ಖಮ್ಮಂನಿಂದ 80 ಕಿ.ಮೀ. ದೂರದಲ್ಲಿದೆ ಈ ಜಮಾಲಪುರಂ ದೇವಸ್ಥಾನ. ಈ ದೇವಾಲಯವು ಖಮ್ಮಂ ಚಿನ್ನಾ ತಿರುಪತಿ ದೇವಸ್ಥಾನ ಅಂತಲೇ ಹೆಚ್ಚಾಗಿ ಜನಪ್ರಿಯವಾಗಿದೆ. ವಿಜಯನಗರ ರಾಜರಾದ ರಾಜಾ ಶ್ರೀ ಕೃಷ್ಣದೇವರಾಯರು ದೇವಾಲಯದ ನಿರ್ಮಾಣ ಕಾರ್ಯ ಮಾಡಿದ್ದಾರೆ. ಇದಾಗಿ ಶತಮಾನಗಳೇ ಸಂದು ಹೋಗಿವೆ. ಇದು ವೆಂಕಟೇಶ್ವರ ದೇವರ ಆಲಯವಾಗಿದೆ. ಹಿಂದು ಸಂಪ್ರದಾಯದಲ್ಲಿ ಹಲವು ಧಾರ್ಮಿಕ ನಂಬಿಕೆಯನ್ನು ಉಳಿಸಿಕೊಂಡಿದೆ.
ಸುಮಾರು ಸಾವಿರ ವರ್ಷದಿಂದ ಹಿಂದು ಭಕ್ತರು ಈ ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದಾರೆ ಮತ್ತು ಭೇಟಿ ನೀಡುತ್ತಾರೆ. ದೇವಾಲಯ ಶನಿವಾರದಂದು ಭಕ್ತರಿಂದ ಕಿಕ್ಕಿರಿದಿರುತ್ತದೆ. ಏಕೆಂದರೆ ಈ ದಿನ ದೇವಾಲಯದಲ್ಲಿ ಪೂಜೆ, ಪ್ರಾರ್ಥನೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮ ನಡೆಯುವುದು ಹೆಚ್ಚು. ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಅನೇಕ ಭಕ್ತರು ಇಲ್ಲಿಗೆ ಬರುತ್ತಾರೆ. ಅವರು ಬೇಡಿಕೊಂಡದ್ದು ಈಡೇರುತ್ತದೆ ಎಂಬುದು ಭಕ್ತರ ಅಚಲ ನಂಬಿಕೆಯಾಗಿದೆ.
ಈ ದೇವಾಲಯಕ್ಕೆ ಅತ್ಯಂತ ಸಮೀಪದಲ್ಲೇ ಸೂಚಿ ಗುಡ್ಡ ಎಂದು ಕರೆಯಲಾಗುವ ಒಂದು ಬೆಟ್ಟವಿದೆ. ಜಬಲಿ ಮಹರ್ಷಿಗೆ ಸಂಬಂಧಿಸಿದ ಈ ಗುಡ್ಡವು ಪುರಾಣದಲ್ಲೂ ಉಲ್ಲೇಖಿತಗೊಂಡಿದೆ. ಇಲ್ಲಿಯೆ ಮಹರ್ಷಿಯು ಘೋರ ತಪಸ್ಸು ಮಾಡಿದ್ದ ಎಂದು ಪುರಾಣ ಹೇಳುತ್ತದೆ. ಇವರ ತಪಸ್ಸಿಗೆ ವೆಂಕಟೇಶ್ವರ ಸ್ವಾಮಿ ಮೆಚ್ಚಿ ಪ್ರತ್ಯಕ್ಷನಾಗಿ ಮಹರ್ಷಿಗೆ ಆಶೀರ್ವದಿಸಿದ್ದಾನೆ ಎಂಬುದು ಪ್ರತೀತಿ.