ ಶಿಬಿರದಲ್ಲಿ ಆನೆಗಳ ಕುರಿತು ವಿಶೇಷ ಅಧ್ಯಯನ ಕೂಡ ನಡೆಯುತ್ತಿದೆ.