ಹೆಸರೇ ಸೂಚಿಸುವಂತೆ ಆನಂದ ಭವನ ಆನಂದ ತುಂಬಿಕೊಂಡಿರುವ ಮನೆ ಎಂದೇ ಹೇಳಬಹುದು. ಇದು ನೆಹರೂ-ಗಾಂಧಿ ವಂಶದ ಪೂರ್ವಿಕರಿಗೆ ಸೇರಿದ ಒಂದು ದಿವ್ಯವಾದ ಆಲಯ. ಆನಂದ ಭವನವನ್ನು ಸ್ವರಾಜ್ ಭವನ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸ್ವತಂತ್ರ ಭಾರದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ತಂದೆ ಮೋತಿಲಾಲ್ ನೆಹರೂ 19ನೇ ಶತಮಾನದ ಪ್ರಸಿದ್ಧ ರಾಜಕಾರಣಿ. ಶಿಥಿಲಾವಸ್ಥೆಯಲ್ಲಿದ್ದಾಗ ಈ ಮನೆಯನ್ನು ಮೋತಿಲಾಲ್ ಅವರು ಖರೀದಿ ಮಾಡಿದ್ದರು. ಇದರ ಜೀರ್ಣೋದ್ಧಾರ ಮಾಡಿದ ಅವರು ಯುರೋಪ್ ಮತ್ತು ಚೀನಾದಿಂದ ಪೀಠೋಪಕರಣಗಳನ್ನು ಖರೀದಿಸಿ ತಂದು, ಸುಸಜ್ಜಿತವನ್ನಾಗಿ ಮಾಡಿ ಆಂಗ್ಲ ಶೈಲಿ ಪ್ರತಿಬಿಂಬಿಸುವಂತೆ ಮಾಡಿದರು.
ಇದು ಕಾಲಾನುಕ್ರಮೇಣ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಅನೇಕ ರಾಜಕೀಯ ಮುಖಂಡರು ಸೇರುವ ಸ್ಥಳವಾಯಿತು. ಇಂದು ಈ ಕಟ್ಟಡ ಖಾಲಿಯಿದ್ದು, ಇದರ ಸಂರಕ್ಷಣೆ ಮಾಡಿಕೊಂಡು ಬರುತ್ತಿರುವವರು ಜವಾಹರಲಾಲ್ ಮೆಮೋರಿಯಲ್ ಫಂಡ್ ಸಂಸ್ಥೆ. ಪ್ರವಾಸಿಗರು ಸಾಮಾನ್ಯವಾಗಿ ಇಲ್ಲಿ ಭೇಟಿ ನೀಡುತ್ತಾರೆ. ಕಳೆದ ಶತಮಾನದ ಇತಿಹಾಸವನ್ನು ಮೆಲಕು ಹಾಕುತ್ತಾರೆ.