ಇಂದು (ಸೆಪ್ಟೆಂಬರ್ 8, ಮಂಗಳವಾರ) ಮಧ್ಯ ಬೆಂಗಳೂರಿನಲ್ಲಿ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಶಿವಾಜಿನಗರದ ಪ್ರಸಿದ್ಧ ಸೆಂಟ್ ಮೇರೀಸ್ ಬೆಸಿಲಿಕಾದ ವಾರ್ಷಿಕ ರಥೋತ್ಸವ ಹಾಗೂ ಜಾತ್ರೆ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ (CBD) ಸುತ್ತಮುತ್ತಲಿನ ಹಲವು ರಸ್ತೆಗಳು ಬಂದ್ ಆಗಲಿದ್ದು, ಪಾರ್ಕಿಂಗ್ ಮೇಲೂ ನಿಷೇಧ ಹೇರಲಾಗಿದೆ. ಹೀಗಾಗಿ ಬಳ್ಳಾರಿ ರಸ್ತೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನಂದಿ ಬೆಟ್ಟ ಅಥವಾ ಸ್ಕಂದಗಿರಿ ಕಡೆಗೆ ಹೊರಟಿರುವ ಪ್ರಯಾಣಿಕರು ಮುಂಚಿತವಾಗಿಯೇ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಒಳಿತು.
ರಥೋತ್ಸವ ಸಾಗುವ ವೇಳೆಯಲ್ಲಿ ಬೆಸಿಲಿಕಾ ಸಮೀಪದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಮುಖ್ಯವಾಗಿ ಬಾಳೆಕುಂದಿ ಸರ್ಕಲ್ನಿಂದ ಜ್ಯೋತಿ ಕೆಫೆ ಹಾಗೂ ಶಿವಾಜಿ ಸರ್ಕಲ್ನಿಂದ ಜ್ಯೋತಿ ಕೆಫೆ ಮಾರ್ಗಗಳಲ್ಲಿ ಸಂಚಾರ ಇರುವುದಿಲ್ಲ. ಬೌರಿಂಗ್ ಆಸ್ಪತ್ರೆಯಿಂದ ಸೆಲೆಕ್ಟ್ ಜಂಕ್ಷನ್ ಹಾಗೂ ಕ್ವಾಡ್ರಂಟ್ ಸರ್ಕಲ್ನಿಂದ ಆರ್ಎಮ್ಎಸ್ ಜಂಕ್ಷನ್ ಕಡೆಗಿನ ರಸ್ತೆಗಳಿಗೂ ನಿರ್ಬಂಧ ವಿಧಿಸಲಾಗಿದೆ. ಬ್ಯಾಂಬೂ ಬಜಾರ್ನಿಂದ ಸುನ್ನಿ ಸರ್ಕಲ್ ರಸ್ತೆಯನ್ನು ಮುಚ್ಚಲಾಗಿದ್ದು, ಅತ್ಯಗತ್ಯ ವಾಹನಗಳಿಗೆ ಮಾತ್ರ ನಿಯಂತ್ರಿತ ಸಂಚಾರಕ್ಕೆ ಅವಕಾಶವಿದೆ. ಬಿಎಂಟಿಸಿ ಬಸ್ಗಳಿಗೂ ಬಿಆರ್ವಿ ಮತ್ತು ಸೆಲೆಕ್ಟ್ ಜಂಕ್ಷನ್ ನಡುವೆ ಸಂಚಾರ ತಡೆ ನೀಡಲಾಗಿದೆ. ಜೊತೆಗೆ ರಸ್ಸೆಲ್ ಮಾರ್ಕೆಟ್ ಸುತ್ತಮುತ್ತ ವಾಹನ ನಿಲ್ಲಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಚೋಟಾ ಮೈದಾನ, ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲ ಮಹಡಿ, ಮೇನ್ ಗಾರ್ಡ್ ಕ್ರಾಸ್ ಹಾಗೂ ಹಳೆಯ ಕೆಪಿಸಿಸಿ ಕಚೇರಿ ಆವರಣದಲ್ಲಿ ವಾಹನಗಳನ್ನು ಪಾರ್ಕ್ ಮಾಡಬಹುದು.

ಬೆಂಗಳೂರು ಶಿವಾಜಿನಗರ ಸಂಚಾರ ನಿರ್ಬಂಧ: ಬಳ್ಳಾರಿ ರಸ್ತೆ ಹಾಗೂ ಏರ್ಪೋರ್ಟ್ಗೆ ಹೋಗಲು ಇಲ್ಲಿದೆ ಶಾರ್ಟ್ಕಟ್ ಮಾರ್ಗ
ಎಂ.ಜಿ. ರಸ್ತೆ ಅಥವಾ ಬ್ರಿಗೇಡ್ ರಸ್ತೆಯಿಂದ ಹೊರಡುವವರು ಇನ್ಫೆಂಟ್ರಿ ರಸ್ತೆ ಮತ್ತು ಸೆಂಟ್ರಲ್ ಸ್ಟ್ರೀಟ್ ಮೂಲಕ ಶಿವಾಜಿನಗರವನ್ನು ಬೈಪಾಸ್ ಮಾಡಬಹುದು. ಅಲ್ಲಿಂದ ರಾಜಭವನ ರಸ್ತೆ, ವಿಂಡ್ಸರ್ ಮೇನರ್, ಮೇಕ್ರಿ ಸರ್ಕಲ್ ಮತ್ತು ಹೆಬ್ಬಾಳ ಮಾರ್ಗವಾಗಿ ಬಳ್ಳಾರಿ ರಸ್ತೆ ತಲುಪಬಹುದು. ವಿಮಾನ ನಿಲ್ದಾಣಕ್ಕೆ ತೆರಳುವವರಿಗೂ ಇದೇ ಮಾರ್ಗ ಅನುಕೂಲ. ಒಂದು ವೇಳೆ ಮೆಟ್ರೋದಲ್ಲಿ ಪ್ರಯಾಣಿಸುವುದಾದರೆ, ಪರ್ಪಲ್ ಲೈನ್ನಲ್ಲಿ ಮೆಜೆಸ್ಟಿಕ್ಗೆ ಬಂದು, ಅಲ್ಲಿ ಗ್ರೀನ್ ಲೈನ್ಗೆ ಬದಲಾಯಿಸಿ ಯಶವಂತಪುರ ತಲುಪಬಹುದು. ಯಶವಂತಪುರದಿಂದ 'ವಾಯು ವಜ್ರ' KIA-10 ಬಸ್ ಹಿಡಿಯಬಹುದು ಅಥವಾ ಹೆಬ್ಬಾಳದಲ್ಲಿ ಸಾಲು ಸಾಲಾಗಿ ಸಿಗುವ ಏರ್ಪೋರ್ಟ್ ಬಸ್ಗಳನ್ನು ಏರಬಹುದು. ಇನ್ನು ಇಂದಿರಾನಗರ ಅಥವಾ ಕೆ.ಆರ್. ಪುರಂ ಕಡೆಯಿಂದ ಬರುವವರು ಶಿವಾಜಿನಗರದ ಸಹವಾಸವೇ ಬೇಡ, ಹೊರ ವರ್ತುಲ ರಸ್ತೆ (ORR) ಮೂಲಕ ನೇರವಾಗಿ ಹೆಬ್ಬಾಳ ತಲುಪಬಹುದು.
ಬಿಎಂಟಿಸಿ ಬಸ್ ಮಾರ್ಗ ಬದಲಾವಣೆ ಹಾಗೂ ಮೆಟ್ರೋ ಪ್ರಯಾಣ: ಸಮಯ ಉಳಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಕ್ವೀನ್ಸ್ ರಸ್ತೆಯಿಂದ ಸಂಚರಿಸುವ ಬಿಎಂಟಿಸಿ ಬಸ್ಗಳನ್ನು ಇನ್ಫೆಂಟ್ರಿ ರಸ್ತೆ ಮತ್ತು ಸೆಂಟ್ರಲ್ ಸ್ಟ್ರೀಟ್ ಮಾರ್ಗವಾಗಿ ಡೈವರ್ಟ್ ಮಾಡಲಾಗಿದೆ. ಬಿಆರ್ವಿ ಜಂಕ್ಷನ್ನಲ್ಲಿ ತಾತ್ಕಾಲಿಕ ಡ್ರಾಪ್-ಆಫ್ ಪಾಯಿಂಟ್ ಮಾಡಲಾಗಿದ್ದು, ಬಸ್ಗಳು ಸುಲಭವಾಗಿ ತಮ್ಮ ಮುಂದಿನ ಮಾರ್ಗ ಸೇರಿಕೊಳ್ಳಲಿವೆ. ಕಂಟೋನ್ಮೆಂಟ್ ಕಡೆಗೆ ಬಸ್ ಹಿಡಿಯಲು ಇಷ್ಟಪಡುವವರು ಸಫೀನಾ ಪ್ಲಾಜಾ ಎದುರಿನ ಮೇನ್ ಗಾರ್ಡ್ ಕ್ರಾಸ್ ಅಥವಾ ಚೋಟಾ ಮೈದಾನ ಬಳಿ ತೆರಳಬಹುದು. ರಮಡಾ ಹೋಟೆಲ್ ಬಳಿಯ ಹಳೆಯ ಕಾಂಗ್ರೆಸ್ ಕಚೇರಿ ಆವರಣವೂ ಪಾರ್ಕಿಂಗ್ಗೆ ಉತ್ತಮ ಪರ್ಯಾಯ. ಇಂದು ಪ್ರಯಾಣಿಸುವವರು ಮಧ್ಯಾಹ್ನ 1 ಗಂಟೆಗೆ ಮುಂಚಿತವಾಗಿ ಅಥವಾ ರಾತ್ರಿ 9 ಗಂಟೆಯ ನಂತರ ಹೊರಡುವುದು ಕ್ಷೇಮ. ಪ್ರಯಾಣಕ್ಕೆ ಕನಿಷ್ಠ 20 ರಿಂದ 30 ನಿಮಿಷ ಹೆಚ್ಚುವರಿ ಸಮಯ ಇಟ್ಟುಕೊಳ್ಳಿ. ಇಂದು ರಾತ್ರಿ 11 ಗಂಟೆಯವರೆಗೆ ಈ ಸಂಚಾರ ನಿಯಮಗಳು ಜಾರಿಯಲ್ಲಿರಲಿದ್ದು, ರಸ್ತೆಗಳಲ್ಲಿ ಪೊಲೀಸ್ ತಪಾಸಣೆಯೂ ಇರಲಿದೆ.


Click it and Unblock the Notifications















