ನಂದಿ ಬೆಟ್ಟವು ರಾಜಕೀಯವಾಗಿಯೂ ಗುರುತಿಸಿಕೊಂಡಿದೆ. ಹೇಗೆಂದರೆ ಬ್ರಿಟಿಷರ ವಾಸ್ತು ಶೈಲಿಯಲ್ಲಿ ನಿಮಾರ್ಣಗೊಂಡಿರುವ ನೆಹರು ನಿಲಯ ಹೆಸರಿನ ಬಂಗಲೆ ಇಲ್ಲಿದೆ. ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು ಕೆಲಕಾಲ ಇಲ್ಲಿ ತಂಗಿದ್ದರ ನೆನಪಿಗಾಗಿ ಅವರ ಹೆಸರನ್ನೆ ಇಲ್ಲಿನ ಬಂಗಲೆಗೆ ಇಡಲಾಗಿದೆ. ಈ ಬಂಗಲೆಯು ಆಗಿನ ಮೈಸೂರು ಕಮೀಷನರ್ ಸರ್ ಮಾರ್ಕ್ ಕಬ್ಬನ್ ಕೆಸಿಬಿ ಅವರ ಬೇಸಿಗೆಯ ತಂಗುದಾಣವಾಗಿತ್ತಂತೆ. ಈ ಸ್ಥಳವು 1986 ರ ಸಾರ್ಕ್ ಸಮ್ಮೇಳನಕ್ಕೆ ಸಾಕ್ಷಿಯಾಗಿ ಮಹತ್ವದ ಸ್ಥಳವೆನಿಸಿಕೊಂಡಿದೆ.ಭಾರತ ಸರಕಾರದ ತೋಟಗಾರಿಕಾ ಸಚಿವಾಲಯವು ನೆಹರು ನಿಲಯವನ್ನು ಅತಿಥಿ ಗೃಹವನ್ನಾಗಿ ಮಾರ್ಪಾಡು ಮಾಡಿದೆ. ಪ್ರವಾಸಿಗರಿಗೆ ಬಂಗಲೆಯ ಪ್ರವೇಶ ನಿಷೇಧಿಸಲಾಗಿದ್ದರೂ ಬಂಗಲೆಯೊಂದಿಗೆ ತಮ್ಮ ಫೋಟೋವನ್ನು ತೆಗೆದುಕೊಳ್ಳಲು ಅನುಮತಿ ನೀಡಿದೆ. ಅಲ್ಲದೇ ಮಕ್ಕಳೊಂದಿಗೆ ಬರುವ ಪ್ರವಾಸಿಗರಿಗೆ ಇಲ್ಲಿ ಆಟವಾಡಲು, ಊಟ ಮಾಡಲು ಸ್ಥಳಾವಕಾಶ ಕಲ್ಪಿಸಲಾಗಿರುವುದರಿಂದ ಸುಂದರ ಕ್ಷಣಗಳನ್ನು ಇಲ್ಲಿ ಕಳೆಯಬಹುದಾಗಿದೆ.