ಉತ್ತರಾಖಂಡದ ನೈನಿತಾಲ್ ಜಿಲ್ಲೆಯಲ್ಲಿರುವ ಜೆಯೋಲಿಕೋಟ್ಮನಮೋಹಕ ಪ್ರವಾಸಿ ತಾಣ. ಸಮುದ್ರ ಮಟ್ಟದಿಂದ ಇದು 1219 ಮೀಟರ್ ಎತ್ತರದಲ್ಲಿದೆ. ನೈನಿ ಸರೋವರದ ಹೆಬ್ಬಾಗಿಲಾಗಿರುವ ಈ ಪ್ರದೇಶದಲ್ಲಿ ಹೂ ಕೃಷಿ ನಡೆಯುತ್ತದೆ. ಈ ಪ್ರದೇಶದಲ್ಲಿ ಚಿಟ್ಟೆಗಳ ಸಂಖ್ಯೆಯೂ ಹೆಚ್ಚಿದ್ದು, ಅವುಗಳ ಮನಮೋಹಕ ಪ್ರಪಂಚದಲ್ಲಿ ವಿಹರಿಸಬಹುದಾಗಿದೆ. ಈ ಪ್ರದೇಶ ಕುಮೌನಿ ಪರ್ವತ ಪ್ರದೇಶದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 87 ಕ್ಕೆ ಹೊಂದಿಕೊಂಡಿದೆ.
ದೇಶದ ಅನೇಕ ಪ್ರಖ್ಯಾತ ಸಂತರು ಇದೇ ಸ್ಥಳದಲ್ಲಿ ಬಹಳ ಸಮಯ ಧ್ಯಾನ ಕೈಗೊಂಡಿದ್ದರು. ಅವರಲ್ಲಿ ಮುಖ್ಯವಾಗಿ ಸ್ವಾಮಿ ವಿವೇಕಾನಂದ, ಶ್ರೀ ಅರಬಿಂದೋ ಪ್ರಮುಖರು. ನೈನಿ ಸರೋವರ, ಮುಕ್ತೇಶ್ವರ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ, ರಾಮಘರ್ ಮತ್ತು ಪೆಂಗೋಟ್ ಹಳ್ಳಿಗಳು ಇಲ್ಲಿಯ ಪ್ರವಾಸೀ ಸಾಧ್ಯತೆಯನ್ನು ವಿಸ್ತರಿಸಿವೆ. ಜೆಯೋಲಿಕೋಟಿನ ತಾಜಾ ಪರಿಸರವು, ಪ್ರವಾಸಿಗರ ಮನಸ್ಸುನ್ನು ಆಹ್ಲಾದದಲ್ಲಿ ತೇಲಿಸುವುದು ಹುಸಿಯಲ್ಲ. ಪಿಯರ್, ಪಾಮ್, ಪೀಚ್ ಮತ್ತು ಕಾಲಕಾಲಕ್ಕೆ ಬಿಡುವ ಹೂಗಳು ಹಾಗೂ ಚಿಟ್ಟೆಗಳು ಮನಸ್ಸಿಗೆ ಖುಷಿ ಕೊಡುತ್ತವೆ.
ಪ್ರವಾಸಿಗರು, ರಜಾ ರೆಸಾರ್ಟ್ ಎಂದೇ ಕರೆಯಲ್ಪಡುವ ಕಾಟೇಜ್ ಅನ್ನು ಇಲ್ಲಿ ಭೇಟಿ ಮಾಡಬಹುದು. ತಾಯಿಯ ತೊಡೆಮೇಲೆ ಮಲಗಿದಷ್ಟು ಆಪ್ಯಾಯಮಾನವಾದ ಅನುಭೂತಿಯನ್ನು ಈ ಒಂದು ಪ್ರದೇಶವು ನೀಡುತ್ತದೆ ಎಂದರೆ ತಪ್ಪಾಗಲಾರದು. ಪ್ರಕೃತಿಯ ಮುಗ್ಧತೆ, ಹಣ್ಣಿನ ಮರಗಳು, ಕಾಲಕಾಲಕ್ಕೆ ಅರಳುವ ಹೂಗಳು ನಿಮ್ಮ ಕಣ್ಣಿಗೆ ರಸದೌತಣ ನೀಡುತ್ತವೆ. ಜೆಯೋಲಿಕೋಟ್ ನ ಪ್ರಶಾಂತ ವಾತಾವರಣದಲ್ಲಿ ಲಘು ಚಾರಣವನ್ನೂ ಮಾಡಬಹುದು. ಇಲ್ಲಿನ ನಿರ್ದಿಷ್ಟ ಮಾರ್ಗಗಳಲ್ಲಿ ನೈಸರ್ಗಿಕ ನಡಿಗೆಯನ್ನೂ ಕೈಗೊಳ್ಳಬಹುದು.
ಇಲ್ಲಿಗೆ ಭೇಟಿ ನೀಡಿದಾಗ, ಹಳೆಯ ದೇವಾಲಯಗಳು, ಸಮಾಧಿಗಳು, ವಾರ್ವಿಕ್ ಸಾಹಿಬ್ ಹೌಸ್ ಮತ್ತು ಅದರ ಹಿಂದಿನ ಇತರ ರಚನೆಗಳನ್ನು ನೋಡಬಹುದು. ಜೇನು ಸಾಕಾಣಿಕಾ ಕೇಂದ್ರಕ್ಕೆ ಭೇಟಿ ನೀಡಿ ಜೇನು ಸಾಕಣೆ, ಜೇನು ತುಪ್ಪ ಸಂಗ್ರಹಿಸುವುದನ್ನು ಕಲಿಯಬಹುದು. ಇಲ್ಲಿ ಶಾಪಿಂಗ್ ಮಾಡುವುದೂ ಉತ್ತಮ ಅನುಭವವನ್ನು ನೀಡುತ್ತದೆ. ಈಗಷ್ಟೇ ಕಿತ್ತು ತಂದ ಹಣ್ಣುಗಳು, ತಾಜಾ ಜೇನುತುಪ್ಪ ಬಾಯಲ್ಲಿ ನೀರೂರಿಸುತ್ತದೆ. ಕಿವಿಸ್, ಆಲಿವ್ ಹಾಗೂ ಸ್ಟ್ರಾಬೆರಿ ಹಣ್ಣುಗಳು ಸೇರಿದಂತೆ ತಾಜಾ ಹೂವಿನ ಜೇನು ಇಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಲಭ್ಯವಿರುತ್ತವೆ. ಇಲ್ಲಿನ ಅಂಗಡಿಗಳಲ್ಲಿ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಇದನ್ನು ಮಾರುತ್ತಾರೆ.
ಜೆಯೋಲಿಕೋಟ್ಗೆ ರೈಲು, ವಿಮಾನ ಹಾಗೂ ರಸ್ತೆ ಮಾರ್ಗಗಳ ಮೂಲಕ ಬರಬಹುದು. ಪಂತನಗರ್ ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣ. ಇಲ್ಲಿಂದ ದೆಹಲಿಗೆ ನಿರಂತರವಾಗಿ ವಿಮಾನಗಳು ಹಾರಾಡುತ್ತವೆ. ಜೆಯೋಲಿಕೋಟ್ ಕೇಂದ್ರದಿಂದ 18 ಕಿಮೀ ದೂರದಲ್ಲಿರುವ ಕಥ್ಗೊಡಮ್ ರೈಲು ನಿಲ್ದಾಣದ ಮೂಲಕವೂ ಇಲ್ಲಿಗೆ ಬರಬಹುದು. ಹತ್ತಿರದ ಪ್ರಮುಖ ನಗರಗಳೊಂದಿಗೆ ಉತ್ತಮ ಬಸ್ ಸಂಪರ್ಕವೂ ಇದೆ.