ವಿಶೇಷವಾಗಿ ಉದ್ಯೋಗಿಗಳಿಗೆ ಭಾನುವಾರ ಬಂತೆಂದರೆ ಖುಷಿ. ಕುಟುಂಬದೊಂದಿಗೆ ಸಮಯ ಕಳೆಯಲು, ಬಹುತೇಕ ಸ್ನೇಹಿತರು ಸಿಗುವುದೇ ಈ ದಿನದಂದು. ಎಲ್ಲರೂ ಒಂದೆಡೆ ಸೇರಿದಾಗ ಸುಮ್ಮನೆ ಇರಲಂತೂ ಸಾಧ್ಯವಿಲ್ಲ. ಹೊರಗಡೆ ಸುತ್ತಾಡಿಕೊಂಡು ಬರಲು ಪ್ಲಾನ್ ಮಾಡಿಕೊಳ್ಳುವರೇ ಹೆಚ್ಚು. ಆದರೆ ಹೆಚ್ಚು ಸಮಯವಿರದ ಕಾರಣ ಬೆಂಗಳೂರಿನಿಂದ ಆಚೆಯಂತೂ ಹೋಗಲು ಸಾಧ್ಯವಿಲ್ಲ. ಅದರಲ್ಲೂ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಅರ್ಧ ದಿನ ಟ್ರಾಫಿಕ್ ಅಲ್ಲೇ ಕಳೆದುಹೋಗುತ್ತದೆ ಏನು ಮಾಡುವುದು ಎಂದು ಯೋಚಿಸುತ್ತಿರುವವರಿಗಾಗಿಯೇ ಈ ಲೇಖನ. ಹೌದು. ನೀವು ಹಿಂದಿನ ದಿನವೇ ಸರಿಯಾಗಿ ಕೂತು ಪ್ಲಾನ್ ಮಾಡಿದರೆ ಅಥವಾ ಒಂದು ವಾರದ ಮುಂಚೆಯೇ ಯೋಜನೆ ಹಾಕಿಕೊಂಡರೆ ಬೆಂಗಳೂರಿನಿಂದ ಒನ್ ಡೇ ಟ್ರಿಪ್ ಹೋಗಿ ಬರಬಹುದು, ಎಲ್ಲೆಲ್ಲಿಗೆ ಅಂತೀರಾ?, ಇಲ್ಲಿದೆ ನೋಡಿ ಮಾಹಿತಿ.

ದ್ರಾಕ್ಷಿ ತೋಟಗಳು
ಬೆಟ್ಟ ಗುಡ್ಡ, ಟ್ರೆಕ್ಕಿಂಗ್ ಸಾಕಾಗಿದೆ ಎನ್ನುವವರು ಬೆಂಗಳೂರಿನ ಹೊರವಲಯದಲ್ಲಿರುವ ವಿವಿಧ ದ್ರಾಕ್ಷಿತೋಟಗಳಿಗೆ ಭೇಟಿ ನೀಡಬಹುದು. ಇಲ್ಲಿ ವೈನ್ ತಯಾರಿಕೆಯ ಪ್ರಕ್ರಿಯೆಯನ್ನು ವೀಕ್ಷಿಸಬಹುದು. ಬಹುಶಃ ವೈನ್ ಪ್ರೇಮಿಗಳಿಗೆ ಈ ತಾಣಗಳು ಅಯಸ್ಕಾದಂತೆ ಸೆಳೆದರೆ ಆಶ್ಚರ್ಯವೇನಿಲ್ಲ ಬಿಡಿ. ಗ್ರೋವರ್ ಝಂಪಾ ಸೊಗಸಾದ ವೈನ್ಗಳ ವ್ಯಾಪಕ ಸಂಗ್ರಹವನ್ನು ಹೊಂದಿದೆ. ಇದು ಬೆಂಗಳೂರಿನಿಂದ ಉತ್ತರಕ್ಕೆ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ನಂದಿ ಬೆಟ್ಟದಲ್ಲಿ ನೆಲೆಗೊಂಡಿದೆ. ಇದರ ವಿಶೇಷತೆಯೆಂದರೆ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕೆಲವು ವೈನ್ಗಳನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ. ನೀವಿಲ್ಲಿ ದ್ರಾಕ್ಷಿತೋಟಗಳು, ವೈನರಿ ಪ್ರವಾಸ ಮಾಡಬಹುದು. ಇದು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10:30 ರಿಂದ ಸಂಜೆ 5:30 ರವರೆಗೆ ತೆರೆದಿರುತ್ತದೆ. ಭಾನುವಾರ ತೆರಳುತ್ತಿರುವವರು ನಂದಿ ಹಿಲ್ಸ್ ಬಳಿಯೇ ಇರುವ ಸೋಮಾ ವೈನ್ ವಿಲೇಜ್ ಗೆ ಹೋಗಬಹುದು. ಇಲ್ಲಿಯೂ ದ್ರಾಕ್ಷಿತೋಟದ ಪ್ರವಾಸ, ವೈನ್ ರುಚಿ ನೋಡಬಹುದು. ಪ್ರತಿದಿನ ತೆರೆದಿರುತ್ತದೆ. ಸಮಯ ಬೆಳಗ್ಗೆ 11- 6.

ಛೋಟಾ ಲಡಾಖ್
ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಛೋಟಾ ಲಡಾಖ್ (ದೊಡ್ಡ ಆಯುರ್ ಎಂದೂ ಕರೆಯುತ್ತಾರೆ) ಮಳೆ ನೀರಿನಿಂದ ತುಂಬಿದ ಮತ್ತು ಘನವಾದ ಬಂಡೆಗಳಿಂದ ಸುತ್ತುವರಿದಿರುವ ಒಂದು ಸಣ್ಣ ಕ್ವಾರಿಯಾಗಿದೆ. ಇದು ನೋಡಲು ಸ್ವಲ್ಪ ಲಡಾಖ್ ಹೋಲಿಕೆಯನ್ನು ಹೊಂದಿದೆ. ಬೈಕ್ ಸವಾರಿಯನ್ನು ಆನಂದಿಸುವವರು ಇಲ್ಲಿಗೆ ಒಮ್ಮೆ ಹೋಗಬಹುದು. ಬೈಕರ್ಗಳಲ್ಲಿ ಈ ಸ್ಥಳವು ಹೆಚ್ಚು ಹೆಸರುವಾಸಿಯಾಗಿದೆ. ನೀವಿಲ್ಲಿಗೆ ಮುಂಜಾನೆ ಅಥವಾ ತಡರಾತ್ರಿಯಲ್ಲಿ ಮಾತ್ರ ಹೋಗಬೇಕೆಂದು ಶಿಫಾರಸು ಮಾಡಲಾಗಿದೆ. ಈ ಪ್ರದೇಶದ ಮಧ್ಯಭಾಗದಲ್ಲಿ ಜಲಮೂಲವಿರುವುದು ಈ ಸ್ಥಳದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಈ ಸ್ಥಳವು ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಇದನ್ನು 'ಬ್ರೇಕ್ಫಾಸ್ಟ್ ಗೇಟ್ವೇ' ಎಂದು ಪರಿಗಣಿಸಲಾಗಿದೆ. ಇಲ್ಲಿ ಸುಂದರವಾದ ಪರಿಸರ, ಹಸಿರು ಬೆಟ್ಟಗಳು ಮತ್ತು ಆಹ್ಲಾದಕರ ವಾತಾವರಣವಿದ್ದು, ನಗರದ ಗದ್ದಲದಿಂದ ದೂರವಾಗಿ ನೀವು ಇಲ್ಲಿ ವಿಶ್ರಾಂತಿ ಪಡೆಯಬಹುದು. ಕ್ಯಾಂಪಿಂಗ್ ಮಾಡಬೇಕೆನ್ನುವವರಿಗೂ ಇದು ಬೆಸ್ಟ್ ಪ್ಲೇಸ್.
ತೊಟ್ಟಿಕಲ್ಲು ಜಲಪಾತ
ತೊಟ್ಟಿಕಲ್ಲು ಜಲಪಾತವು ಬೆಂಗಳೂರಿನಿಂದ ಕೇವಲ 35 ಕಿಮೀ ದೂರದಲ್ಲಿದೆ. ಇದು ಅರ್ಧ ದಿನದ ಪ್ರವಾಸಕ್ಕೆ ಸೂಕ್ತವಾದ ಪಿಕ್ನಿಕ್ ತಾಣವಾಗಿದೆ. ಈ ಜಲಪಾತವನ್ನು TK ಫಾಲ್ಸ್ ಎಂದೂ ಕರೆಯಲಾಗುತ್ತದೆ. ಸ್ಥಳೀಯರು ಇದನ್ನು ಸ್ವರ್ಣ ಮುಖಿ ಜಲಪಾತ ಎಂದು ಕರೆಯುತ್ತಾರೆ. ಈ ಸ್ಥಳವು ಬೆಂಗಳೂರಿಗೆ ಹತ್ತಿರವಾಗಿರುವುದರಿಂದ, ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರವಾಸಿ ಪ್ರಿಯರು ವಾರಾಂತ್ಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ನೀವಿಲ್ಲಿ ಜಲಪಾತದ ನೀರಿನಲ್ಲಿ ತಣ್ಣಗೆ ಸ್ನಾನವನ್ನು ಮಾಡಬಹುದು ಅಥವಾ ಸುತ್ತಮುತ್ತಲಿನ ಪ್ರದೇಶದ ಬಂಡೆಗಳ ಮೇಲೆ ಕುಳಿತುಕೊಳ್ಳಬಹುದು. ಪಾರ್ಕಿಂಗ್ ಸ್ಥಳದಿಂದ ಜಲಪಾತವನ್ನು ತಲುಪಲು ನೀವು ಸುಮಾರು 300 ಮೀಟರ್ಗಳಷ್ಟು ನಡೆಯಬೇಕಾಗುತ್ತದೆ ಎಂಬುದನ್ನು ಗಮನಿಸಿ. ಎತ್ತರದ ಬಂಡೆಗಳತ್ತ ಹಾದು ಹೋಗುವಾಗ ಕಡಿದಾದ, ಕಿರಿದಾದ ಹಾದಿಯನ್ನು ನೀವು ಕಾಣಬಹುದು. ಬಂಡೆಯ ಮೇಲ್ಭಾಗದಿಂದ ದೃಶ್ಯವು ನಿಮ್ಮನ್ನು ಬೆರಗುಗೊಳಿಸುತ್ತದೆ.

ನೃತ್ಯಗ್ರಾಮ
ಹೆಸರಘಟ್ಟದ ಬಳಿ ಇರುವ ನೃತ್ಯಗ್ರಾಮವು ಪ್ರಖ್ಯಾತ ಒಡಿಸ್ಸಿ ನೃತ್ಯಗಾರ್ತಿ ಪ್ರೊತಿಮಾ ಬೇಡಿ ಅವರ ಪರಿಕಲ್ಪನೆಯಾಗಿದೆ. ಬೆಂಗಳೂರಿನಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿರುವ ನೃತ್ಯಗ್ರಾಮವನ್ನು ಸುಂದರವಾಗಿ ನಿರ್ಮಿಸಲಾಗಿದೆ. ಇದು ಮಣ್ಣಿನ ಮನೆಗಳು, ಹಸಿರು ಮತ್ತು ತೆರೆದ ಸ್ಥಳಗಳನ್ನು ಒಳಗೊಂಡಿದೆ. ಇದು ಸಂದರ್ಶಕರು ಮತ್ತು ವಿದ್ಯಾರ್ಥಿಗಳಿಗೆ ಶಾಂತ ಮತ್ತು ಪ್ರಶಾಂತ ಭಾವನೆಯನ್ನು ಮೂಡಿಸುತ್ತದೆ. ನೃತ್ಯಗ್ರಾಮ ಭಾರತದಲ್ಲಿನ ಮೊದಲ ಆಧುನಿಕ ವಸತಿ ಶಾಲೆಯಾಗಿದೆ. ನೃತ್ಯಗ್ರಾಮಕ್ಕೆ ಭೇಟಿ ನೀಡಿದರೆ, ನೃತ್ಯ ಗ್ರಾಮದಿಂದ ಐದು ಕಿಲೋಮೀಟರ್ ದೂರದಲ್ಲಿರುವ ಹೆಸರಘಟ್ಟ ಜಲಾಶಯ ನೋಡಬಹುದು. ಭರತನಾಟ್ಯ, ಮೋಹಿನಿಯಾಟ್ಟಂ, ಕಥಕ್, ಒಡಿಸ್ಸಿ, ಕಥಕ್ಕಳಿ, ಮಣಿಪುರಿ ಮತ್ತು ಕೂಚಿಪುಡಿಯಂತಹ ಹಲವಾರು ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳ ತರಬೇತಿಯನ್ನು ನೃತ್ಯಗ್ರಾಮದಲ್ಲಿ ನೀಡಲಾಗುತ್ತದೆ. ನೃತ್ಯಗ್ರಾಮವನ್ನು ವಿನ್ಯಾಸಗೊಳಿಸಿದ ಗೆರಾರ್ಡ್ ಡಾ ಕುನ್ಹಾ ಅವರು ಪ್ರಸಿದ್ಧ ಭಾರತೀಯ ವಾಸ್ತುಶಿಲ್ಪಿ. ನೃತ್ಯಗ್ರಾಮವು 1996 ರಿಂದ ಜಾಗತಿಕ ಮಟ್ಟದಲ್ಲಿ ಪ್ರದರ್ಶನ ನೀಡಲು ನೃತ್ಯ ತಂಡಗಳನ್ನು ಕಳುಹಿಸುತ್ತದೆ.


Click it and Unblock the Notifications

















