ದೀಪಾವಳಿಯ ನಂತರ ದೇಶದೆಲ್ಲೆಡೆ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ನೀವು ಗಾಳಿಯು ಶುದ್ಧವಾಗಿರುವ ಮತ್ತು ಪ್ರಕೃತಿಯ ಮಡಿಲಲ್ಲಿರುವ ಗಿರಿಧಾಮಕ್ಕೆ ಭೇಟಿ ನೀಡಬಹುದು. ಮುನ್ನಾರ್ ಕೂಡ ಇಂತಹ ಗಿರಿಧಾಮಗಳಲ್ಲಿ ಒಂದಾಗಿದ್ದು, ಇದು ಪ್ರವಾಸಿಗರನ್ನು ವರ್ಷಪೂರ್ತಿ ಆಕರ್ಷಿಸುತ್ತದೆ. ಈ ಗಿರಿಧಾಮದ ಸೌಂದರ್ಯ ನೋಡಿದವರು ಇದನ್ನು "ಭೂಮಿಯ ಮೇಲಿನ ಸ್ವರ್ಗ" ಎಂದೇ ಕರೆಯುತ್ತಾರೆ. ನೀವು ಪ್ರಕೃತಿ ಪ್ರಿಯರಾಗಿದ್ದರೆ ಮುನ್ನಾರ್ ಗಿರಿಧಾಮಕ್ಕೆ ಭೇಟಿ ನೀಡಲೇಬೇಕು.
ಮುನ್ನಾರ್ ಗಿರಿಧಾಮ ಕೇರಳದಲ್ಲಿದೆ ಮತ್ತು ಇಲ್ಲಿನ ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಪ್ರವಾಸಿಗರು ಮುನ್ನಾರ್ನಲ್ಲಿ ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್ ಮಾಡಬಹುದು ಮತ್ತು ನೇಚರ್ ವಾಕಿಂಗ್ ಆನಂದಿಸಬಹುದು. ಎತ್ತರವಾಗಿರುವ ಬೆಟ್ಟಗಳು ಮತ್ತು ಜಲಪಾತಗಳನ್ನು ಹತ್ತಿರದಿಂದ ನೋಡಬಹುದು. ಅಷ್ಟೇ ಅಲ್ಲ, ಸಾಹಸವನ್ನು ಮಾಡಬಹುದು ಮತ್ತು ಬೋಟಿಂಗ್ ಅನ್ನು ಆನಂದಿಸಬಹುದು.
ಮುನ್ನಾರ್ನಲ್ಲಿರುವ ಪ್ರವಾಸಿ ಆಕರ್ಷಣೆಗಳು
ಎಕೋ ಪಾಯಿಂಟ್: ಎಕೋ ಪಾಯಿಂಟ್ ಮುನ್ನಾರ್ ನಿಂದ 15 ಕಿಲೋಮೀಟರ್ ದೂರದಲ್ಲಿ ಸಮುದ್ರ ಮಟ್ಟದಿಂದ 600 ಅಡಿ ಎತ್ತರದಲ್ಲಿದೆ. ಇಲ್ಲಿ ಧ್ವನಿ ಪ್ರತಿಧ್ವನಿಸುತ್ತದೆ. ಅದಕ್ಕೆ ಇದು "ಎಕೋ ಪಾಯಿಂಟ್" ಎಂದು ಹೆಸರು ಪಡೆದುಕೊಂಡಿದೆ. ಇದು ಮಟ್ಟುಪೆಟ್ಟಿ ಅಣೆಕಟ್ಟು ಮತ್ತು ಕುಂಡಲ ಸರೋವರದ ನಡುವೆ ಟಾಪ್ ಸ್ಟೇಷನ್ಗೆ ಹೋಗುವ ಮಾರ್ಗದಲ್ಲಿ ನೆಲೆಗೊಂಡಿರುವ ಒಂದು ಸುಂದರ ಸ್ಥಳವಾಗಿದೆ. ಮುನ್ನಾರ್ನಲ್ಲಿ ಭೇಟಿ ನೀಡಬೇಕಾದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.

ಸರೋವರದ ದಂಡೆಯ ಮೇಲಿರುವ ಸ್ಥಳದಿಂದ ಜೋರಾಗಿ ಕರೆದರೆ ಸುತ್ತಮುತ್ತಲಿನ ಬೆಟ್ಟಗಳಿಂದ ಪ್ರತಿಧ್ವನಿ ಹಿಂತಿರುಗುತ್ತದೆ. ಹಸಿರು ಬೆಟ್ಟಗಳ ಮಧ್ಯೆ ಸುಂದರ ಪರಿಸರ ಹೊಂದಿರುವ ಈ ರಮಣೀಯ ತಾಣದಲ್ಲಿ ಟ್ರೆಕ್ಕಿಂಗ್ ಮತ್ತು ನೇಚರ್ ವಾಕಿಂಗ್ ಜನಪ್ರಿಯ ಚಟುವಟಿಕೆಗಳಾಗಿವೆ. ತಾಜಾ ಪರ್ವತ ಗಾಳಿ, ಮಂಜು ಮುಸುಕಿದ ಬೆಟ್ಟಗಳು ಮತ್ತು ವಿಹಂಗಮ ನೋಟವನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದು. ಛಾಯಾಗ್ರಹಣಕ್ಕೆ ಇದು ಅದ್ಭುತ ಸ್ಥಳವಾಗಿದೆ. ಎಕೋ ಪಾಯಿಂಟ್ನಲ್ಲಿ ಬೋಟಿಂಗ್ ಕೂಡ ಲಭ್ಯವಿದೆ. ಈ ಸಂಪೂರ್ಣ ಪ್ರದೇಶವು ಹಚ್ಚ ಹಸಿರಿನ ಹುಲ್ಲುಗಾವಲುಗಳು ಮತ್ತು ಪರ್ವತಗಳಿಂದ ಆವೃತವಾಗಿದೆ.
ಎರವಿಕುಲಂ ರಾಷ್ಟ್ರೀಯ ಉದ್ಯಾನವನ: ಪ್ರವಾಸಿಗರು ಮುನ್ನಾರ್ನಲ್ಲಿರುವ ಎರವಿಕುಲಂ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ಸೇರಿಸಲಾಗಿದೆ. ಕೇರಳದ ಮೊದಲ ರಾಷ್ಟ್ರೀಯ ಉದ್ಯಾನವನವಾಗಿ 1978 ರಲ್ಲಿ ಸ್ಥಾಪಿಸಲಾದ ಎರವಿಕುಲಂ ರಾಷ್ಟ್ರೀಯ ಉದ್ಯಾನವನದ ಪ್ರಾಥಮಿಕ ಗುರಿಯು ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್ ಅನ್ನು ರಕ್ಷಿಸುವುದು. ಇಂದು ಇದು ವನ್ಯಜೀವಿ ಉತ್ಸಾಹಿಗಳನ್ನು ತನ್ನ ಶ್ರೀಮಂತ ಜೀವವೈವಿಧ್ಯದೊಂದಿಗೆ ಕೈಬೀಸಿ ಕರೆಯುತ್ತದೆ. ಇಲ್ಲಿ 130 ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು, 26 ಸಸ್ತನಿ ಪ್ರಭೇದಗಳು ಮತ್ತು ಅಸಂಖ್ಯಾತ ಚಿಟ್ಟೆಗಳು, ಉಭಯಚರಗಳು ಮತ್ತು ಸರೀಸೃಪಗಳು ಇವೆ. ಈ ಉದ್ಯಾನವನವನ್ನು "ನೀಲಕುರಿಂಜಿ ನಾಡು" ಎಂದೂ ಕರೆಯಲಾಗುತ್ತದೆ. ಮುನ್ನಾರ್ ತಲುಪಿದ ನಂತರ, ಈ ರಾಷ್ಟ್ರೀಯ ಉದ್ಯಾನವನವನ್ನು ತಲುಪಲು ನೀವು ರಾಜಮಲಾಗೆ ಹೋಗುವ ರಸ್ತೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಕುಂಡಲ ಸರೋವರ: ಮುನ್ನಾರ್ನಿಂದ 20 ಕಿ.ಮೀ. ದೂರದಲ್ಲಿದೆ ಕುಂಡಲ ಸರೋವರ. ಟಾಪ್ ಸ್ಟೇಷನ್ಗೆ ಹೋಗುವ ಮಾರ್ಗದಲ್ಲಿ ನೆಲೆಗೊಂಡಿರುವ ಇದು ಒಂದು ಸುಂದರವಾದ ಸರೋವರವಾಗಿದೆ. ಮುನ್ನಾರ್ನಲ್ಲಿ ಭೇಟಿ ನೀಡಬಹುದಾದ ರಮಣೀಯ ಸ್ಥಳಗಳಲ್ಲಿ ಇದು ಒಂದಾಗಿದೆ. ಸರೋವರದಲ್ಲಿ ಬೋಟಿಂಗ್ ಸೌಲಭ್ಯವಿದ್ದು, ಕಾಶ್ಮೀರಿ ದೋಣಿಗಳಲ್ಲಿ ದೋಣಿ ವಿಹಾರ ಮಾಡುವ ತರಹದ ವಿಶಿಷ್ಟ ಅನುಭವ ವಿಶೇಷ ಆಕರ್ಷಣೆಯಾಗಿದೆ. ಈ ದೋಣಿಗಳನ್ನು ಶಿಕಾರಾ ದೋಣಿಗಳು ಎಂದೂ ಕರೆಯುತ್ತಾರೆ. ಕುಂಡಲ ಸರೋವರವು ಮುನ್ನಾರ್ನಲ್ಲಿರುವ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಕುಂಡಲದಾದ್ಯಂತ ಹರಡಿರುವ ಟೀ ಎಸ್ಟೇಟ್ಗಳು ಕಣ್ಣಿಗೆ ನಿಜವಾದ ಹಬ್ಬ.

ರೋಸ್ ಗಾರ್ಡನ್: ನೀವು ಮುನ್ನಾರ್ಗೆ ಭೇಟಿ ನೀಡುತ್ತಿದ್ದರೆ ಇಲ್ಲಿರುವ ಗುಲಾಬಿ ಉದ್ಯಾನವನ್ನೂ ನೋಡಿ. ಈ ಉದ್ಯಾನವು 2 ಎಕರೆಗಳಷ್ಟು ವಿಸ್ತಾರವಾಗಿದೆ. ರೋಸ್ ಗಾರ್ಡನ್ ಸಮುದ್ರ ಮಟ್ಟದಿಂದ 3,500 ಅಡಿ ಎತ್ತರದಲ್ಲಿದೆ. ಮುನ್ನಾರ್ನ ಹೃದಯಭಾಗದಲ್ಲಿರುವ ಇದು ಒಂದು ಅದ್ಭುತವಾದ ಸಸ್ಯೋದ್ಯಾನವಾಗಿದೆ. ಪಶ್ಚಿಮ ಘಟ್ಟಗಳ ಪ್ರಶಾಂತವಾದ ಬೆಟ್ಟಗಳ ನಡುವೆ ಇರುವ ಇದು ಅಸಂಖ್ಯಾತ ವಿಶಿಷ್ಟ ಮತ್ತು ಅಪರೂಪದ ಸಸ್ಯವರ್ಗದಿಂದ ಕೂಡಿದೆ. ಈ ಉದ್ಯಾನವು ಸಸ್ಯಶಾಸ್ತ್ರದ ಉತ್ಸಾಹಿಗಳಿಗೆ ಮತ್ತು ಛಾಯಾಗ್ರಾಹಕರಿಗೆ ಹೇಳಿ ಮಾಡಿಸಿದ ತಾಣವಾಗಿದೆ.


Click it and Unblock the Notifications

















