ಆಗಸ್ಟ್ 27, ಗುರುವಾರದಂದು ಉತ್ತರಾಖಂಡದ ವಿವಿಧೆಡೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ. ಹೀಗಾಗಿ, ಕೇದಾರನಾಥ ಮತ್ತು ಬದ್ರಿನಾಥಕ್ಕೆ ಹೊರಟಿರುವ ಯಾತ್ರಿಕರು ವಾಹನ ಸಂಚಾರ ವಿಳಂಬ ಹಾಗೂ ಬಿಗಿ ತಪಾಸಣೆಗೆ ಸಿದ್ಧರಿರಬೇಕಾಗುತ್ತದೆ. ಹರಿದ್ವಾರ–ಋಷಿಕೇಶ–ರುದ್ರಪ್ರಯಾಗ ಮಾರ್ಗದಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಸೇವೆಯೂ ವಿಳಂಬವಾಗಬಹುದು. ಆದ್ದರಿಂದ, ಪ್ರಯಾಣದ ವೇಳಾಪಟ್ಟಿಯಲ್ಲಿ ಹೆಚ್ಚುವರಿ ಸಮಯ ಇಟ್ಟುಕೊಳ್ಳಿ. ಟಿಕೆಟ್ಗಳನ್ನು ಬದಲಾಯಿಸಿಕೊಳ್ಳುವ ಅವಕಾಶವಿರಲಿ ಹಾಗೂ ನಿಯಂತ್ರಣ ಕೊಠಡಿಯ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಿ.
ಮಳೆ ಮತ್ತು ಟ್ರಾಫಿಕ್ ಕಿರಿಕಿರಿಯಿಂದ ಬಚಾವಾಗಲು ಪ್ರಯಾಣವನ್ನು ಸಾಧ್ಯವಾದಷ್ಟು ಬೇಗ ಆರಂಭಿಸಿ. ಬೆಳಿಗ್ಗೆ 8 ಗಂಟೆಗೂ ಮೊದಲು ಪ್ರಯಾಣಿಸುವುದು ಅತ್ಯಂತ ಸುರಕ್ಷಿತ, 11 ಗಂಟೆಯವರೆಗೆ ಅಪಾಯದ ಮಟ್ಟ ಸಾಧಾರಣವಾಗಿರುತ್ತದೆ. ಆದರೆ, ಮಳೆ ಹಾಗೂ ದಟ್ಟ ಮಂಜು ಹೆಚ್ಚಾಗುವ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯ ನಡುವೆ ವಾಹನ ಚಾಲನೆ ಮಾಡುವುದನ್ನು ತಪ್ಪಿಸಿ. ಬೆಟ್ಟದ ರಸ್ತೆಗಳಲ್ಲಿ ರಾತ್ರಿ ವೇಳೆ ಪ್ರಯಾಣಿಸುವುದು ಬೇಡವೇ ಬೇಡ. ಜೊತೆಗೆ, ಮಳೆಗಾಲದ ಉಡುಪು, ಆಹಾರ, ಪವರ್ ಬ್ಯಾಂಕ್ ಹಾಗೂ ವಾಹನಕ್ಕೆ ಪೂರ್ಣ ಇಂಧನ ತುಂಬಿಸಿಕೊಂಡು ಹೊರಡಿ.

ಉತ್ತರಾಖಂಡ ಮಳೆ ಅಲರ್ಟ್: ಮಾರ್ಗ ಮತ್ತು ಸಮಯದ ಸಮಗ್ರ ಮಾಹಿತಿ
ಹರಿದ್ವಾರ–ಋಷಿಕೇಶ–ರುದ್ರಪ್ರಯಾಗ ಹಾಗೂ ಕೇದಾರನಾಥ, ಬದ್ರಿನಾಥ ಮಾರ್ಗಗಳಲ್ಲಿ ವಾಹನ ಸಂಚಾರ ನಿಧಾನವಾಗಬಹುದು. ಅಪಾಯಕಾರಿ ತಿರುವುಗಳು ಮತ್ತು ಸೇತುವೆಗಳ ಬಳಿ ವಾಹನಗಳು ಸರದಿಯಲ್ಲಿ ನಿಲ್ಲಬೇಕಾಗಬಹುದು. ತಪಾಸಣೆ ವೇಳೆ ಬ್ಯಾರಿಕೇಡ್ಗಳನ್ನು ಗಮನಿಸಿ ಮತ್ತು ಪೊಲೀಸರ ಸೂಚನೆ ಪಾಲಿಸಿ. ಬೇಸ್ ಟೌನ್ನಿಂದ ಹೊರಡುವ ಮುನ್ನ ಕೇದಾರನಾಥ ಕಾಲ್ನಡಿಗೆ ಮಾರ್ಗದ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳಿ. ರಸ್ತೆ ಕುಸಿತದ ತ್ಯಾಜ್ಯ ತೆರವು ಮತ್ತು ವಾಹನಗಳ ಸಾಲುಗಳಿಂದಾಗಿ ತಡವಾಗುವ ಸಾಧ್ಯತೆ ಇರುವುದರಿಂದ, ಪ್ರಯಾಣಕ್ಕೆ ಹೆಚ್ಚುವರಿ ಸಮಯವನ್ನು ಕಾಯ್ದಿರಿಸಿಕೊಳ್ಳಿ.
| ಸಮಯದ ಅವಧಿ | ಅಪಾಯದ ಮಟ್ಟ | ಸಲಹೆ |
|---|---|---|
| ಬೆಳಿಗ್ಗೆ 8 ಕ್ಕಿಂತ ಮೊದಲು | ಕಡಿಮೆ | ಪ್ರಯಾಣ ಆರಂಭಿಸಿ, ಟ್ರಾಫಿಕ್ ಪಾಯಿಂಟ್ಗಳನ್ನು ಬೇಗ ದಾಟಿ |
| ಬೆಳಿಗ್ಗೆ 8 ರಿಂದ 11 | ಸಾಧಾರಣ | ಪರಿಸ್ಥಿತಿ ಗಮನಿಸಿ ಮುನ್ನೆಡೆಯಿರಿ; ತಾತ್ಕಾಲಿಕ ತಡೆಗೆ ಸಿದ್ಧರಾಗಿ |
| ಬೆಳಿಗ್ಗೆ 11 ರಿಂದ ಸಂಜೆ 5 | ಹೆಚ್ಚು | ಪ್ರಯಾಣ ಮುಂದೂಡಿ; ಭಾರಿ ಮಳೆ ಮತ್ತು ಮಂಜು ಕವಿಯಬಹುದು |
| ಸಂಜೆ 5 ರ ನಂತರ | ಹೆಚ್ಚು | ಘಾಟ್ ರಸ್ತೆಯಲ್ಲಿ ಚಾಲನೆ ಬೇಡ; ಭೂಕುಸಿತದ ಅಪಾಯ ಹೆಚ್ಚು |
ಕೇದಾರನಾಥ/ಬದ್ರಿನಾಥ ಯಾತ್ರೆ, ಹೆಲಿಕಾಪ್ಟರ್ ಸೇವೆ ಮತ್ತು ಸುರಕ್ಷತಾ ಮಾರ್ಗಸೂಚಿ
ಮಳೆಗಾಲದಲ್ಲಿ ಹವಾಮಾನ ಪರಿಸ್ಥಿತಿ ಆಧರಿಸಿ ಹೆಲಿಕಾಪ್ಟರ್ ಸೇವೆ ಒದಗಿಸುವುದರಿಂದ, ವಿಮಾನ ರದ್ದತಿ ಸಾಮಾನ್ಯ. ಹೀಗಾಗಿ, ಪ್ರಯಾಣದಲ್ಲಿ ಒಂದು ದಿನ ಹೆಚ್ಚುವರಿಯಾಗಿ ಇಟ್ಟುಕೊಳ್ಳಿ ಮತ್ತು ಟಿಕೆಟ್ ದಿನಾಂಕ ಬದಲಾಯಿಸುವ ಸೌಲಭ್ಯವಿರಲಿ. ಕೇವಲ ಅತ್ಯಗತ್ಯ ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗಿ. ಯಾತ್ರೆಯ ಇ-ಪಾಸ್ ಮತ್ತು ಫೋಟೋ ಇರುವ ಗುರುತಿನ ಚೀಟಿಯನ್ನು ಜೊತೆಯಲ್ಲಿಟ್ಟುಕೊಳ್ಳಿ. ವಸತಿಗಾಗಿ ಗುಪ್ತಕಾಶಿ, ಸೀತಾಪುರ ಅಥವಾ ಫಾತಾ ಪ್ರದೇಶಗಳಲ್ಲಿ ಉಚಿತವಾಗಿ ರದ್ದುಗೊಳಿಸಬಹುದಾದ ರೂಮ್ಗಳನ್ನು ಕಾಯ್ದಿರಿಸಿ. ಬದ್ರಿನಾಥ ಮಾರ್ಗದಲ್ಲಿ ಜೋಶಿಮಠ ಅಥವಾ ಪಾಂಡುಕೇಶ್ವರವನ್ನು ಆಯ್ಕೆ ಮಾಡಿಕೊಳ್ಳಿ.
ಉತ್ತರಾಖಂಡ ಮಳೆ ಅಲರ್ಟ್: ಸ್ಥಳೀಯ ತಪಾಸಣೆ ಮತ್ತು ತುರ್ತು ಸುರಕ್ಷತಾ ಕ್ರಮಗಳು
ಬ್ಯಾರಿಕೇಡ್ಗಳನ್ನು ಕಡ್ಡಾಯವಾಗಿ ಗಮನಿಸಿ. ರಸ್ತೆಯಲ್ಲಿ ಹರಿಯುವ ತೊರೆಗಳನ್ನು ಅಥವಾ ಹೊಸದಾಗಿ ಭೂಕುಸಿತವಾದ ಸ್ಥಳಗಳನ್ನು ದಾಟಲು ಸಾಹಸ ಮಾಡಬೇಡಿ. ರಸ್ತೆ ಬಂದ್ ಮತ್ತು ಕಾಲ್ನಡಿಗೆ ಮಾರ್ಗದ ತಾಜಾ ಮಾಹಿತಿಗಾಗಿ ಜಿಲ್ಲಾ ಸಹಾಯವಾಣಿ ಹಾಗೂ ಪೊಲೀಸ್ ಚೆಕ್ಪೋಸ್ಟ್ಗಳನ್ನು ಸಂಪರ್ಕಿಸಿ. ಟ್ಯಾಂಕ್ ಫುಲ್ ಇಂಧನ, ರೇನ್ಕೋಟ್, ಆಹಾರ ಮತ್ತು ಚಾರ್ಜ್ ಮಾಡಿದ ಪವರ್ ಬ್ಯಾಂಕ್ ಜೊತೆಗಿರಲಿ. ನೆಟ್ವರ್ಕ್ ಸಮಸ್ಯೆ ಇರಬಹುದಾದ್ದರಿಂದ ಯುಪಿಐ (UPI) ಜೊತೆಗೆ ಅಗತ್ಯ ಹಣವನ್ನೂ ಇಟ್ಟುಕೊಳ್ಳಿ. ಬೆಳಿಗ್ಗೆ ಬೇಗ ಪ್ರಯಾಣ ಬೆಳೆಸಿ, ನದಿ ತೀರಗಳಿಂದ ದೂರವಿರಿ ಮತ್ತು ವಾಪಸ್ ಬರಲು ಪರ್ಯಾಯ ಯೋಜನೆ ಇಟ್ಟುಕೊಳ್ಳಿ.


Click it and Unblock the Notifications















