ರಾಜಸ್ಥಾನಿನ ಅಲ್ವಾರ್ ಜಿಲ್ಲೆಯಲ್ಲಿರುವ ಕೆಸ್ರೋಲಿಯು ಒಂದು ಸಣ್ಣ ಹಳ್ಳಿಯಾಗಿದೆ. ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿ ಮೇಲೆ, ದೆಹಲಿಯಿಂದ 155 ಕಿ.ಮೀ ದೂರದಲ್ಲಿ ಈ ಹಳ್ಳಿಯು ನೆಲೆಸಿದೆ. ತನ್ನಲ್ಲಿರುವ 14ನೇ ಶತಮಾನದ ಕೋಟೆಯಿಂದಾಗಿ ಈ ಹಳ್ಳಿಯು ಹೆಸರುವಾಸಿಯಾಗಿದೆ. ಪ್ರಸಕ್ತ ಈ ಕೋಟೆಯನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ.
ಇದರ ಮೂಲವು ನಮ್ಮನ್ನು ಮಹಾಭಾರತದ ಮತ್ಸ್ಯ ಜನಪದ ಯುಗಕ್ಕೆ ಕೊಂಡೊಯ್ಯುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಕೆಸ್ರೋಲಿಯ ಕೋಟೆ ಮಾತ್ರವಲ್ಲದೆ, ವಿರಾಟ್ ನಗರದಲ್ಲಿರುವ ಬೌದ್ಧರ ವಿಹಾರವನ್ನು ಕೂಡ ನೋಡಬಹುದು. ಜನರ ನಂಬಿಕೆಯ ಪ್ರಕಾರ ಪಾಂಡವರು ತಮ್ಮ ವನವಾಸದ ಕೊನೆಯ ವರ್ಷವನ್ನು ವೇಷ ಬದಲಿಸಿ ಇಲ್ಲಿಯೆ ಕಳೆದಿದ್ದರೆನ್ನಲಾಗಿದೆ.
ಕೆಸ್ರೋಲಿಯ ಕುರಿತು...
ಕೆಸ್ರೋಲಿಯು ಇಲ್ಲಿರುವ ಕೋಟೆಯಿಂದಾಗಿ ಮಾತ್ರವಲ್ಲದೆ, ಸುಂದರವಾಗಿ ಹಸಿರಿನಿಂದ ಮೈತುಂಬಿಕೊಂಡಿರುವ ಭೂದೃಶ್ಯಗಳಿಂದಾಗಿಯೂ ಸಂದರ್ಶಕರಲ್ಲಿ ಹೆಸರುವಾಸಿಯಾಗಿದೆ. ಅಲ್ವಾರ ನಗರ ಮತ್ತು ದೆಹಲಿಗೆ ಹತ್ತಿರವಾಗಿರುವುದರಿಂದ ಇದೊಂದು ಜನಪ್ರಿಯ ವಿಕೇಂಡ್ ತಾಣವಾಗಿ ಬೆಳೆಯುತ್ತಿದೆ. ಪ್ರಾಣಿ ಹಾಗು ಪಕ್ಷಿ ಶಾಸ್ತ್ರಜ್ಞರಿಗು ಕೂಡ ಈ ಪ್ರದೇಶವು ಉಪಯೋಗಕರವಾಗಿದೆ.
ಕೆಸ್ರೋಲಿಗೆ ತಲುಪುವ ಬಗೆ
ಕೆಸ್ರೋಲಿಯನ್ನು ವಾಯು, ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ತಲುಪಬಹುದಾಗಿದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ಏರ್ ಪೊರ್ಟ್, ಕೆಸ್ರೋಲಿಗೆ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ವಾರ್ ರೈಲು ನಿಲ್ದಾಣವು ಹತ್ತಿರದ ರೈಲು ನಿಲ್ದಾಣವಾಗಿದೆ. ದೆಹಲಿ-ಜೈಪುರ್ ರಾಷ್ಟ್ರೀಯ ಹೆದ್ದಾರಿ ಮೇಲೆ, ದೆಹಲಿಯಿಂದ 155 ಕಿ.ಮೀ ದೂರದಲ್ಲಿ ಈ ಹಳ್ಳಿಯು ನೆಲೆಸಿರುವುದರಿಂದ ರಸ್ತೆಯ ಮೂಲಕವು ಸುಲಭವಾಗಿ ತಲುಪಬಹುದಾಗಿದೆ.
ಕೆಸ್ರೋಲಿಗೆ ಭೇಟಿ ನೀಡಲು ಉತ್ತಮ ಸಮಯ
ಅಕ್ಟೋಬರ್ ಮತ್ತು ಮಾರ್ಚ್ ನಡುವಿನ ಅವಧಿಯು ಕೆಸ್ರೋಲಿಗೆ ಭೇಟಿ ನೀಡಲು ಉತ್ತಮವಾಗಿದೆ. ಏಕೆಂದರೆ ಈ ಸಮಯವು ತಂಪಾದ ಮತ್ತು ಹಿತಕರವಾದ ವಾತಾವರಣದಿಂದ ಕೂಡಿರುತ್ತದೆ.