Search
  • Follow NativePlanet
Share
» »ವಾರಣಾಸಿಯಲ್ಲಿ ಗಂಗಾ ನದಿ ಪ್ರವಾಹ: ಘಾಟ್‌ಗಳು ಜಲಾವೃತ, ಗಂಗಾ ಆರತಿ ಸ್ಥಳ ಬದಲಾವಣೆ - ಭಕ್ತರಿಗೆ ಪ್ರಮುಖ ಸೂಚನೆಗಳು!

ವಾರಣಾಸಿಯಲ್ಲಿ ಗಂಗಾ ನದಿ ಪ್ರವಾಹ: ಘಾಟ್‌ಗಳು ಜಲಾವೃತ, ಗಂಗಾ ಆರತಿ ಸ್ಥಳ ಬದಲಾವಣೆ - ಭಕ್ತರಿಗೆ ಪ್ರಮುಖ ಸೂಚನೆಗಳು!

ಗಂಗಾ ನದಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 1ರಂದು ವಾರಣಾಸಿಯ ಎಲ್ಲಾ 84 ಘಾಟ್‌ಗಳು ಜಲಾವೃತಗೊಂಡಿವೆ. ಮುನ್ನೆಚ್ಚರಿಕಾ ಕ್ರಮವಾಗಿ ದೋಣಿ ವಿಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇನ್ನು ವಿಶ್ವಪ್ರಸಿದ್ಧ ದಶಾಶ್ವಮೇಧ ಘಾಟ್‌ನ ಗಂಗಾ ಆರತಿಯನ್ನು ಸುರಕ್ಷತೆಯ ದೃಷ್ಟಿಯಿಂದ ಎತ್ತರದ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಕಾಶಿ ವಿಶ್ವನಾಥ ದೇವಾಲಯ ತೆರೆದಿದ್ದು, ರಸ್ತೆ ಮಾರ್ಗದ ಮೂಲಕ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ನದಿಯ ಕಡೆಯಿಂದ ಬರುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಮತ್ತು ವರದಿಗಳು ತಿಳಿಸಿವೆ.

ಕೇಂದ್ರ ಜಲ ಆಯೋಗದ ಪ್ರಕಾರ, ವಾರಣಾಸಿಯಲ್ಲಿ ನದಿಯ ಎಚ್ಚರಿಕೆ ಮಟ್ಟ 70.262 ಮೀಟರ್ ಹಾಗೂ ಅಪಾಯದ ಮಟ್ಟ 71.262 ಮೀಟರ್ ಆಗಿದೆ. ಕಳೆದ ಕೆಲವು ದಿನಗಳಿಂದ ಗಂಗೆ ಅಪಾಯದ ಮಟ್ಟಕ್ಕೆ ಸಮೀಪದಲ್ಲಿ ಹರಿಯುತ್ತಿದ್ದು, ನಗರದಾದ್ಯಂತ ದೋಣಿ ಸಂಚಾರವನ್ನು ಮುಂದಿನ ಆದೇಶದವರೆಗೆ ಸಂಪೂರ್ಣ ನಿಷೇಧಿಸಲಾಗಿದೆ. ಜೊತೆಗೆ ಎನ್‌ಡಿಆರ್‌ಎಫ್ (NDRF) ಪಡೆಗಳನ್ನು ನಿಯೋಜಿಸಲಾಗಿದ್ದು, ಘಾಟ್‌ಗಳಲ್ಲಿ ಬಿಗಿ ಕಾವಲು ಕಾಯಲಾಗುತ್ತಿದೆ.

Varanasi Ganga Flood Update 2026: Ghats Submerged, Aarti Shifted & Travel Guidelines for Devotees

ಕಾಶಿ ವಿಶ್ವನಾಥ ದರ್ಶನ, ಪಾಸ್ ಮತ್ತು ಲಾಕರ್ ನಿಯಮಗಳು

ದೇವಾಲಯಕ್ಕೆ ತೆರಳುವ ಭಕ್ತರು ಗೋದೌಲಿಯಾ-ಚೌಕ್ ಕಾರಿಡಾರ್ ಮಾರ್ಗವನ್ನು ಬಳಸಬಹುದು. ಸುಲಭ ಪ್ರವೇಶಕ್ಕಾಗಿ ಗೇಟ್ 4B (ಕಾಶಿ ದ್ವಾರ) ಬಳಸುವುದು ಉತ್ತಮ. ಸ್ಥಳೀಯರು ಸೂಕ್ತ ಗುರುತಿನ ಚೀಟಿ ತೋರಿಸಿ ಇಡೀ ದಿನ ಈ ಗೇಟ್ ಮೂಲಕ ಪ್ರವೇಶಿಸಬಹುದು. ಸುಗಮ ದರ್ಶನ ಅಥವಾ ಮಂಗಳ ಆರತಿ ಟಿಕೆಟ್‌ಗಳನ್ನು ಶ್ರೀ ಕಾಶಿ ವಿಶ್ವನಾಥ ದೇವಾಲಯದ ಅಧಿಕೃತ ಪೋರ್ಟಲ್ ಅಥವಾ ಆ್ಯಪ್ ಮೂಲಕವೇ ಬುಕ್ ಮಾಡಿಕೊಳ್ಳಿ. ಗೇಟ್ 4ರ ಬಳಿ ಇರುವ ಅಧಿಕೃತ ಲಾಕರ್‌ಗಳಲ್ಲಿ ಮೊಬೈಲ್ ಫೋನ್‌ಗಳನ್ನು ಇಡಬಹುದು, ಜೊತೆಗೆ ಮಾನ್ಯವಾದ ಐಡಿ ಕಾರ್ಡ್ ಕೊಂಡೊಯ್ಯುವುದು ಕಡ್ಡಾಯ.

ಗಂಗಾ ಆರತಿ ಸ್ಥಳ ಬದಲಾವಣೆ, ಸಮಯ ಮತ್ತು ಮಾರ್ಗಸೂಚಿಗಳು

ನೀರಿನ ಮಟ್ಟ ಹೆಚ್ಚಿರುವುದರಿಂದ ದಶಾಶ್ವಮೇಧ ಗಂಗಾ ಆರತಿಯನ್ನು 10 ರಿಂದ 15 ಅಡಿ ಹಿಂದಕ್ಕೆ ಜರುಗಿಸಿ, ಎತ್ತರದ ವೇದಿಕೆ ಅಥವಾ ಕಟ್ಟಡದ ಮಹಡಿಯ ಮೇಲೆ ನಡೆಸಲಾಗುತ್ತಿದೆ. ಘಾಟ್‌ಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ವೀಕ್ಷಣಾ ಸ್ಥಳಗಳನ್ನು ಬದಲಾಯಿಸಲಾಗಿದೆ. ಹೀಗಾಗಿ ಭಕ್ತರು ಬೇಗನೇ ಆಗಮಿಸಿ ಸ್ವಯಂಸೇವಕರ ಸೂಚನೆಗಳನ್ನು ಪಾಲಿಸುವುದು ಅಗತ್ಯ. ಸಾಮಾನ್ಯವಾಗಿ ಸೂರ್ಯಾಸ್ತದ ವೇಳೆ ನಡೆಯುವ ಈ ಆರತಿಯ ಆ ದಿನದ ವೀಕ್ಷಣಾ ಸ್ಥಳದ ಮಾಹಿತಿ ಪಡೆಯಲು ಸಂಜೆ 5.30ರ ನಂತರ ಘಾಟ್ ಕಚೇರಿಯನ್ನು ಸಂಪರ್ಕಿಸಬಹುದು.

ಸುರಕ್ಷಿತ ವಾಸ್ತವ್ಯ, ರಿಫಂಡ್ ಹಾಗೂ ಸಹಾಯವಾಣಿ ಸಂಖ್ಯೆಗಳು

ವಾರಣಾಸಿಗೆ ಪ್ರಯಾಣಿಸುವವರು ಪ್ರವಾಹದ ಭೀತಿಯಿಲ್ಲದ ಕಂಟೋನ್ಮೆಂಟ್, ನಡೆಸರ್ ಮತ್ತು ಸಿಗ್ರಾ ನಂತಹ ಎತ್ತರದ ಪ್ರದೇಶಗಳಲ್ಲಿರುವ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವುದು ಸುರಕ್ಷಿತ. ಜಿಲ್ಲಾ ಪಟ್ಟಿಯಲ್ಲಿರುವ ತಾಜ್ ಗಂಗಾ ಮತ್ತು ರಮಾಡಾ ಜೆಎಚ್‌ವಿ ಪ್ರಮುಖ ಉದಾಹರಣೆಗಳು. ಇನ್ನು ಕ್ರೂಸ್ ಅಥವಾ ನದಿ ಪ್ರವಾಸ ರದ್ದಾದರೆ ಆಯೋಜಕರು ಹಣವನ್ನು ರಿಫಂಡ್ ಮಾಡುತ್ತಾರೆ ಅಥವಾ ಬೇರೆ ದಿನಾಂಕಕ್ಕೆ ಮರುನಿಗದಿಪಡಿಸುತ್ತಾರೆ. ಸರ್ಕಾರಿ ಬುಕಿಂಗ್‌ಗಳಿಗೆ ಯುಪಿ ಪ್ರವಾಸೋದ್ಯಮ ನೀತಿಗಳು ಅನ್ವಯಿಸುತ್ತವೆ. ತುರ್ತು ನೆರವಿಗಾಗಿ ಜಿಲ್ಲಾ ಪ್ರವಾಹ ನಿಯಂತ್ರಣ ಕೊಠಡಿ (0542-2508550/2504170/1077), ಎನ್‌ಡಿಆರ್‌ಎಫ್ (9711077372) ಮತ್ತು ರಾಷ್ಟ್ರೀಯ ತುರ್ತು ಸಂಖ್ಯೆ 112 ಅನ್ನು ಸಂಪರ್ಕಿಸಬಹುದು.

More News

Read more about: travel guide
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+