ಭಾರತದ ಅತ್ಯಂತ ದೊಡ್ಡ ಮಂದಿರಗಳಲ್ಲೇ ಎರಡನೆಯದು ಇದು. ಶ್ರೀ ಆದ್ಯ ಕಾತ್ಯಾಯನಿ ಶಕ್ತಿ ಪೀಠ ಮಂದಿರ ಅಥವಾ ಛತ್ತರಪುರ ಮಂದಿರವು ದಕ್ಷಿಣ ದೆಹಲಿಯ ಛತ್ತರಪುರದಲ್ಲಿದೆ. ಈ ದೇವಸ್ಥಾನ ಕಾತ್ಯಾಯನಿಗೆ ಅರ್ಪಿತವಾದದ್ದು. ಈಕೆ ದುರ್ಗೆಯ ಆರನೇ ಅವತಾರ ಎಂದು ಕರೆಯಲಾಗಿದೆ. ಇತರ ಹಿಂದೂ ದೇವಸ್ಥಾನಗಳಿಗಿಂತ ವಿಭಿನ್ನವಾಗಿರುವ ಇದು, ಎಲ್ಲಾ ಧರ್ಮದ ಭಕ್ತರನ್ನೂ ಸೆಳೆಯುತ್ತದೆ.
ದುರ್ಗೆಯ ಪರಮ ಭಕ್ತರಾದ ಸ್ವಾಮಿ ನಾಗಪಾಲ ಮಹಾರಾಜರು ಈ ದೇವಸ್ಥಾನವನ್ನು ಕಟ್ಟಿಸಿದವರು. ಬಿಳಿ ಮಾರ್ಬಲ್ನಿಂದ ಇದನ್ನು ಕಟ್ಟಲಾಗಿದ್ದು ಸುತ್ತಲೂ ಸುಂದರವಾದ ಉದ್ಯಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನವನ್ನು ಕಟ್ಟಿದ್ದು ದಕ್ಷಿಣ ಭಾರತದ ವಾಸ್ತುಶಿಲ್ಪಿಗಳು. ಈ ದೇವಸ್ಥಾನ ಎಷ್ಟು ದೊಡ್ಡದಾಗಿದೆಯೆಂದರೆ ನಿರ್ಮಾಣ ಕಾರ್ಯ ಎಂದಿಗೂ ಮುಗಿಯದ ಹಾಗೆ ಭಾಸವಾಗುತ್ತದೆ.
ದೇವಸ್ಥಾನ ಸುಮಾರು 70 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದೆ ಮತ್ತು ಸುಮಾರು 20 ಸಣ್ಣ ಮತ್ತು ದೊಡ್ಡ ದೇವಸ್ಥಾನಗಳು ಈ ಸಂಕೀರ್ಣದಲ್ಲಿದೆ. ದೇವಸ್ಥಾನದ ಆವರಣದಲ್ಲೇ ಶಿವ-ಗೌರಿ ನಾಗೇಶ್ವರ ಮಂದಿರದ ಸಮೀಪದಲ್ಲಿ ಸ್ವಾಮಿ ನಾಗಪಾಲ ಮಹಾರಾಜರ ಸಮಾಧಿಯನ್ನೂ ನಿರ್ಮಿಸಲಾಗಿದೆ.
ದೇವಸ್ಥಾನದ ಆವರಣದಲ್ಲಿ ಪ್ರವೇಶದ್ವಾರದ ಸಮೀಪದಲ್ಲಿ ಬೃಹತ್ ಗಾತ್ರದ ಮರವಿದೆ. ಈ ಮರಕ್ಕೆ ಪವಿತ್ರ ದಾರಗಳನ್ನು ಸುತ್ತಿರುವ ದೃಶ್ಯವನ್ನು ಕಾಣಬಹುದು. ತಮ್ಮ ಆಸೆಗಳು ಈಡೇರುತ್ತವೆ ಎಂಬ ಭರವಸೆಯಿಂದ ಭಕ್ತರು ಪವಿತ್ರವಾದ ದಾರಗಳನ್ನು ಮತ್ತು ಬಳೆಗಳನ್ನು ಈ ಮರದ ಬುಡಕ್ಕೆ ಕಟ್ಟುತ್ತಾರೆ.
ದೇವಸ್ಥಾನಕ್ಕೆ ಎರಡು ಮುಖ್ಯ ದೇವರು. ಒಂದು ಮಹಾಗೌರಿ, ಇನ್ನೊಂದು ಕಾತ್ಯಾಯನಿ ದೇವಿ. ಇವೆರಡೂ ದುರ್ಗೆಯ ಒಂದೊಂದು ಅವತಾರಗಳೇ. ಗೌರಿ ದೇವಸ್ಥಾನವು ಪ್ರತಿದಿನವೂ ಭಕ್ತರಿಗೆ ತೆರೆದಿರುತ್ತದೆ. ಇನ್ನು ಕಾತ್ಯಾಯನಿ ದೇವಸ್ಥಾನವು ಅಷ್ಟಮಿಯಂದು ಹಾಗೂ ನವರಾತ್ರಿಯಂದು ಮಾತ್ರ ತೆರೆದಿರುತ್ತದೆ.
ಕಾತ್ಯಾಯನಿಯ ಬೃಹತ್ ಗಾತ್ರದ ಚಿನ್ನದ ಮೂರ್ತಿಯು ಜಗತ್ತಿನ ಹಲವೆಡೆಯ ಭಕ್ತರನ್ನು ಆಕರ್ಷಿಸುತ್ತದೆ. ಹೊಸ ಬಟ್ಟೆ, ಹೊಳೆಯುವ ಆಭರಣಗಳು ಮತ್ತು ಹಾರ ತುರಾಯಿಗಳಿಂದ ಈ ಮೂರ್ತಿಯನ್ನು ಶೃಂಗರಿಸಿರಲಾಗುತ್ತದೆ.
ಇನ್ನು ಈ ದೇವಸ್ಥಾನದ ಆವರಣದಲ್ಲಿ ಇನ್ನೂ ಹಲವು ದೇವಸ್ಥಾನಗಳಿವೆ, ಅವುಗಳಲ್ಲಿ ಶಿವ, ಗಣೇಶ, ಹನುಮಂತ, ರಾಧಾ-ಕೃಷ್ಣ ಮತ್ತು ರಾಮನಿಗೆ ಅರ್ಪಿತವಾದ ದೇವಸ್ಥಾನಗಳು ಹಲವು. ಈ ಎಲ್ಲಾ ದೇವಸ್ಥಾನಗಳು ದಕ್ಷಿಣ ಭಾರತದ ಮತ್ತು ಉತ್ತರ ಭಾರತದ ಶೈಲಿಯಲ್ಲಿ ನಿರ್ಮಿಸಿದ್ದು.