800 ವರ್ಷಗಳಷ್ಟು ಹಳೆಯ ಗೌರಿ ಶಂಕರ ದೇವಸ್ಥಾನವು ದಿಗಂಬರ ಜೈನ ಲಾಲ್ ದೇವಸ್ಥಾನದ ಸಮೀಪದಲ್ಲಿದೆ. ಇದು ದೆಹಲಿಯ ಚಾಂದನಿ ಚೌಕ್ನಲ್ಲಿದೆ. ಭಾರತದ ಶೈವರಿಗೆ ಇದು ಅತ್ಯಂತ ಪವಿತ್ರವಾದ ದೇವಸ್ಥಾನ.
ಇಲ್ಲಿನ ಶಿವಲಿಂಗವನ್ನ ಸುತ್ತುವರಿದಿರುವ ಹಾವುಗಳನ್ನು ಬೆಳ್ಳಿಯಿಂದ ಮಾಡಲಾಗಿದೆ. ಇದನ್ನು ಬ್ರಹ್ಮಾಂಡ ಎಂದು ಭಾವಿಸಲಾಗಿದೆ. ಶಿವನ ಆರಾಧಕನಾಗಿರುವ ಅಪಾ ಗಂಗಾಧರ ಎಂಬ ಮರಾಠಾ ಸೈನಿಕ ಈ ದೇವಸ್ಥಾನವನ್ನು ಕಟ್ಟಿಸಿದ. ಯುದ್ಧದಲ್ಲಿ ಒಮ್ಮೆ ಗಂಭೀರವಾಗಿ ಗಾಯಗೊಂಡಾಗ ಶಿವನನ್ನು ಬೇಡಿಕೊಂಡಾಗ ಶಿವನು ಅವನನ್ನು ರಕ್ಷಿಸಿದ್ದ, ಎಂದು ಐತಿಹ್ಯಗಳು ಹೇಳುತ್ತವೆ, ಈ ನೆನಪಿಗಾಗಿ ಚಾಂದನಿ ಚೌಕದಲ್ಲಿ 1761ರಲ್ಲಿ ಈ ದೇವಸ್ಥಾನವನ್ನು ಸೈನಿಕ ನಿರ್ಮಿಸಿದನಂತೆ.
ಅಪಾ ಗಂಗಾಧರ್ ಹೆಸರನ್ನು ದೇವಸ್ಥಾನದ ಛಾವಣಿಯ ಕೆಳಭಾಗದಲ್ಲಿ ಕೆತ್ತಲಾಗಿದೆ. 1959 ರಲ್ಲಿ ಈ ದೇವಸ್ಥಾನವನ್ನು ಸೇಠ್ ಜೈಪುರ ಎಂಬುವವರಿಂದ ಮರು ನಿರ್ಮಾಣಗೊಳ್ಳಲ್ಪಟ್ಟಿತು. ದೇವಸ್ಥಾನದ ಕಿಟಕಿಯ ಮೇಲೆ ಇವರ ಹೆಸರನ್ನೂ ಕೆತ್ತಲಾಗಿದೆ. ದೇವಸ್ಥಾನದ ಒಳಗಡೆ ಶಿವ ಮತ್ತು ಪಾರ್ವತಿಯರು ತಮ್ಮ ಮಕ್ಕಳಾದ ಗಣೇಶ ಮತ್ತು ಕಾರ್ತಿಕರ ಜೊತೆ ನಿಂತಿರುವ ಮೂರ್ತಿಯಿದೆ. ಲಿಂಗದ ಹಿಂಬದಿಯಲ್ಲಿ ಶಿವ ಪಾರ್ವತಿಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಲಿಂಗದ ಮೇಲೆ ಬೆಳ್ಳಿಯ ಮಡಕೆಯನ್ನು ಇಡಲಾಗಿದ್ದು ನಿರಂತರವಾಗಿ ನೀರು ಲಿಂಗದ ಮೇಲೆ ಸುರಿಯುತ್ತಿರುತ್ತದೆ.
ಗೌರಿ ಶಂಕರ ದೇವಸ್ಥಾನದ ಸುತ್ತ ಇರುವ ಇನ್ನಿತರ ಆಕರ್ಷಕ ಸ್ಥಳಗಳೆಂದರೆ ಕೆಂಪು ಕೋಟೆ ಮತ್ತು ಜಾಮಾ ಮಸೀದಿ.