ಮಂಗಳೂರಿನಿಂದ ಉತ್ತರ ಭಾಗದಲ್ಲಿ 10 ಕಿ.ಮೀ. ದೂರದಲ್ಲಿರುವ ಪನ್ನಂಬೂರು ಬಳಿ ತಣ್ಣೀರಬಾವಿ ಕಡಲ ತೀರವಿದೆ. ನದಿಯ ನೀರು ಸಮುದ್ರವನ್ನು ಸೇರುವ ವಿಹಂಗಮ ನೋಟವನ್ನು ಈ ತಾಣ ವೀಕ್ಷಕರಿಗೆ ನೀಡುತ್ತದೆ. ಇಲ್ಲಿ ಬಂದವರಿಗೆ ನದಿ ನೀರಿನ ಶಾಂತತೆ ಹಾಗೂ ಕಡಲಿನ ಅಲೆಗಳ ಅಬ್ಬರ ಎರಡೂ ನೋಡಲು ಸಿಗುತ್ತದೆ. ಮಂಗಳೂರು ನಗರದಿಂದ ಈ ಮಾರ್ಗವಾಗಿ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಗಳು ತೆರಳುತ್ತಿರುತ್ತವೆ. ಇದರಿಂದ ಇಲ್ಲಿಗೆ ತಲುಪುವುದು ಅತ್ಯಂತ ಸುಲಭ. ಇದು ಅತ್ಯಂತ ದಟ್ಟವಾಗಿ ಜನರಿಂದ ತುಂಬಿರುವುದಿಲ್ಲ. ನಿರಾಳವಾಗಿದ್ದು, ವೀಕ್ಷಕರಿಗೆ ಅತ್ಯಂತ ಸಂತಸ ನೀಡುತ್ತದೆ. ನೈಸರ್ಗಿಕ ವಾತಾವರಣದ ನಿಜವಾದ ಚಿತ್ರಣ ಇಲ್ಲಿ ಸಿಗುತ್ತದೆ. ಅಲ್ಲದೇ ಇಲ್ಲಿ ಯಾವುದೇ ಕೃತಕ ಆಕರ್ಷಣೆಗಳು, ನಿರ್ಮಾಣವಾಗಿರದ ಕಾರಣ ನಿಸರ್ಗದ ಮಡಿಲಲ್ಲಿಯೇ ಇರುವಂತೆ ಭಾಸವಾಗುತ್ತದೆ. ನಿಸರ್ಗವನ್ನು ನೈಜವಾಗಿ ಅನುಭವಿಸಲು ಇಚ್ಛಿಸುವವರು ಇಲ್ಲಿಗೆ ಆಗಮಿಸಬಹುದು.
ಈ ಕಡಲತೀರದ ಇನ್ನೊಂದು ಭಾಗದಲ್ಲಿ ಒಂದು ಫೈರ್ಡ್ ಬಾರ್ಜ್ ಇದೆ. ಇಲ್ಲಿಗೆ ರಸ್ತೆ ಹಾಗೂ ದೋಣಿ ಮೂಲಕ ತೆರಳಬಹುದು. ದೋಣಿ ಮೂಲಕ ಸಾಗಿದರೆ ಗುರುಪುರ ನದಿ ಮೂಲಕ ಸುಲ್ತಾನ್ ಬತೇರಿ ತಲುಪಬಹುದು. ದುರಂತ ಎಂದರೆ ಈ ಕಡಲತೀರವನ್ನೂ ಸರ್ಕಾರ ಸರಿಯಾಗಿ ಗುರುತಿಸಿಲ್ಲ. ಇದನ್ನೊಂದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಕಾರ್ಯ ಈ ನಿಟ್ಟಿನಲ್ಲಿ ಆಗಿಲ್ಲ. ನಿರ್ಲಕ್ಷ್ಯದಿಂದ ಇಲ್ಲಿ ಸಾಕಷ್ಟು ಅಪಘಾತಗಳು, ಅನಾಹುತಗಳು ಆಗುತ್ತಿರುತ್ತವೆ. ಈ ಸಂದರ್ಭದಲ್ಲಿ ಸೂಕ್ತ ಜೀವ ರಕ್ಷಕ ಸೌಲಭ್ಯ, ಸಲಕರಣೆ ಪೂರೈಕೆ ಸರ್ಕಾರದಿಂದ ಆಗುತ್ತಿಲ್ಲ. ಇದರಿಂದ ಜನರಿಗೆ ತಿಳಿಸುವ ಸಂದೇಶ ಎಂದರೆ ಸೌಂದರ್ಯವನ್ನು ಅನುಭವಿಸಿ, ಆದರೆ ಜಾಗೃತೆಯಿಂದ ಎಂಬುದಾಗಿದೆ.