ಶ್ರೀನಗರದ ಅತ್ಯಂತಪ್ರಮುಖ ಆಕರ್ಷಣೆಯಾದ ಅಮರ್ನಾಥ ಗುಹೆಯು ಲಯಕರ್ತ ಭಗವಾನ್ ಶಿವನಿಗೆ ಮುಡಿಪಾಗಿದೆ. ಸಮುದ್ರಮಟ್ಟದಿಂದ 3888 ಮೀ. ಎತ್ತರದಲ್ಲಿ ನೆಲೆಸಿರುವ ಈ ಗುಹೆಗಳು ಸುಮಾರು 5,000 ವರ್ಷಗಳಷ್ಟು ಪುರಾತನವಾದುದು ಎಂದು ನಂಬಲಾಗಿದೆ. ಅಮರ್ನಾಥ್ ಗುಹೆಯ ಉದ್ದ, ಎತ್ತರ ಹಾಗು ಅಗಲವು ಕ್ರಮವಾಗಿ 60ಅಡಿ, 15ಅಡಿ ಮತ್ತು 30ಅಡಿ. ಈ ಗುಹೆಯಲ್ಲಿ ನೈಸರ್ಗಿಕವಾಗಿ ರೂಪಗೊಂಡಂತಹ ಹಿಮದ 'ಶಿವಲಿಂಗ' ವಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕರು ದರ್ಶನ ಪಡೆದು ಪುನಿತರಾಗಲು ಆಗಮಿಸುತ್ತಾರೆ.
ಅಮರ ಅಂದರೆ ಚಿರಂಜೀವಿ ಹಾಗು ನಾಥ ಅಂದರೆ ದೇವರು ಎಂಬ ಎರಡು ಪದಗಳಿಂದ ಈ ಸ್ಥಳವು ಅಮರನಾಥ ಎಂಬ ಹೆಸರನ್ನು ಪಡೆದಿದೆ. ಪೌರಾಣಿಕ ಕಥೆಯ ಪ್ರಕಾರ, ಒಮ್ಮೆ ಪಾರ್ವತಿಯು ತನ್ನ ಪತಿ ಶಿವನನ್ನು ಕುರಿತು, ತನಗೆ ಅಮರತ್ವದ ರಹಸ್ಯವನ್ನು ತಿಳಿಸಬೇಕೆಂದು ಬೇಡಿಕೊಳ್ಳುತ್ತಾಳೆ. ಇದರನ್ವಯ ಪರಶಿವನು, ಯಾರೂ ಕೇಳಿಸಿಕೊಳ್ಳಬಾರದೆಂಬ ಉದ್ದೇಶದಿಂದ ಈ ಗುಹೆಗೆ ಆಕೆಯನ್ನು ಕರೆತಂದು ರಹಸ್ಯವನ್ನು ಉಪದೇಶಿಸುತ್ತಾನೆ.
ಜುಲೈ ಹಾಗು ಅಗಸ್ಟ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದುದೆಂದು ಪರಿಗಣಿಸಲಾಗಿದೆ. ಆದರೂ ಮೇ ಯಿಂದ ಸೆಪ್ಟಂಬರ್ ಮಧ್ಯದಲ್ಲಿನ ಅವಧಿಯಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಭಾರತೀಯ ಪ್ಯಾರಮಿಲಿಟರಿ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಕಟ್ಟುಬದ್ಧಾದ ರಕ್ಷಣೆಯು ಈ ಸ್ಥಳಕ್ಕಿದ್ದು, ಪ್ರವಾಸಿಗರು ನಿಶ್ಚಿಂತೆಯಿಂದ ದರ್ಶನ ಪಡೆಯಬಹುದು. ಆದರೆ ಗಮನದಲ್ಲಿಡಬೇಕಾದ ಅಂಶವೆಂದರೆ, ಈ ಎರಡೂ ಇಲಾಖೆಗಳಿಂದ ಪೂರ್ವಾನುಮತಿಯಿಲ್ಲದೆ ಈ ತಾಣಕ್ಕೆ ಪ್ರವೇಶಿಸುವಂತಿಲ್ಲ.