ತಿರುವೋಣಂ ಹಬ್ಬದ ದಿನವಾದ ಇಂದು (ಆಗಸ್ಟ್ 26), ಭಾರಿ ಭೂಸಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಮಾನಂದವಾಡಿ–ಬಾಯ್ಸ್ ಟೌನ್–ಇರಿಟ್ಟಿ ಘಾಟ್ ರಸ್ತೆಯನ್ನು ಅಧಿಕಾರಿಗಳು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಮುಂದಿನ ಆದೇಶದವರೆಗೆ ಈ ರಸ್ತೆ ಮುಚ್ಚಿರಲಿದ್ದು, ಓಣಂ ರಜೆಯ ಸಂಚಾರಕ್ಕಾಗಿ ಬಳಕೆಯಾಗುತ್ತಿದ್ದ ಕಣ್ಣೂರು–ವಯನಾಡ್ ನಡುವಿನ ಪ್ರಮುಖ ಸಂಪರ್ಕ ಕಡಿತಗೊಂಡಂತಾಗಿದೆ. ಹೀಗಾಗಿ ಪ್ರಯಾಣಿಕರು ಈ ಮಾರ್ಗವನ್ನು ಬದಿಗೊತ್ತಿ, ಹಗಲು ವೇಳೆಯ ಸಂಚಾರಕ್ಕೆ ನಿಗದಿಪಡಿಸಲಾದ ಸುರಕ್ಷಿತ ಪರ್ಯಾಯ ರಸ್ತೆಗಳನ್ನು ಬಳಸುವಂತೆ ಸೂಚಿಸಲಾಗಿದೆ. ಸುತ್ತಮುತ್ತಲಿನ ಘಾಟ್ಗಳಲ್ಲಿ ನಿರಂತರ ಮಳೆ ಹಾಗೂ ಗುಡ್ಡ ಕುಸಿಯುವ ಭೀತಿ ಇನ್ನೂ ಮುಂದುವರಿದಿದೆ.
ಪಾಲ್ಚುರಂ ಹತ್ತಿ ಹೋಗುವ ಬಾಯ್ಸ್ ಟೌನ್ ಬಳಿ ಭಾರಿ ಪ್ರಮಾಣದ ಮಣ್ಣು ಮತ್ತು ಬಂಡೆಗಳು ರಸ್ತೆಗೆ ಬಿದ್ದಿದ್ದು, ರಸ್ತೆ ತೆರವು ಕಾರ್ಯಾಚರಣೆ ಅಪಾಯಕಾರಿಯಾಗಿದೆ. ಹೀಗಾಗಿ ಕಣ್ಣೂರು ಹಾಗೂ ತಲಶ್ಶೇರಿ ಕಡೆಯಿಂದ ಬರುವ ವಾಹನ ಸವಾರರು ಪಾಲ್ಚುರಂ ಮಾರ್ಗದ ಬದಲಿಗೆ ತಲಶ್ಶೇರಿ–ಬಾವಲಿ ಕಾರಿಡಾರ್ ಬಳಸುವಂತೆ ಜಿಲ್ಲಾಡಳಿತ ಸಲಹೆ ನೀಡಿದೆ. ರಸ್ತೆ ಕುಸಿಯುವ ಭೀತಿ ಇರುವ ಸ್ಥಳಗಳಲ್ಲಿ ಪರಿಶೀಲನೆ ನಡೆಯುತ್ತಿರುವುದರಿಂದ ಘಾಟ್ ವಿಭಾಗಗಳಲ್ಲಿ ಅಲ್ಲಲ್ಲಿ ಹವಾಮಾನ ಮತ್ತು ಸಂಚಾರ ತಪಾಸಣೆ ಇರಲಿದೆ. ಅಧಿಕೃತವಾಗಿ ಘೋಷಿಸಲಾದ ಹಾಗೂ ಸಿಬ್ಬಂದಿ ಇರುವ ಪರ್ಯಾಯ ಮಾರ್ಗಗಳನ್ನಷ್ಟೇ ಬಳಸಿ.

ವಯನಾಡ್ ಘಾಟ್ ರಸ್ತೆ ಬಂದ್: ಪರ್ಯಾಯ ಮಾರ್ಗಗಳು ಮತ್ತು ಗೇಟ್ ಸಮಯದ ವಿವರ
ಕಣ್ಣೂರು ಕರಾವಳಿ ಭಾಗದಿಂದ ಬರುವವರಿಗೆ ಪೆರಿಯಾ ಚುರಂ ಮೂಲಕ ತೆರಳುವ ನೆಡುಂಪೋಯಿಲ್–ಪೆರಿಯಾ–ಮಾನಂದವಾಡಿ ಮಾರ್ಗವು ಸೂಕ್ತ ಪರ್ಯಾಯವಾಗಿದೆ. ತಲಶ್ಶೇರಿ–ಮಾನಂದವಾಡಿ ನಡುವಿನ ಈ ರಸ್ತೆ ಸುಮಾರು 78–82 ಕಿ.ಮೀ ಇದ್ದು, ಪೆರಿಯಾ–ಮಾನಂದವಾಡಿ ನಡುವಿನ ಅಂತರವೇ 23 ಕಿ.ಮೀ ಇದೆ. ಇನ್ನು ಕೋಝಿಕ್ಕೋಡ್ ಕಡೆಯಿಂದ ಬರುವವರು ತಾಮಾರಸ್ಸೇರಿ ಘಾಟ್ ಬದಲಿಗೆ ಎನ್ಹೆಚ್ 766 (NH 766) ರಸ್ತೆಗೆ ಆದ್ಯತೆ ನೀಡುವುದು ಒಳ್ಳೆಯದು. 14 ಕಿ.ಮೀ ಉದ್ದ ಹಾಗೂ 9 ಹೇರ್ಪಿನ್ ತಿರುವುಗಳನ್ನು ಹೊಂದಿರುವ ತಾಮಾರಸ್ಸೇರಿ ಘಾಟ್ನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ, ಮಳೆಯ ವೇಳೆ ವಾಹನ ಸಂಚಾರ ನಿಧಾನವಾಗಬಹುದು. ಹೀಗಾಗಿ ಕಡಿದಾದ, ತೇವವಿರುವ ತಿರುವುಗಳಲ್ಲಿ ಜಾಗರೂಕತೆಯಿಂದ ಚಾಲನೆ ಮಾಡಿ.
ಓಣಂ ಪ್ರಯಾಣಿಕರ ಗಮನಕ್ಕೆ: ಬಾವಲಿ ಚೆಕ್ ಪೋಸ್ಟ್ ಸಮಯ ಮತ್ತು ನಿಯಮಗಳು
ಮೈಸೂರು/ಎಚ್ಡಿ ಕೋಟೆ ಮಾರ್ಗವಾಗಿ ಸಂಚರಿಸುವವರಿಗೆ ಬಾವಲಿ ಅರಣ್ಯ ರಸ್ತೆಯಲ್ಲಿ ಹಗಲು ಹೊತ್ತಿನಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಬೆಳಿಗ್ಗೆ 6 ಗಂಟೆಗೆ ಗೇಟ್ ತೆರೆಯಲಿದ್ದು, ಸಂಜೆಯಾಗುತ್ತಿದ್ದಂತೆ ಮುಚ್ಚಲಾಗುತ್ತದೆ. ಅಭಯಾರಣ್ಯದ ಮೂಲಕ ರಾತ್ರಿ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಕತ್ತಲಾಗುವ ಮುನ್ನವೇ ಚೆಕ್ ಪೋಸ್ಟ್ ದಾಟುವಂತೆ ಯೋಜನೆ ರೂಪಿಸಿಕೊಳ್ಳಿ ಹಾಗೂ ಗೇಟ್ ಮುಚ್ಚುವ ಕೊನೆ ಗಳಿಗೆಯಲ್ಲಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಿ. ಪ್ರಯಾಣದಲ್ಲಿ ಗುರುತಿನ ಚೀಟಿಗಳನ್ನು ಕೊಂಡೊಯ್ಯಿರಿ ಹಾಗೂ ಮಳೆಯ ಕಾರಣಕ್ಕೆ ವಾಹನ ತಡೆದಾಗ ಅರಣ್ಯ ಸಿಬ್ಬಂದಿಯ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ.
ವಿಪರೀತ ರಶ್ ತಪ್ಪಿಸಲು ಬೆಳಿಗ್ಗೆ 9 ಗಂಟೆಗಿಂತ ಮುಂಚಿತವಾಗಿ ಅಥವಾ ಸಂಜೆ 7 ಗಂಟೆಯ ನಂತರ ಪ್ರಯಾಣ ಆರಂಭಿಸಿ. ಬೆಳಿಗ್ಗೆ 11 ರಿಂದ ಸಂಜೆ 6 ಗಂಟೆಯವರೆಗಿನ ಸಮಯದಲ್ಲಿ ಘಾಟ್ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಇರಲಿದೆ. ಒಂದು ವೇಳೆ ಗೊಂದಲವಿದ್ದರೆ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಮಲೆನಾಡು ಬಸ್ ಸೇವೆಗಳನ್ನು ಬಳಸಿಕೊಳ್ಳಿ ಹಾಗೂ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿ. ಪ್ರಯಾಣಿಸುವ ಮುನ್ನ ವಯನಾಡ್ ಪೋಲಿಸ್ ಮತ್ತು ಕಲೆಕ್ಟರ್ ಅವರ ಅಧಿಕೃತ ಸಾಮಾಜಿಕ ಜಾಲತಾಣಗಳ ಲೈವ್ ಸೂಚನೆಗಳನ್ನು ಗಮನಿಸಿ; ಹೊರಡುವ ಮುನ್ನ ‘ಇಲ್ಲಿ ಪರಿಶೀಲಿಸಿ’ ಕ್ಲಿಕ್ ಮಾಡಿ ಮಾಹಿತಿ ಪಡೆಯಿರಿ. ಪ್ರಯಾಣಕ್ಕೆ ಕಡ್ಡಾಯವಾಗಿ ನೀರು, ಇಂಧನ ಮತ್ತು ಆಫ್ಲೈನ್ ಮ್ಯಾಪ್ಗಳನ್ನು ಜೊತೆಯಲ್ಲಿಟ್ಟುಕೊಳ್ಳಿ.


Click it and Unblock the Notifications















