ದ್ವಾರಕೆಯ ಈ ಪ್ರಮುಖ ದೇವಾಲಯವನ್ನು ‘ಜಗತ್ಮಂದಿರ’ ಎಂದು ಕೂಡ ಕರೆಯುತ್ತಾರೆ. ಐತಿಹ್ಯಗಳ ಪ್ರಕಾರ ಈ ಜಗತ್ಮಂದಿರ ಅಥವ ದ್ವಾರಕಾಧೀಶ ದೇವಾಲಯದ ಮೂಲವಿಗ್ರಹವು 2500 ವರ್ಷಗಳಷ್ಟು ಹಳೆಯದು ಮತ್ತು ಇದನ್ನು ಶ್ರೀ ಕೃಷ್ಣನ ಮರಿಮೊಮ್ಮಗನಾದ ವಜ್ರನಾಭನು ನಿರ್ಮಿಸಿದನು. ಇದನ್ನು ಮಹಾಭಾರತ ಯುದ್ಧಾ ನಂತರ ನೀರಿನಲ್ಲಿ ದ್ವಾರಕೆಯು ಮುಳುಗಿ ಹೋದ ನಂತರ ಮತ್ತೆ ನಗರನ್ನು ಪುನರ್ನಿರ್ಮಿಸುವಾಗ ಕಟ್ಟಲಾಯಿತು ಎಂದು ಕೂಡ ಹೇಳಲಾಗುತ್ತದೆ. ಜಗತ್ಮಂದಿರದ ಸುತ್ತಲಿರುವ ಉಳಿದ ಕಲಾತ್ಮಕ ಮಂದಿರಗಳನ್ನು 16ನೆಯ ಶತಮಾನದಲ್ಲಿ ಕಟ್ಟಲಾಯಿತೆಂದು ಹೇಳಲಾಗುತ್ತದೆ.
ದೇವಾಲಯದ 43 ಮೀಟರ್ ಎತ್ತರದ ಸ್ಥಂಭ ಮತ್ತು ಅದರ ಮೇಲಿರು ಸೂರ್ಯ ಮತ್ತು ಚಂದ್ರನನ್ನೊಳಗೊಂಡ ಧ್ವಜವನ್ನು 10 ಕಿಮೀ ದೂರದಿಂದ ಕೂಡ ನೋಡಬಹುದಾಗಿದೆ. ಈ ದೇವಾಲಯವನ್ನು ಸುಣ್ಣದ ಕಲ್ಲಿನಿಂದ ಕಟ್ಟಲಾಗಿದೆ. ಈ ದೇವಾಲಯಕ್ಕೆ ಸ್ವರ್ಗ ದ್ವಾರ ಮತ್ತು ಮೋಕ್ಷ ದ್ವಾರಗಳೆಂದು ಎರಡು ದ್ವಾರಗಳಿವೆ. ಇವುಗಳ ಮೂಲಕ ಭಕ್ತಾದಿಗಳು ಮಂದಿರ ಪ್ರವೇಶ ಮಾಡಿ ನಿರ್ಗಮಿಸಬಹುದಾಗಿದೆ. ದ್ವಾರಕಾಧೀಶ ದೇಗುಲವು ಸಾರ್ವಜನಿಕ ದರ್ಶನಕ್ಕಾಗಿ ಬೆಳಗ್ಗೆ 7 ರಿಂದ ರಾತ್ರಿ 9.30ರವರೆಗೆ ತೆರೆದಿರುತ್ತದೆ. ಮಧ್ಯದಲ್ಲಿ 12.30 ರಿಂದ 5ರವರೆಗೆ ಮುಚ್ಚಿರುತ್ತದೆ.