ಪೋರ್ಚುಗೀಸರಿಂದ 1568 ರಲ್ಲಿ ಈ ಕ್ಯಾಥೆಡ್ರಲ್ ನಿರ್ಮಾಣವಾಗಿದೆ. ರೋಮನ್ ವಿನ್ಯಾಸದ ವಾಸ್ತುಶಿಲ್ಪ ಹೊಂದಿದ್ದು ಅತ್ಯಂತ ಹಳೆಯದಾಗಿರುವ ಈ ಚರ್ಚ್ ಅನ್ನು 1910 ರಲ್ಲಿ ನವೀಕರಿಸಲಾಗಿದೆ. ಮಂಗಳೂರಿನ ಹಂಪಕಟ್ಟಾ ಎಂಬ ಪ್ರದೇಶದ ಪ್ರಶಾಂತ ವಾತಾವರಣದಲ್ಲಿರುವ ಈ ಚರ್ಚ್ ನಗರಕ್ಕೆ ಹತ್ತಿರವಾಗಿಯೇ ಇದೆ. ಇದನ್ನು 1910 ರಲ್ಲಿ ಪ್ಯಾರಿಶ್ ಸಂತ ಪ್ರಾ. ಎಚ್.ಐ. ಬುಸಿನಿ ಎಂಬುವರು ಇಲ್ಲಿದ್ದ ಹಳೆ ಕಟ್ಟಡವನ್ನು ಕೆಡವಿ ಹೊಸ ಕಟ್ಟಡದ ನಿರ್ಮಾಣ ಆರಂಭಿಸಿದರು. ಈ ಕ್ಯಾಥೆಡ್ರಲ್ ಹೈಸ್ಕೂಲ್ ಸಹ ನಡೆಸುತ್ತಿದ್ದು, ಅದನ್ನು ರೊಸಾರಿಯೋ ಹೈಸ್ಕೂಲ್ ಎಂದು ಕರೆಯಲಾಗುತ್ತದೆ. ಅಲ್ಲದೇ ಇದು ಸೇಂಟ್ ವಿನ್ಸೆಟ್ ಪೌಲ್ ಸೊಸೈಟಿ ಕೂಡ ನಡೆಸುತ್ತಿದ್ದು, ಅದರ ಮೂಲಕ ಬಡವರು ಹಾಗೂ ಹಿಂದುಳಿದ ವರ್ಗದವರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಚರ್ಚ್ ಸದಾ ಒಂದಲ್ಲಾ ಒಂದು ದಾಳಿ, ಭೀತಿಗೆ ಒಳಗಾಗುತ್ತಲೇ ಬಂದಿದ್ದು, ಆಗಾಗ ಧಕ್ಕೆಗೂ ಒಳಗಾಗುತ್ತಿದೆ. ಈ ಇಡೀ ಕಟ್ಟಡವನ್ನು ಟಿಪ್ಪು ಸುಲ್ತಾನ್ ಆವರಿಸಿಕೊಂಡು ಸಂಪೂರ್ಣ ನಾಶಪಡಿಸಿದ್ದ. ನಂತರ ವಿದೇಶಿ ಪಡೆಗಳು 1784 ರಲ್ಲಿ ಇದನ್ನು ಮರು ನಿರ್ಮಿಸಿದವು. ಈ ಕ್ಯಾಥೆಡ್ರಲ್ ಡೋಮ್ನ್ನು ಒಳಗೊಂಡಿದ್ದು, ಅದರ ಮೇಲೆ ಶಿಲುಭೆ ನಿಲ್ಲಿಸಲಾಗಿದೆ. ರಾತ್ರಿ ಹೊತ್ತು ಮೀನುಗಾರಿಕೆಗೆ ತೆರಳುವವರಿಗೆ ದೀಪದ ಸೌಲಭ್ಯವನ್ನು ಇದು ಒದಗಿಸುತ್ತದೆ. ಇದಲ್ಲದೇ ಇಲ್ಲಿರುವ ವರ್ಜಿನ್ ಮೇರಿಯ ಚಿತ್ರ ಕೂಡ ಮೀನುಗಾರರು ಸಮುದ್ರದಲ್ಲಿ ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಕ್ಕಿದ್ದು ಎನ್ನಲಾಗುತ್ತದೆ. ಈ ರೀತಿ ಹತ್ತು ಹಲವು ಐತಿಹಾಸಿಕ ಹಿನ್ನೆಲೆಗಳು ಈ ಚರ್ಚ್ ಹಿಂದೆ ಇದೆ. ಈ ಮೂಲಕ ಇದೊಂದು ಮಹತ್ವದ ತಾಣ ಎನಿಸಿದೆ. ಅಲ್ಲದೇ ಇಲ್ಲಿಗೆ ಒಮ್ಮೆಯಾದರೂ ಭೇಟಿ ನೀಡಬೇಕು. ಅಷ್ಟು ಸುಂದರವಾದ ತಾಣ ಇದಾಗಿದೆ.