ರಾಮಾಯಣದಲ್ಲಿ ಉಲ್ಲೇಖಿಸಿರುವಂತೆ ಮೇಘನಾದನ ಜತೆ ಯುದ್ಧ ಮಾಡುತ್ತಿದ್ದಾಗ ಶ್ರೀರಾಮನ ಸೋದರ ಲಕ್ಷ್ಮಣ ಗಾಯಗೊಂಡು ಪ್ರಜ್ಞೆ ತಪ್ಪುತ್ತಾನೆ. ಆತನ ಚಿಕಿತ್ಸೆಗೆ ಸಂಜೀವಿನಿ ಗಿಡ ಬೇಕೆಂದು ಹೇಳಿದಾಗ ಹಿಮಾಲಯಕ್ಕೆ ತೆರಳಿದ ಹನುಮಂತ ಸಂಪೂರ್ಣ ಪರ್ವತವನ್ನು ಕಿತ್ತುಕೊಂಡು ಬರುವಾಗ ಅದರ ಒಂದು ಭಾಗವು ಅಯೋಧ್ಯಾದಲ್ಲಿ ಬೀಳುತ್ತದೆ. ಇದನ್ನೇ ಮಣಿ ಪರ್ಬತ್ ಎನ್ನುತ್ತಾರೆ. ಇದು ಸುಗ್ರೀವ ಪರ್ಬತ್ ಗೆ ಹತ್ತಿರದಲ್ಲಿದೆ.
ಮಣಿ ಪರ್ಬತ್ 65 ಅಡಿ ಎತ್ತರವಿದೆ. ಈ ಪರ್ವತವು ದೇವಸ್ಥಾನಗಳಿಗೆ ತವರಾಗಿದೆ. ಮಣಿ ಪರ್ಬತ್ ನ ತುತ್ತತುದಿಯಲ್ಲಿ ಹೋಗಿ ನಿಂತರೆ ಅಯೋಧ್ಯಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಆಕರ್ಷಕ ನೋಟ ನೋಡಬಹುದು.
ಭಗವಾನ್ ಬುದ್ಧ ಆರು ವರ್ಷಗಳ ಕಾಲ ಅಯೋಧ್ಯಾದಲ್ಲಿ ನೆಲೆಸಿದ್ದಾಗ ಮಣಿ ಪರ್ಬತ್ ನಿಂದ ಧರ್ಮದ ನಿಯಮಗಳ ಬಗ್ಗೆ ಧರ್ಮೋಪದೇಶ ನೀಡುತ್ತಿದ್ದರು. ಅಶೋಕ ಚಕ್ರವರ್ತಿ ಕಾಲದಲ್ಲಿ ನಿರ್ಮಿಸಲಾಗಿರುವ ಸ್ತೂಪವೂ ಈ ಪರ್ಬತ್ ನಲ್ಲಿದೆ. ಪುರಾತನ ಬೌದ್ಧ ಕೇಂದ್ರವೂ ಇದರ ಹತ್ತಿರದಲ್ಲೇ ಇದೆ. ಪರ್ಬತ್ ನ ತಳಭಾಗದಲ್ಲಿ ಮುಸ್ಲಿಮರ ಸ್ಮಶಾನವೂ ಇದೆ.