ಈ ದೇವಾಲಯವನ್ನು ಜೈನರ ಹದಿನೈದನೆಯ ತೀರ್ಥಂಕರನಾದ ಧರ್ಮನಾಥರಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ನಿರ್ಮಿಸಲು ಅಹಮದಾಬಾದ್ನ ಉದ್ಯಮಿ ಶೇಠ್ ಹುತೀಸಿಂಗ್ ಕೆಸ್ರಿಯವರು ಕ್ರಿ.ಶ. 1848ರಲ್ಲಿ 10 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದರು. ಅಮೃತಶಿಲೆಯಿಂದ ನಿರ್ಮಿಸಲಾಗಿರುವ ಈ ದೇವಾಲಯವು ಸಾಲಟ್ ಸಮುದಾಯದವರ ಅದ್ಭುತ ಮತ್ತು ಅನುಪಮವಾದ ಕಲಾ ನೈಪುಣ್ಯತೆಯನ್ನು ಸಾರಿ ಹೇಳುವ ಒಂದು ಅಪೂರ್ವ ನಿರ್ಮಾಣವಾಗಿದೆ. ಈ ದೇವಾಲಯದ ನಿರ್ಮಾಣಕ್ಕೆ ತಮ್ಮ ಪ್ರತಿಭೆಯನ್ನು ವಿಶೇಷವಾಗಿ ಧಾರೆಯೆರೆದಿರುವ ಪ್ರೇಮಚಂದ್ ಸಾಲಟ್ರವರ ಕೊಡುಗೆಯನ್ನು ಕೊಂಡಾಡಲೆ ಬೇಕು.
ಈ ದೇವಾಲಯವು ದೆಹಲಿ ದ್ವಾರಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಇಲ್ಲಿ ಒಂದು ಮಂಟಪ, ಗೋಪುರವನ್ನು ಹೊಂದಿರುವ ಗುಮ್ಮಟ ಮತ್ತು ಸುಂದರವಾದ ಕೆತ್ತನೆಗಳಿಂದ ಅಲಂಕೃತಗೊಂಡಿರುವ 12 ಸ್ತಂಭಗಳು ಇವೆ. ಇಲ್ಲಿನ ಮುಖ್ಯದೇವಾಲಯವು ಪೂರ್ವ ದಿಕ್ಕಿನಲ್ಲಿದ್ದು, ಜೈನರ ಇತರ ತೀರ್ಥಂಕರರನ್ನು ಹೊಂದಿರುವ 52 ಗುಡಿಗಳು ಇಲ್ಲಿವೆ.
ಇಲ್ಲಿ ಒಂದು ಕೀರ್ತಿ ಸ್ತಂಭ ಅಥವಾ ಮಹಾವೀರ್ ಸ್ತಂಭವು ( ಗೌರವಾರ್ಥವಾಗಿ ನಿಲ್ಲಿಸಲಾಗಿರುವ ಸ್ತಂಭ) ಪ್ರಮುಖ ದ್ವಾರಕ್ಕೆ ವಿರುದ್ಧವಾಗಿ ನಿಲ್ಲಿಸಲಾಗಿದೆ. 78 ಅಡಿ ಉದ್ದದ ಈ ಕಂಬವು ರಾಜಸ್ಥಾನದಲ್ಲಿರುವ ಚಿತ್ತೂರಿನ ಗೋಪುರವನ್ನು ಹೋಲುತ್ತದೆ. ಇದರಲ್ಲಿರುವ ಕೆತ್ತನೆಗಳು ಮೊಘಲ್ ಶೈಲಿಯನ್ನು ಹೋಲುತ್ತವೆ.