ವಸಿಷ್ಠ ಆಶ್ರಮವು ಗವಹಾಟಿಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಈ ಆಶ್ರಮವು 18 ನೇಯ ಶತಮಾನದ ಮಧ್ಯಾರ್ಧದಲ್ಲಿ ಅಹೋಮ ದೊರೆಯಾದ ರಾಜ ರಾಜೇಶ್ವರನಿಂದ ನಿರ್ಮಿಸಲ್ಪಟ್ಟಿದೆ. ಸಂಧ್ಯಾ, ಕಾಂತಾ ಹಾಗು ಲಲಿತಾ ಎಂಬ ಮೂರು ನದಿಗಳು ಸಂಗಮ ಹೊಂದುವ ಸ್ಥಳದಲ್ಲಿ ಇದರ ನಿರ್ಮಾಣವಾಗಿದೆ.
ಪ್ರಸಿದ್ಧ ನಂಬಿಕೆಯ ಪ್ರಕಾರ, ಈ ಆಶ್ರಮದ ಬದಿಯಲ್ಲಿ ಹರಿದಿರುವ ನದಿಯಲ್ಲಿ ಸ್ನಾನ ಮಾಡಿದರೆ ಅಥವಾ ಮುಳುಗೆದ್ದರೆ ಎಲ್ಲ ಪಾಪಕರ್ಮಗಳು ತೊಳೆದು ಹೋಗುತ್ತವೆ. ಈ ಆಶ್ರಮವು ವಸಿಷ್ಠ ಮಹಾಮುನಿಗಳಿಗೂ ಸಂಬಂಧಿಸಿದೆ ಎಂಬುದು ಮತ್ತೊಂದು ನಂಬಿಕೆ. ಈ ಮುನಿಗಳ ಆಶಿರ್ವಾದದಿಂದಲೆ ಒಬ್ಬ ರಾಕ್ಷಸಿಯ ಮಗ ಮುಂದೆ ಈ ಪ್ರಾಂತ್ಯಕ್ಕೆ ರಾಜನಾಗಿ ಶತಮಾನಗಳವರೆಗೆ ಆಳಿದ ಎಂದು ಹೇಳಲಾಗುತ್ತದೆ.
ಇದೊಂದು ಪ್ರಕೃತಿ ಸೌಂದರ್ಯವನ್ನು ಹೊತ್ತು ನಿಂತ ಸುಂದರವಾದ ತಾಣವಾಗಿರುವುದರಿಂದ ಇಲ್ಲಿನ ಭೇಟಿಯು ಸದಾ ಸ್ಮರಣೆಯಲ್ಲಿರುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ.