ಪ್ರವಾಸಿಗರು ನಂಜನಗೂಡಿಗೆ ಭೇಟಿಕೊಟ್ಟಾಗ ಇಲ್ಲಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡಬಹುದು. ಇದು ಶ್ರೀಕಂಠೇಶ್ವರ ದೇವಸ್ಥಾನ ಎಂದು ಸಹಾ ಕರೆಯಲ್ಪಡುತ್ತದೆ. ಇದು ಶಿವನ ದೇವಾಲಯವಾಗಿದ್ದು, ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಈ ದೇವಾಲಯವು ಪ್ರಾಚೀನ ಕಾಲದಿಂದಲು ಶಿವನ ಆವಾಸ ಸ್ಥಾನವಾಗಿತ್ತು ಎಂಬ ಕುರಿತು ದಂತಕಥೆಗಳು ಇವೆ.ಈ ದೇವಾಲಯವನ್ನು ಗಂಗರ ಅರಸರು ಕಟ್ಟಿಸಿದರು, ನಂತರ ಹೊಯ್ಸಳರು ಇದನ್ನು ಜೀರ್ಣೋದ್ಧಾರ ಮಾಡಿದರು. ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ಹೈದರಾಲಿ ಮತ್ತು ಟಿಪ್ಪು ಸುಲ್ತಾನರೂ ಈ ದೇವಾಲಯದೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಿದ್ದರು. ಇತಿಹಾಸಕಾರರ ಪ್ರಕಾರ ಟಿಪ್ಪು ಸುಲ್ತಾನನ ಪಟ್ಟದ ಆನೆಗೆ ಕಣ್ಣಿನ ಬೇನೆ ಆಗಿ ಅದು ವಾಸಿಯಾಗದಿದ್ದಾಗ, ಕೊನೆಗೆ ಅದು ಹಕಿಂ ನಂಜುಂಡನ ಪ್ರಾರ್ಥನೆಯಿಂದ ವಾಸಿಯಾಯಿತು. ಈ ದೇವಾಲಯಕ್ಕೆ ವಿಶೇಷ ಶಕ್ತಿ ಇರುವುದಾಗಿ ಇಲ್ಲಿನ ಸ್ಥಳೀಯರು ಇಂದಿಗು ನಂಬುತ್ತಾರೆ.ಇಲ್ಲಿ ದೊಡ್ಡ ಜಾತ್ರೆ ಎಂದು ಕರೆಯಲ್ಪಡುವ ರಥೋತ್ಸವವು, ಪ್ರತಿ ವರ್ಷ ಎರಡು ಬಾರಿ ಅಪಾರ ಜನಸ್ತೋಮದ ನಡುವೆ ನಡೆಯುತ್ತದೆ. ಗಣಪತಿ, ಪಾರ್ವತಿ ದೇವಿ, ಶ್ರೀಕಂಠೇಶ್ವರ ಸ್ವಾಮಿ, ಸುಬ್ರಮಣ್ಯ ಸ್ವಾಮಿ ಮತ್ತು ಚಂಡಿಕೇಶ್ವರ ಸ್ವಾಮಿಗಳ ಮೂರ್ತಿಗಳನ್ನು ಪ್ರತ್ಯೇಕ ರಥಗಳಲ್ಲಿ ಇಟ್ಟು, ಅವುಗಳಿಗೆ ಪೂಜೆಸಲ್ಲಿಸಿ ನಂತರ ರಥೋತ್ಸವ ಮಾಡಲಾಗುತ್ತದೆ.