ವಿಭೂತಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಯಾಣ ಹಳ್ಳಿಯ ಪ್ರಮುಖ ಆಕರ್ಷಣೀಯ ಸ್ಥಳವಾಗಿದ್ದು, ಇಲ್ಲಿಗೆ ಬರುವ ಎಲ್ಲರೂ ನೋಡಲೇಬೇಕಾದಂತಹ ಸ್ಥಳವಾಗಿದೆ. ಜಲಪಾತವು ೩೦ ಅಡಿ ಎತ್ತರದಲ್ಲಿದ್ದು, ಹಚ್ಚಹಸಿರಿನ ಕಾಡು, ಬಿದಿರಿನ ತೋಪು ಹಾಗು ಕಾಡುಹೂವುಗಳು ಎಲ್ಲೆಡೆ ಇವೆ. ಇದಕ್ಕೆ ಹತ್ತಿರವಿರುವ ಸುಣ್ಣದ ಕಲ್ಲಿನ ಬಂಡೆಯಿಂದಾಗಿ ಈ ಜಲಪಾತಕ್ಕೆ ಅದರ ಹೆಸರು ಬಂದಿದೆ ಎಂಬುದು ಸ್ಥಳೀಯರ ನಂಬಿಕೆ. ಸುಣ್ಣದ ಕಲ್ಲಿನ ಬಂಡೆಯಲ್ಲದೆ ಇನ್ನೂ ಎರಡು ಬೃಹದಾಕಾರದ ಬಂಡೆಗಳು ಈ ಜಲಪಾತದ ಸಾನಿಧ್ಯದಲ್ಲಿವೆ. ಈ ಜಲಪಾತವನ್ನು ತಲುಪಲು ಮುಖ್ಯ ಜಲಪಾತದಿಂದ ಸುಮಾರು 2 ಕಿಮೀ ಗಳಷ್ಟು ಉದ್ದದ ಕಾಲುದಾರಿ ಇದೆ. ಅಲ್ಲದೆ ಪ್ರವಾಸಿಗರಿಗಾಗಿ ಕಾಡುದಾರಿ ಇದ್ದು,ಈ ಮಾರ್ಗದ ಬಲಕ್ಕೆ ಹೊಲ ಹಾಗೂ ಎಡಕ್ಕೆ ಅರಣ್ಯವನ್ನು ಕಾಣಬಹುದು.