ಕೊಟ್ಟಾಯಂನಲ್ಲಿರುವ ಸರಸ್ವತಿ ದೇವಾಲಯ ಕೇರಳಾ ರಾಜ್ಯದ ಏಕೈಕ ಸರಸ್ವತಿ ದೇವಾಲಯವಾಗಿದೆ. ಇದನ್ನು ದಕ್ಷಿಣ ಮೂಕಾಂಬಿಕೆ ಎಂದೂ ಕರೆಯುತ್ತಾರೆ. ಈ ದೇವಾಲಯ ಚಿಂಗವಾನಂ ಸಮೀಪದಲ್ಲಿದೆ. ಸ್ಥಳಿಯರು ಹೇಳುವ ಪ್ರಕಾರ ಕಿಜೇಪುರಂ ನಂಬೂದರಿ ಎಂಬುವವರು ತಮಗೆ ಸಿಕ್ಕದ ಮೂರ್ತಿಯನ್ನು ಪೂರ್ವದಿಕ್ಕಿನ ಕಡೆಗೆ ಮುಖ ಮಾಡಿ ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಿದ್ದಾರೆ. ನಂತರ ಇವರಿಗೆ ಮತ್ತೊಂದು ವಿಗ್ರಹವೂ ಸಿಕ್ಕಿದ್ದು ಅದನ್ನು ಪಶ್ಚಿಮ ದಿಕ್ಕಿಗೆ ಪ್ರತಿಷ್ಠಾಪಿಸಿದ್ದಾರೆ. ಆದರೆ ಈ ವಿಗ್ರಹಕ್ಕೆ ಸರಿಯಾದ ರೂಪ ಇಲ್ಲದಿದ್ದರೂ ಇದೇ ಮೂರ್ತಿಯನ್ನು ಪೂಜಿಸಲಾಗುತ್ತಿದೆ. ಈ ಮೂರ್ತಿಯ ಸಮೀಪದಲ್ಲೇ ಇರುವ ಕಲ್ಲಿನ ದೀಪ ಸ್ಥಂಭದಲ್ಲಿ ಸದಾ ದೀಪ ಉರಿಯುತ್ತಲೇ ಇರುತ್ತದೆ. ಪೂರ್ವ ದಿಕ್ಕಿಗೆ ಮುಖ ಮಾಡಿರುವ ವಿಗ್ರಹದ ಸುತ್ತಲೂ ಪನಾತಿ ಕುಟ್ಟು ಚಿಡಿ ಗಿಡಗಳು ಬೆಳೆದಿವೆ. ಈ ಗಿಡಗಳನ್ನು ಕೀಳಲು ಅಥವಾ ಮುಟ್ಟಲು ಯಾರಿಗೂ ಬಿಡುವುದಿಲ್ಲ.
ನವರಾತ್ರಿ ಉತ್ಸವವನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು. ದೇವಾಲಯವು ಬೆಳಗ್ಗೆ 5:30 ರಿಂದ 11:30 ರವರೆಗೆ ಹಾಗೂ ಸಂಜೆ 5 ಗಂಟೆಯಿಂದ 7:30 ರವರೆಗೆ ತೆರೆದಿರುತ್ತದೆ.