ಕದಂ ಯೋಜನೆ ಮೂಲಕ ಈ ಪ್ರದೇಶ ಹೆಚ್ಚಾಗಿ ಗುರುತಾಗಿದೆ. ಕದಂ ಅಣೆಕಟ್ಟು ಇದೇ ಹೆಸರಿನ ನದಿಗೆ ನಿರ್ಮಾಣವಾಗಿದೆ. ಕದಂ ನದಿ ಗೋದಾವರಿ ನದಿಯ ಉಪನದಿಯಾಗಿದೆ. ಅದಿಲಾಬಾದ್ನ ಪ್ರಮುಖ ಆಕರ್ಷಣೆಯಲ್ಲಿ ಇದೂ ಒಂದು. ನದಿಯು ಈ ಜಿಲ್ಲೆಯ ಮೂಲಕವೆ ಹಾದು ಹೋಗಿದೆ. ಅದಿಲಾಬಾದ್ ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲೆ ಈ ಅಣೆಕಟ್ಟು ಇದೆ. ಈ ಭಾಗ ಜನಪ್ರಿಯತೆ ಗಳಿಸಿದ್ದು, ಸಾಮಾನ್ಯವಾಗಿ ಎಲ್ಲರಲ್ಲೂ 'ಗೋದಾವರಿ ಉತ್ತರ ಚಾನೆಲ್ ಯೋಜನೆ' ರೂಪದಲ್ಲಿ ಪರಿಚಿತವಾಗಿದೆ.
1949 ರಲ್ಲಿ ಈ ಅಣೆಕಟ್ಟು ನಿರ್ಮಾಣ ಆರಂಭಗೊಂಡಿತು. 1965 ರಲ್ಲಿ ಪೂರ್ಣಗೊಂಡಿತು. ನೀರಾವರಿ ಉದ್ದೇಶದಿಂದಲೇ ಇದನ್ನು ನಿರ್ಮಿಸಲಾಗಿದ್ದು, ಅದಿಲಾಬಾದ್ನ ಒಟ್ಟು 25000 ಹೆಕ್ಟೇರ್ ಪ್ರದೇಶಕ್ಕೆ ಇಂದು ಈ ಆಣೆಕಟ್ಟು ನೀರುಣಿಸುತ್ತಿದೆ.
ಇಂದು ನೀರಾವರಿ ಸೌಲಭ್ಯ ಒದಗಿಸುವ ಜತೆಗೆ ಅದಿಲಾಬಾದ್ನ ಪ್ರಮುಖ ಪ್ರವಾಸಿ ತಾಣವಾಗಿಯೂ ಈ ಅಣೆಕಟ್ಟು ಹೆಸರಾಗಿದೆ. ಈ ನಿರ್ಮಾಣ ಪ್ರದೇಶವೂ ವಿಶಿಷ್ಟವಾಗಿದೆ. ಗೋದಾವರಿ ನದಿ ಕೃಷ್ಣಾ ನದಿಗೆ ಸೇರುವ ಮುನ್ನ ನಿರ್ಮಿಸಿರುವ ವಿಶಾಲ ಪ್ರದೇಶದಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಪ್ರದೇಶ ಅತ್ಯಂತ ಸಮೃದ್ಧ ಹಸಿರು ಪರಿಸರ ಹೊಂದಿದ್ದು, ಉತ್ತಮ ಪಿಕ್ನಿಕ್ ತಾಣವಾಗಿ ಜನಮನದಲ್ಲಿ ನೆಲೆಸಿದೆ. ಹಸಿರು ಮರಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ.
ಇಲ್ಲಿ ಉತ್ತಮ ನಿರ್ವಹಣೆಗೆ ಒಳಪಟ್ಟ ಲಾನ್ಗಳಿವೆ. ತಾಜಾ ಗಾಳಿ ಬೀಸುತ್ತದೆ. ಈ ಮೂಲಕ ಇದು ಪ್ರಮುಖ ಪಿಕ್ನಿಕ್ ತಾಣವಾಗಿದೆ ಎನ್ನಲು ಅಡ್ಡಿಯಿಲ್ಲ. ಸಿಕಂದರಾಬಾದ್ ಹಾಗೂ ಮನ್ಮಾಡ್ ನಡುವೆ ಸಂಚರಿಸುವ ಮೀಟರ್ ಗೇಜ್ ರೈಲು ಈ ಅಣೆಕಟ್ಟು ಇರುವ ಸ್ಥಳಕ್ಕೆ ಕರೆದೊಯ್ಯುತ್ತದೆ. ಈ ರೈಲಿನಲ್ಲಿ ಸಂಚರಿಸುವಾಗ ಸಿಗುವ ಮಜಾ ಹಾಗೂ ಪ್ರಕೃತಿ ನೋಟ ರಮಣೀಯ.