ಪ್ರವಾಸಿಗರು ಇಲ್ಲಿನ ಕರಿಘಟ್ಟ ದೇವಾಲಯಕ್ಕೆ ಸಮಯಾವಕಾಶ ದೊರೆತರೆ ಭೇಟಿ ಕೊಡಬಹುದು. ಕರಿಘಟ್ಟ ದೇವಾಲಯವು ಕರಿಘಟ್ಟ ಬೆಟ್ಟದ ಮೇಲೆ ನೆಲೆಸಿದ್ದು, ಸಮುದ್ರ ಮಟ್ಟದಿಂದ 2697 ಮೀಟರ್ ಎತ್ತರದಲ್ಲಿದೆ. ಇದು ವೈಕುಂಠ ಶ್ರೀನಿವಾಸ ಅಥವಾ ಭಗವಾನ್ ವಿಷ್ಣುವಿನ ದೇವಾಲಯವಾಗಿದ್ದು, ಇಲ್ಲಿನ ಗರ್ಭಗುಡಿಯಲ್ಲಿ 6 ಅಡಿ ಎತ್ತರ ಕಪ್ಪು ಮೂರ್ತಿಯನ್ನು ನೋಡಬಹುದು. ಈ ಮೂರ್ತಿಯನ್ನು ಭೃಗು ಮಹರ್ಷಿ ಪ್ರತಿಷ್ಟಾಪಿಸಿದರೆಂದು ನಂಬಲಾಗಿದೆ. ಈ ದೇವಾಲಯದ ಗರ್ಭಗುಡಿಯ ಮಧ್ಯದಲ್ಲಿ ವಿಷ್ಣುವಿನ ಮೂರ್ತಿಯಿದ್ದರೆ, ಪದ್ಮಾವತಿ ದೇವಿಯ ಮೂರ್ತಿಯು ಗರ್ಭಗುಡಿಯ ಪಶ್ಚಿಮ ಭಾಗದಲ್ಲಿದೆ.ಪ್ರವಾಸಿಗರು ಈ ದೇವಾಲಯದ ಸಮೀಪದಲ್ಲಿ ಗರುಡನ ಮೂರ್ತಿಯನ್ನು ಮತ್ತು ಭಗವಾನ್ ಮಹಾವಿಷ್ಣುವಿನ ಹೆಜ್ಜೆ ಗುರುತುಗಳನ್ನು ಕಾಣಬಹುದು. ಈ ದೇವಾಲಯದ ಪ್ರಾಂಗಣದಲ್ಲಿ ದೊಡ್ಡ ಕಲ್ಯಾಣ ಮಂಟಪವಿದ್ದು, ಇಲ್ಲಿ ಮದುವೆಯಾಗುವುದರಿಂದ ದಂಪತಿಗಳಿಗೆ ತುಂಬ ಶುಭವಾಗುತ್ತದೆಂಬ ನಂಬಿಕೆ ಮನೆಮಾಡಿದೆ. ಪ್ರವಾಸಿಗರು ಇಲ್ಲಿಂದ ಶ್ರೀರಂಗಪಟ್ಟಣದ ಮತ್ತು ಮೈಸೂರಿನ ಸುಂದರನೋಟವನ್ನು ಹಾಗು ಕಾವೇರಿ ,ಲೋಕಪಾವನಿ ನದಿಗಳು ಕೂಡುವುದನ್ನು ಈ ಬೆಟ್ಟದ ತುದಿಯಿಂದ ನೋಡಬಹುದು. ಈ ದೇವಾಲಯದಲ್ಲಿ ಪ್ರತಿ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ನಡೆಯುವ ರಥೋತ್ಸವವು ಪ್ರವಾಸಿಗರು ಇಲ್ಲಿಗೆ ಭೇಟಿಕೊಡಲು ಪ್ರಶಸ್ತವಾದ ಸಮಯವಾಗಿದೆ.